ಶ್ರೀನಿಧಿ ಬರೆದ ಪತ್ರವನ್ನು ರಾಮಣ್ಣ ಮೇಷ್ಟರು ನಾಲ್ಕನೇ ಸಾರಿ ಓದಿದರು. ಅದರ ಜೊತೆಗೇ ಆತ ಕಥಾಸಂಕಲನದ ಕರಡು ಪ್ರತಿಯನ್ನೂ ಕಳಿಸಿಕೊಟ್ಟಿದ್ದ. ತನ್ನ ಕೈಯಲ್ಲಿ ಪೆಟ್ಟು ತಿಂದೂ ನಗುತ್ತಿದ್ದ ಶ್ರೀನಿಧಿ ಕಣ್ಮುಂದೆ ಬಂದ. ಅವನನ್ನು ನೋಡಿ ಇಪ್ಪತ್ತು ವರುಷವಾದರೂ ಆಗಿರಬೇಕು. ತಾನು ಅವನಿಗೆ ಪಾಠ ಹೇಳಿದ್ದು ಎಂಟನೇ ತರಗತಿಯಲ್ಲಿ. ಆಗ ಶ್ರೀನಿಧಿ ಮಹಾ ತಂಟೆಕೋರ ಹುಡುಗನಾಗಿದ್ದ. ಕ್ಲಾಸಿಗೂ ಸರಿಯಾಗಿ ಬರುತ್ತಿರಲಿಲ್ಲ. ಜೂನಿಯರ್ ಕಾಲೇಜಲ್ಲಿ ವಾರ್ಷಿಕೋತ್ಸವದ ದಿನ ನಡೆದ ಗಲಾಟೆಯಲ್ಲಿ ಅವನೂ ಭಾಗಿಯಾಗಿದ್ದನಲ್ಲವೇ ಎಂದು ರಾಮಣ್ಣ ನೆನಪಿಸಿಕೊಳ್ಳಲು ಯತ್ನಿಸಿದರು.
ಹೇಗಿದ್ದ ಹುಡುಗ ಹೇಗಾದ ಅಂತ ರಾಮಣ್ಣ ಮೇಷ್ಟರಿಗೆ ಖುಷಿಯಾಯಿತು. ತಮ್ಮ ವಿದ್ಯಾರ್ಥಿಗಳ ಪೈಕಿ ಸಾಧನೆ ಮಾಡಿದವನು ಅವನೊಬ್ಬನೇ ಇರಬೇಕು. ಅಂತೂ ದೊಡ್ಡ ಹೆಸರು ಮಾಡಿದ್ದಾನೆ. ಅದಕ್ಕಿಂತ ಹೆಚ್ಚಾಗಿ ತನ್ನನ್ನಿನ್ನೂ ಮರೆತಿಲ್ಲ ಎಂದು ರಾಮಣ್ಣ ಮೇಷ್ಟರು ಕೃತಜ್ಞರಾದರು. ತಕ್ಷಣವೇ ಶ್ರೀನಿಧಿಗೊಂದು ಪತ್ರ ಬರೆದು ತಮ್ಮ ಸಮ್ಮತಿಯನ್ನೂ ಸೂಚಿಸಿದರು.
ರಾಮಣ್ಣ ಮೇಷ್ಟರು ಅದೇ ಮೊದಲ ಬಾರಿಗೆ ಕಥಾಸಂಕಲನವೊಂದನ್ನು ಬಿಡುಗಡೆ ಮಾಡುವವರಿದ್ದರು. ಅವರು ಜೂನಿಯರ್ ಕಾಲೇಜಿನಲ್ಲಿದ್ದಾಗ ಕೂಡ ಅವರನ್ನು ಯಾರೂ ಪುಸ್ತಕ ಬಿಡುಗಡೆಯಂಥ ಸಮಾರಂಭಗಳಿಗೆ ಆಹ್ವಾನಿಸಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಲಯನ್ಸ್ ಕ್ಲಬ್ಬಿನವರೋ, ಯುವಕಸಂಘದವರೋ ಅವರನ್ನು ಚಿತ್ರಬಿಡಿಸುವ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭಕ್ಕೆ ಕರೆಸಿದ್ದು ಬಿಟ್ಟರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡದ್ದೇ ಇಲ್ಲ.
