Tuesday, March 25, 2008

ಒಂದು ಹಳೇ ಕತೆ, ಅಕಾಲ ಮಳೆ ಜೊತೆ

ನಮ್ಮೂರಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಧರೆಯ ಮೇಲೆ ಮುಸಲಧಾರೆ.
ಹೀಗೆ ಬರೆದು ಯೋಚಿಸಿದೆ. ಕುಂಭದ್ರೋಣ ಅಂದರೆ ಕುಂಭ(ಕೊಡ)ದಿಂದ ದ್ರೋಣ(ದೊನ್ನೆ)ಕ್ಕೆ ನೀರು ಸುರಿದಂತೆ ಮಳೆ. ಮುಸಲ ಅಂದರೆ ಒನಕೆ. ಒನಕೆಯಿಂದ ಕುಟ್ಟಿದಷ್ಟು ದೊಡ್ಡ ಹನಿಗಳು. ಅರ್ಥವಾಗುವುದು ಕಷ್ಟ. ಇಡೀ ನುಡಿಗಟ್ಟು ಬಳಕೆಯಿಂದ ಅರ್ಥ ಪಡೆದುಕೊಂಡಿರಬಹುದು. ಕೇಳಿ ಕೇಳಿ ಸುಮಾರಾಗಿ ಗ್ರಹಿಸಬಹುದು. ನಮ್ಮ ಪತ್ರಿಕೆಗಳು ಕೂಡ ಹೀಗೆ ಬರೆಯುವುದನ್ನು ನಿಲ್ಲಿಸಿವೆ.
ಇಂಥ ಅಕಾಲ ಮಳೆಯ ಬಗ್ಗೆ ಗೆಳೆಯ ಕುಂಟಿನಿ- http://kuntini.blogspot.com/ ಒಂದು ಲೇಖನ ಬರೆದಿದ್ದಾನೆ. ಸೊಗಸಾಗಿದೆ.
ಈ ಮಧ್ಯೆ ನನಗೂ ಉದಯ ಮರಕಿಣಿಗೂ ಕಾಡ ಬೆಳದಿಂಗಳು ಚಿತ್ರದ ಸಂಭಾಷಣೆಗೊಂದು ಪ್ರಶಸ್ತಿ ಬಂತು. ಸುವರ್ಣ ವಾಹಿನಿಯ ಜನಪ್ರಿಯ ಪ್ರಶಸ್ತಿಗಳ ನಡುವೆ ಸಿಕ್ಕ ಪ್ರಶಸ್ತಿ ಅದು. ನಮ್ಮಿಬ್ಬರಿಗೂ ಸಿಕ್ಕಿದ್ದಕ್ಕೆ ಡಬಲ್ ಸಂತೋಷ.
ಇವೆಲ್ಲದರ ಜೊತೆಗೆ ಒಂದು ಹಳೆಯ ಕತೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಸಂದರ್ಶನ
ಅವನು ಹೇಳಿದ ಸಮಯಕ್ಕೆ ಸರಿಯಾಗಿ ಬಂದ. ಕುಳಿತುಕೋ ಎಂದು ಕುರ್ಚಿ ತೋರಿಸಿದೆ. ತನ್ನನ್ನು ಪರಿಚಯಿಸಿಕೊಂಡ. ತಾನು ಇಂತಿಂಥ ಪತ್ರಿಕೆಯ ವರದಿಗಾರ ಎಂದು ಹೇಳಿಕೊಂಡ. ಕೊನೆಗೆ `ನಾನು ನಿಮ್ಮನ್ನು ಸಂದರ್ಶಿಸಲಿಕ್ಕೆ ಬಂದಿದ್ದೇನೆ' ಎಂದ.
ಯಾಕೆ?