ನಿವೃತ್ತನಾಗಿ ಹನ್ನೆರಡು ವರುಷಗಳ ನಂತರ ಇದ್ದಕ್ಕಿದ್ದ ಹಾಗೆ ಒದಗಿಬಂದ ಅವಕಾಶದಿಂದ ರಾಮಣ್ಣ ಮೇಷ್ಟರಿಗೆ ರೋಮಾಂಚನವಾಯಿತು. ಶ್ರೀನಿಧಿಯ ಕಥಾಸಂಕಲನದ ಬಗ್ಗೆ ಸುದೀರ್ಘವಾಗಿ ಮಾತನಾಡಬೇಕು ಅಂದುಕೊಂಡರು. ಕ್ಯಾಲೆಂಡರ್ ತೆಗೆದು, ಸಮಾರಂಭಕ್ಕೆ ಎಷ್ಟು ದಿನ ಉಳಿದಿದೆ ಎಂದು ಲೆಕ್ಕಹಾಕಿದರು. ಪರೀಕ್ಷೆಗೆ ಸಿದ್ಧನಾಗುವ ಒಳ್ಳೆಯ ವಿದ್ಯಾರ್ಥಿಯ ಹಾಗೆ ಗಂಡ ಮಾಡಿಕೊಳ್ಳುತ್ತಿರುವ ಸಿದ್ಧತೆ ನೋಡಿ, ಸೀತಾಲಕ್ಷ್ಮಿಗೆ ಆಶ್ಚರ್ಯವಾಯಿತು.
ಶ್ರೀನಿಧಿಯ ಕತೆಗಳು ಅವರು ಓದಿದ ಯಾವ ಕತೆಗಳ ಹಾಗೂ ಇರಲಿಲ್ಲ. ಕೆಲವು ಕತೆಗಳಲ್ಲಿ ಪಾತ್ರಗಳೇ ಇರಲಿಲ್ಲ. ಕೆಲವು ಕತೆಗಳಲ್ಲಿ ಘಟನೆಗಳೇ ಇರಲಿಲ್ಲ. ಕೊನೆಯ ಕತೆಯಂತೂ ಎಷ್ಟು ಸಾರಿ ಓದಿದರೂ ಅವರಿಗೆ ಒಂದಿಷ್ಟು ಅರ್ಥವಾಗಲಿಲ್ಲ. ಆ ಕತೆಯ ಶೀರ್ಷಿಕೆ ‘ವಿಕ್ಷಿಪ್ತ’ಕ್ಕೂ ಕತೆಗೂ ಸಂಬಂಧವೇನು ಅನ್ನುವುದು ಅವರಿಗೆ ಹೊಳೆಯಲೇ ಇಲ್ಲ.
ಶ್ರೀನಿಧಿ ಇದನ್ನು ತನಗೆ ಕೊಟ್ಟು ತನ್ನನ್ನು ಪರೀಕ್ಷೆ ಮಾಡುತ್ತಿದ್ದಾನೇನೋ ಅನ್ನುವ ಅನುಮಾನವೂ ಅವರಿಗೆ ಬಂತು. ಕತೆಗಳ ಬಗ್ಗೆ ಮಾತನಾಡದೇ, ಶ್ರೀನಿಧಿಯ ಕುರಿತು ನಾಲ್ಕು ಮಾತು ಹೇಳಿ ಹರಸಿ ಬರುವುದೇ ಸರಿ. ಒಳ್ಳೆಯ ಕತೆ ಬರೆದಿದ್ದಾನೆ ಎಂದು ಹೇಳಿ, ನಾಲ್ಕೈದು ಕತೆಗಳ ಹೆಸರುಗಳನ್ನು ಉದಾಹರಿಸಿ ಬಂದರೆ ಸಾಕು ಎಂದು ಮನಸ್ಸಿನಲ್ಲೇ ಅಂದುಕೊಂಡು ರಾಮಣ್ಣ ಮೇಷ್ಟರು ನಿಸೂರಾದರು.
ಅವರ ನೆಮ್ಮದಿ ತುಂಬ ಕಾಲ ಬಾಳಿಕೆ ಬರಲಿಲ್ಲ. ಮಾರನೇ ದಿನವೇ ಪೋಸ್ಟ್ ಮ್ಯಾನ್ ದುಗ್ಗಪ್ಪ ರಾಮಣ್ಣನ ಹೆಸರಿಗೆ ಬಂದ ಪೋಸ್ಟ್ ತಂದುಕೊಟ್ಟ. ಅದರಲ್ಲಿ ಶ್ರೀನಿಧಿ ಕಳಿಸಿದ ಕವರ್ರೂ ಒಂದಿತ್ತು. ಅದನ್ನು ರಾಮಣ್ಣ ಮೇಷ್ಟರು ಪ್ರೀತಿಯಿಂದ ಸಾವಕಾಶ ಬಿಡಿಸಿ ಓದಿಕೊಂಡರು. ಅದರಲ್ಲಿದ್ದ ವಿವರಗಳ ಪೈಕಿ ಅವರನ್ನು ಕಂಗೆಡೆಸಿದ್ದು ಒಂದೇ ಒಂದು ಸಾಲು. ಕೃತಿ ಬಿಡುಗಡೆ: ಡಾ. ಪರಶಿವಮೂರ್ತಿ. ಖ್ಯಾತ ಸಾಹಿತಿ. ಕೃತಿಯ ಬಗ್ಗೆ ಮಾತು: ಮೇಲಂತಬೆಟ್ಟು ರಾಮಣ್ಣ, ನಿವೃತ್ತ ಶಿಕ್ಷಕ.
ಶ್ರೀನಿಧಿಯ ಕತೆಗಳನ್ನು ಓದಿ ಅರ್ಥಮಾಡಿಕೊಂಡು, ಘನತೆಯಿಂದ ಮಾತಾಡದೇ ಬೇರೆ ದಾರಿಯಿಲ್ಲ ಅನ್ನುವುದು ರಾಮಣ್ಣ ಮೇಷ್ಟರಿಗೆ ಖಾತ್ರಿಯಾಯಿತು. ಆವತ್ತಿಡೀ ಕುಳಿತುಕೊಂಡು ಆ ಕತೆಗಳನ್ನು ಮತ್ತೊಮ್ಮೆ ಓದಿದರು. ಅವುಗಳ ಒಳಾರ್ಥಗಳನ್ನು ಗ್ರಹಿಸುವ ಪ್ರಯತ್ನ ಮಾಡಿದರು. ಎಷ್ಟೇ ಪ್ರಯತ್ನ ಮಾಡಿದರೂ ಆ ಕತೆಗಳು ಅವರೊಳಗೆ ಇಳಿಯುತ್ತಲೇ ಇರಲಿಲ್ಲ.
ಆಗ ಅವರಿಗೆ ನೆನಪಾದದ್ದು ಮಂಗಳೂರು ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದ ಕೆ. ಟಿ. ಮಾಧವ. ಆತ ಸಣ್ಣಕತೆಗಳ ಬಗ್ಗೆ ರೀಸರ್ಚ್ ಮಾಡಿ ಡಾಕ್ಟರೇಟ್ ತಗೊಂಡಿದ್ದ ಎನ್ನುವುದನ್ನು ರಾಮಣ್ಣ ಪತ್ರಿಕೆಗಳಲ್ಲಿ ಓದಿದ್ದರು. ಹೀಗಾಗಿ ಅವನ ಹತ್ತಿರ ಮಾತಾಡುವುದೇ ಸರಿ ಎಂದುಕೊಂಡು ರಾಮಣ್ಣ ಮೇಷ್ಟರು ಮಾರನೇ ದಿನ ಹೋಗಿ ಅವನನ್ನು ಭೇಟಿಯಾದರು.