`ಸಂದರ್ಶನಕ್ಕೆ'
`ಸರಿ... ಸರಿ... ತಿಳೀತು' ಎಂದೆ. ಆಗ ಸಂದರ್ಶನ ನೀಡುವ ಮನಸ್ಥಿತಿಯಲ್ಲಿ ನಾನಿರಲಿಲ್ಲ. ಏನೋ ಬೇಸರ. ಯಾಕೋ ದಣಿವು. ಮಾತಾಡುವುದೇ ಬೇಡ ಅನ್ನಿಸುವಂಥ ಸ್ಥಿತಿ. ಸೀದಾ ಎದ್ದು ನನ್ನ ಪುಸ್ತಕದ ಶೆಲ್ಫಿನ ಹತ್ತಿರ ಹೋದೆ. ಒಂದೆರಡು ನಿಮಿಷ ಯಾವುದೋ ಪುಸ್ತಕವನ್ನು ತೆರೆದಂತೆ ನಟಿಸಿದೆ. ಅಲ್ಲಿ ಆ ಸಂದರ್ಶಕ ಕೂತಿದ್ದಾನೆ ಅನ್ನುವುದು ನೆನಪಾಯಿತು.
`ಅದರ ಸ್ಪೆಲಿಂ್ ಹೇಗೆ?' ಕೇಳಿದೆ.
`ಯಾವುದರದ್ದು?' ಆತ ನಿರಾಸಕ್ತಿಯಿಂದ ಮರುಪ್ರಶ್ನೆ ಹಾಕಿದ. `ಅದೇ ಇಂಟರ್ ವ್ಯೂ ಅಂದ್ರಲ್ಲ?'.
ಅವನಿಗೆ ಕೊಂಚ ಇರುಸುಮುರುಸು. `ಛೇ. ಅದನ್ನೆಲ್ಲ ಕಟ್ಟಿಕೊಂಡು ಏನು ಮಾಡುತ್ತೀರಿ.'
`ನಾನದನ್ನು ಕಟ್ಟಿಕೊಳ್ಳೋದಿಲ್ಲ. ಅದರ ಅರ್ಥ ಏನೂಂತ ಹುಡುಕಲು ಯತ್ನಿಸುತ್ತಿದ್ದೇನೆ' ಎಂದೆ.
`ಅದರ ಅರ್ಥ ಏನೂಂದ್ರೆ..... ಅದನ್ನೆಲ್ಲ ಹೇಳೋಕ್ಕಾಗಲ್ಲ'
`ಬೇಡ ಬಿಡಿ. ನೀವು ಹೇಳಿದ್ದು ನನಗೆ ಅರ್ಥವಾಯ್ತು' ನಾನೆಂದೆ. ಹೀಗೆ ನಮ್ಮ ಸಂದರ್ಶನ ಶುರುವಾಯಿತು. ಆತ ಮೊದಲೇ ಸ್ಪಷ್ಟಪಡಿಸಿದ; `ನಾನು ಎಲ್ಲರಂತೆ ಮಾಮೂಲಿ ಸಂದರ್ಶನ ಮಾಡೋಲ್ಲ. ನಾನು ಪ್ರಶ್ನೆ ಕೇಳೋದು, ನೀವು ಉತ್ತರ ಹೇಳೋದು ಹಳೇ ಶೈಲಿ. ನಾನು ಬೇರೆ ಥರ ಪ್ರಶ್ನೆ ಕೇಳ್ತಾ ಹೋಗ್ತೀನಿ. ನೀವು ಉತ್ತರಿಸುತ್ತಾ ಬನ್ನಿ'.
`ಒಳ್ಳೇದು' ನಾನೆಂದೆ. `ನನಗೂ ನೆನಪಿನ ಶಕ್ತಿ ಕಡಿಮೆ. ನನ್ನ ಮಾತಲ್ಲಿ, ಮನಸ್ಸಲ್ಲಿ ಒಮ್ಮೊಮ್ಮೆ ಕಾಲ ವೇಗವಾಗಿ ಜಿಗಿಯುತ್ತೆ, ವರುಷಗಳು ಕ್ಪಣಗಳಲ್ಲಿ ಉರುಳುತ್ತವೆ. ಒಮ್ಮೊಮ್ಮೆ ಒಂದು ದಿನ ಹತ್ತು ವರುಷದಷ್ಟು ಸುದೀರ್ಘವಾಗುತ್ತದೆ. ಪರವಾಗಿಲ್ಲ ತಾನೆ?'
`ಪರವಾಗಿಲ್ಲ ಸಾ್. ನೀವು ಏನು ಹೇಳಿದರೂ ನಡೀತದೆ' ಎಂಬ ಅವನ ಮಾತಿನೊಂದಿಗೆ ಸಂದರ್ಶನ ಶುರುವಾಯಿತು.
`ನಿಮ್ಮ ವಯಸ್ಸೆಷ್ಟು?'
`ಹತ್ತೊಂಬತ್ತು, ಜೂನಿನಲ್ಲಿ'
`ಹೌದಾ? ನಾನೆಲ್ಲೋ ಮೂವತ್ತಾರೋ ಮೂವತ್ತೆಂಟು ಇರಬೇಕು ಅಂದುಕೊಂಡಿದ್ದೆ. ನೀವು ಹುಟ್ಟಿದ್ದೆಲ್ಲಿ?'
`ಮೈಸೂರಲ್ಲಿ'
`ಬರೆಯೋಕೆ ಶುರುಮಾಡಿದ್ದು'
`1936ರಲ್ಲಿ'
`ಅದು ಹ್ಯಾಗೆ ಸಾಧ್ಯ? ನಿಮಗೀಗ ಹತ್ತೊಂಬತ್ತು ವರುಷ ಅಂತೀರಿ?'
`ಗೊತ್ತಿಲ್ಲ. ಆದ್ರೆ ತುಂಬ ಕುತೂಹಲಕಾರಿಯಾಗಿದೆ ಅಲ್ವೇ'
`ಹೋಗ್ಲಿ, ನಿಮ್ಮ ಮೇಲೆ ತುಂಬ ಪ್ರಭಾವ ಬೀರಿದ, ನೀವು ಭೆಟ್ಟಿಯಾದ ಸಾಹಿತಿ ಯಾರು?'
`ಗಳಗನಾಥರು'
`ನಿಮಗೆ ಹತ್ತೊಂಬತ್ತು ವರುಷ ಅನ್ನೋದೇ ನಿಜವಾಗಿದ್ದರೆ ನೀವು ಗಳಗನಾಥರನ್ನು ಭೆಟ್ಟಿಯಾಗಿದ್ದು ಸುಳ್ಳು'
`ಅಲ್ಲಯ್ಯಾ... ನನಗಿಂತ ಜಾಸ್ತಿ ನಿನಗೇ ಗೊತ್ತಿದ್ದರೆ ನನ್ನನ್ಯಾಕೆ ಕೇಳ್ತೀಯ?'
`ಹೋಗ್ಲಿ, ನೀವು ಗಳಗನಾಥರನ್ನು ಭೆಟ್ಟಿಯಾಗಿದ್ದು ಎಲ್ಲೀಂತ ಹೇಳ್ತೀರಾ?'
`ನಾನು ಅವರ ಶವಸಂಸ್ಕಾರಕ್ಕೆ ಹೋಗಿದ್ದೆ. ಯಾರ ಜೊತೆಗೋ ಮಾತಾಡುತ್ತಿದ್ದೆ. ಗಲಾಟೆ ಮಾಡಬೇಡ ಸುಮ್ಮನಿರು ಅಂತ ಗಳಗನಾಥರೇ ಹೇಳಿದರು'
`ಸಾ್. ಅವರ ಶವಸಂಸ್ಕಾರಕ್ಕೆ ಹೋಗಿದ್ದೆ ಅಂತೀರಿ. ಅಲ್ಲಿ ಗಳಗನಾಥರೇ ಸುಮ್ನಿರು ಅಂದರು ಅಂತೀರಿ. ಸತ್ತವರು ಹ್ಯಾಗ್ರೀ ಮಾತಾಡೋಕೆ ಸಾಧ್ಯ?'
`ಗೊತ್ತಿಲ್ಲ. ಗಳಗನಾಥರು ತುಂಬ ವಿಚಿತ್ರ ವ್ಯಕ್ತಿ'
`ಆದ್ರೂ.. ಸತ್ತಿದ್ರು ಅಂತೀರಿ, ನಿಮ್ಮ ಹತ್ರ ಮಾತಾಡಿದ್ರು ಅಂತೀರಿ!'