ಶ್ರೀನಿಧಿಯ ಕತೆಗಳನ್ನು ಅವನಿಗೆ ತೋರಿಸುವುದಕ್ಕೆ ಹೋಗಲಿಲ್ಲ ರಾಮಣ್ಣ. ಬದಲಾಗಿ ಈಗಿನವರ ಕತೆಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ ಎಂಬ ಪೀಠಿಕೆಯೊಂದಿಗೆ ಅವರು ಮಾತು ಶುರುಮಾಡಿದರು. ಒಂದಷ್ಟು ಕತೆಗಳ ಬಗ್ಗೆ ಏನಾದರೂ ಬರೆಯೋಣ ಅಂದುಕೊಂಡಿದ್ದೆ ಎಂದರು. ಮಾಧವ ಅದಕ್ಕೆ ನನ್ನ ಡಾಕ್ಟರೇಟ್ ಗ್ರಂಥ ಸಹಾಯ ಮಾಡುತ್ತದೆ ನೋಡಿ ರಾಮಣ್ಣ ಎಂದು ಹೇಳಿ, ನಾನ್ನೂರೈವತ್ತು ರುಪಾಯಿ ತೆಗೆದುಕೊಂಡು ಆರುನೂರೈವತ್ತು ಪುಟಗಳ ಮಹಾಪ್ರಬಂಧವನ್ನು ಅವರ ಕೈಗಿಟ್ಟ.
ಒಪ್ಪಿಕೊಂಡದ್ದನ್ನು ನಿರಾಕರಿಸುವ ಹಾಗೂ ಇರಲಿಲ್ಲ. ಆರೋಗ್ಯ ಸರಿಯಿಲ್ಲ ಎಂದು ಸುಳ್ಳು ಹೇಳಿ ಹೋಗದೆ ಉಳಿದರೆ ಹೇಗೆ ಎಂಬ ಯೋಚನೆ ಬಂತು. ಅದೇ ಸರಿ ಅಂದುಕೊಂಡು ಮೇಷ್ಟರು ಶ್ರೀನಿಧಿಯ ಕಥಾಸಂಕಲನವನ್ನು ಎತ್ತಿ ಪಕ್ಕಕ್ಕಿಟ್ಟು ದೊಡ್ಡದೊಂದು ಬಿಡುಗಡೆ ಸಿಕ್ಕ ಆನಂದ ಅನುಭವಿಸಿದರು.
ಆದರೆ, ಆ ಆನಂದವನ್ನೂ ಅನುಭವಿಸುವುದಕ್ಕೆ ಅವರಿಗೆ ಶ್ರೀನಿಧಿ ಅವಕಾಶ ಕೊಡಲಿಲ್ಲ. ಉಪ್ಪಿನಂಗಡಿಯಿಂದ ರಾಮಣ್ಣ ಮೇಷ್ಟರನ್ನು ಕರೆದುಕೊಂಡು ಬರಬೇಕು ಅಂತ ಶ್ರೀನಿಧಿ, ಗೆಳೆಯ ಮೃತ್ಯುಂಜಯನಿಗೆ ಹೇಳಿದ್ದ. ಮೃತ್ಯುಂಜಯ ಹತ್ತನೇ ತಾರೀಖಿನಂದೇ ರಾಮಣ್ಣ ಮೇಷ್ಟ್ರ ಮನೆಗೆ ಹೋಗಿ ಹನ್ನೊಂದನೇ ತಾರೀಖು ಹತ್ತು ಗಂಟೆಗೆ ರೆಡಿಯಿರಿ ಮೇಷ್ಟ್ರೇ. ನಾನೇ ಕರೆದುಕೊಂಡು ಹೋಗುತ್ತೇನೆ. ಏಸಿ ಕಾರಲ್ಲಿ ಹೋಗೋಣ. ನಿಮಗೆ ಒಂದಿಷ್ಟೂ ಸುಸ್ತಾಗೋದಿಲ್ಲ. ಮಡಿಕೇರಿ ಮೇಲೆ ಹೋಗೋಣ. ಸಣ್ಣ ಘಾಟಿ ಅಂತ ಹೇಳಿ ಅವರನ್ನು ಕಂಗಾಲು ಮಾಡಿದ.