`ಅವರು ಸತ್ತಿದ್ರು ಅಂತ ನಾನು ಹೇಳಲಿಲ್ಲ'
`ಶವಸಂಸ್ಕಾರಕ್ಕೆ ಹೋಗಿದ್ದೆ ಅಂತ ನೀವೇ ತಾನೇ ಹೇಳಿದ್ದು?'
`ಶವಸಂಸ್ಕಾರಕ್ಕೆ ಹೋಗಿದ್ದೆ ಅಂದೆ. ಸತ್ತಿದ್ದೆ ಅನ್ನಲಿಲ್ಲ?'
`ಅಂದ್ರೆ ಅವರು ಸತ್ತಿರಲಿಲ್ಲವಾ?'
`ನಂಗೊತ್ತಿಲ್ಲ, ಕೆಲವರು ಸತ್ತಿದ್ದಾರೆ ಅಂತಿದ್ರು. ಕೆಲವರು ಅವರಿನ್ನೂ ಜೀವಂತವಾಗಿದ್ದಾರೆ ಅಂತಿದ್ರು'
`ನಿಮ್ಮ ಅಭಿಪ್ರಾಯ ಏನು?'
`ಅದು ನನಗೆ ಸಂಬಂಧವಿಲ್ಲದ ವಿಷಯ. ಯಾಕೆಂದರೆ ಅದೇನೂ ನನ್ನ ಶವಸಂಸ್ಕಾರ ಅಲ್ಲವಲ್ಲ. ಸುಮ್ನೆ ಯಾಕೆ ತಲೆಕೆಡಿಸಿಕೊಳ್ಳಲಿ?'
`ಅಯ್ಯೋ... ಇದರ ಬಗ್ಗೆ ನೀವಿನ್ನೇನು ಹೇಳಿದರೂ ನನ್ನ ತಲೆಕೆಡುತ್ತೆ. ಬೇರೆ ವಿಚಾರ ಮಾತಾಡೋಣ. ಸರೀನಾ? ನೀವು ಹುಟ್ಟಿದ್ದು ಯಾವ ವರುಷ?'
`ಭಾನುವಾರ, ಅಕ್ಟೋಬರ್ ಹನ್ನೊಂದು, 1870'
`ಸಾಧ್ಯವೇ ಇಲ್ಲ. ಹಾಗಿದ್ದರೆ ನಿಮಗೆ ನೂರಮೂವತ್ತನಾಲ್ಕು ವರುಷ ಆಗಬೇಕಿತ್ತು. ಏನು ಲೆಕ್ಕಾಚಾರ ನಿಮ್ಮದು?'
`ನಾನು ಲೆಕ್ಕ ಇಟ್ಟಿಲ್ಲ'
`ಮತ್ತೆ ಮೊದಲು ಹತ್ತೊಂಬತ್ತು ವರುಷ ಅಂದ್ರಿ. ಈಗ ನೂರಮೂವತ್ತ ನಾಲ್ಕು ಅಂತಿದ್ದೀರಿ. ಅದಕ್ಕೊಂದು ಲೆಕ್ಕ ಬೇಡವೇ?'
`ಕರೆಕಸರಿಯಾಗಿ ಗುರುತಿಸಿದಿರಿ ಕಣ್ರೀ. ಎಷ್ಟೋ ಸಾರಿ ನನಗೂ ಎಲ್ಲೋ ಲೆಕ್ಕ ತಪ್ಪಿದೆ ಅನ್ನಿಸ್ತಿತ್ತು. ಆದರೆ ಏನೂಂತ ಹೊಳೀತಿರಲಿಲ್ಲ. ನೀವು ಬಿಡಿ ಜಾಣರು. ಬಹಳ ಬೇಗ ಕಂಡುಹಿಡಿದುಬಿಟ್ರಿ'
`ಥ್ಯಾಂಕಆ ವಿಷಯ ಬಿಟ್ಟುಬಿಡೋಣ. ನಿಮಗೆ ಅಣ್ಣ, ತಮ್ಮ, ತಂಗಿ ಯಾರಾದ್ರೂ ಇದ್ರಾ?'