ಅವನು ಹೋದ ಕ್ಷಣದಿಂದ ಮೇಷ್ಟರು ನಿದ್ದೆ ಮಾಡಲಿಲ್ಲ. ಶ್ರೀನಿಧಿಯ ಕಥಾಸಂಕಲನವನ್ನು ಕಣ್ಣಲ್ಲಿ ಕಣ್ಣಿಟ್ಟು ಅಕ್ಷರಕ್ಷರ ಬಿಡಿಸಿ ಓದಿದರು. ಒಂದೊಂದು ಪದವನ್ನು ಹತ್ತು ಹತ್ತು ಸಲ ಓದಿ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿದರು. ಓದುತ್ತಲೇ, ತಾವು ಕನ್ನಡ ಸಣ್ಣಕಥಾ ಪ್ರಪಂಚದ ಕುರಿತು ಓದಿದ ಲೇಖನಗಳನ್ನು ಮನಸ್ಸಿಗೆ ತಂದುಕೊಂಡು ಟಿಪ್ಪಣಿ ಮಾಡಿಕೊಳ್ಳತೊಡಗಿದರು. ಜುಲೈ ಹತ್ತರ ರಾತ್ರಿ ಆ ಟಿಪ್ಪಣಿಯನ್ನು ಮುಂದಿಟ್ಟುಕೊಂಡು ಭಾಷಣ ಬರೆಯಲು ಕುಳಿತರು.
ಶ್ರೀನಿಧಿಯ ಕತೆಗಳಲ್ಲಿ ಅವರಿಗೆ ಅಲ್ಪಸ್ವಲ್ಪ ಅರ್ಥವಾದದ್ದು ಮಹಾಪ್ರಸ್ಥಾನ ಎಂಬ ಕತೆ. ನಲುವತ್ತನೇ ವಯಸ್ಸಿಗೆ ಮದುವೆಯಾಗುವ ಧೀರೇಂದ್ರನನ್ನು ಅವನ ಗೆಳೆಯರು ಇಪ್ಪತ್ಮೂರು ವರುಷದ ಹುಡುಗಿಯ ಜೊತ ಏಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಗೇಲಿ ಮಾಡುತ್ತಾರೆ. ಹಂತಹಂತವಾಗಿ ಹೇಗೆ ಆತ ವಿಫಲನಾಗುತ್ತಾ ಹೋಗುತ್ತಾನೆ ಎನ್ನುವುದನ್ನು ಹೇಳಿ ಅವನನ್ನು ಕಂಗಾಲಾಗಿಸುತ್ತಾರೆ. ಪ್ರಸ್ತದ ದಿನ ಅವನ ಉದ್ವೇಗ, ಆತಂಕ ಮಿತಿಮೀರುತ್ತದೆ. ಆಕೆ ಕೋಣೆಯ ಬಾಗಿಲು ತೆರೆಯುತ್ತಾಳೆ. ಒಳಗೆ ಬರುತ್ತಾಳೆ. ಮಲಗಿರುವ ಧೀರೇಂದ್ರನನ್ನು ಮುಟ್ಟುತ್ತಾಳೆ. ಧೀರೇಂದ್ರನ ಮೈ ಹಾವಿನ ಮೈಯಂತೆ ತಣ್ಣಗಿರುತ್ತದೆ.
ಅದನ್ನು ಮುಖ್ಯವಾಗಿಟ್ಟುಕೊಂಡು ಮಾತು ಆರಂಭಿಸಬೇಕು ಎಂದುಕೊಂಡು ರಾಮಣ್ಣ ಮೇಷ್ಟರು ಹದಿನೈದು ಪುಟಗಳ ಭಾಷಣ ಬರೆದೇ ಬರೆದರು. ಅದನ್ನು ತಾವೇ ಒಮ್ಮೆ ಓದಿದರು. ಓದಿ, ತನ್ನನ್ನು ಕರೆದೊಯ್ಯಲು ಬರಲಿರುವ ಮೃತ್ಯುಂಜಯನ ಕಾರಿಗೆ ಕಾಯುತ್ತಾ ಕೂತರು.
ಕಥಾಸಂಕಲನ ಬಿಡುಗಡೆ ಮಾಡಲು ಬಂದಿದ್ದ ಪರಶಿವಮೂರ್ತಿ ಕಣ್ಣೊರೆಸಿಕೊಂಡು ಕೈಯನ್ನು ಮುಂದಕ್ಕೆ ಕಟ್ಟಿ ವಿಷಾದದ ಪರಾಕಾಷ್ಠೆ ತಲುಪಿದವರಂತೆ ಸ್ತಬ್ಧರಾಗಿ ನಿಂತರು. ಸಭಿಕರೂ ಎದ್ದುನಿಂತರು.