`ಮ್.... ಬಹುಶಃ .... ಬಹುತೇಕ.. ಇದ್ರೂಂತ ಕಾಣತ್ತೆ. ನೆನಪಿಲ್ಲ'
`ನೆನಪಿಲ್ಲ. ಇಂಥ ಉತ್ತರ ಎಲ್ಲೂ ಕೇಳಿಲ್ಲ ನಾನು. ಇದೆಂಥ ವಿಚಿತ್ರ ಉತ್ತರ ಕೊಡ್ತಿದ್ದೀರಿ?'
`ವಿಚಿತ್ರಾನ.... ಯಾಕೆ?'
`ಇನ್ನೇನ್ರೀ ಮತ್ತೆ. ಅಲ್ನೋಡಿ ಗೋಡೇ ಮೇಲೆ. ಯಾರದೋ ಫೊಟೋ ತೂಗುಹಾಕಿದ್ದೀರಿ. ನಿಮ್ಮ ಸೋದರ ಅಲ್ವೇ ಅದು?'
`ಹೌದ್ಹೌದು... ಮರೆತೇಬಿಟ್ಟಿದ್ದೆ ನೋಡಿ. ನನ್ನ ಸೋದರ ಅವನು. ರಾಮಮೂರ್ತಿ ಅಂತ. ಪಾಪ'
`ಪಾಪ ಯಾಕೆ? ಅವರೀಗ ಬದುಕಿಲ್ವಾ?'
`ಗೊತ್ತಿಲ್ಲ.... ಆ ಬಗ್ಗೆ ಹೇಳೋದು ಕಷ್ಟ. ಅದೊಂದು ನಿಗೂಢ ರಹಸ್ಯ'
`ಛೇ.. ಛೇ.. ತುಂಬ ಬೇಜಾರಿನ ವಿಚಾರ. ಅವರು ಮನೆಬಿಟ್ಟು ಓಡಿಹೋದ್ರಾ? ಕಣ್ಮರೆಯಾದ್ರಾ?'
`ಒಂಥರ ಕಣ್ಮರೆಯಾದ ಹಾಗೇನೇ? ನಾವು ಅವನನ್ನು ಸುಟ್ಟೆವು'
`ಸುಟ್ಟಿರಿ.... ಸತ್ತಿದ್ದಾನೋ ಬದುಕಿದ್ದಾನೋ ಗೊತ್ತಿಲ್ದೇನೇ ಸುಟ್ಟುಬಿಟ್ರಾ?'
`ಛೇ.. ಛೇ.. ಎಂಥ ಮಾತು ಆಡ್ತೀರಿ. ಅವನು ಹೆಚ್ಚಿನಂಶ ಸತ್ತುಹೋಗಿದ್ದ. ಆಮೇಲೆ ಸುಟ್ವಿ'
`ಒಂದ್ನಿಮಿಷ... ಅವನ್ನು ಸುಟ್ಟಿರಿ ಅಂದ ಮೇಲೆ ಅವನು ಸತ್ತಿದ್ದಾನೆ ಅಂತ ಖಾತ್ರಿಯಾಯ್ತು ಅಲ್ವಾ?
`ಹಾಗಂತ ಅಂದುಕೊಂಡಿದ್ದೆವು'
`ಅಂದ್ರೆ ಅವನು ಮತ್ತೆ ಬೂದಿಯಿಂದ ಎದ್ದು ಬಂದ್ನಾ?'
`ಛೇ.. ಛೇ.. ಎಲ್ಲಾದ್ರೂ ಉಂಟೆ. ಹಾಗೇನೂ ಆಗಿಲ್ಲ'.
`ಮತ್ತೆ ... ಅದರಲ್ಲೇನಿದೆ ನಿಗೂಢ ರಹಸ್ಯ. ಮಣ್ಣಾಂಗಟ್ಟಿ. ನಿಮ್ಮ ಸಹೋದರ ಸತ್ತ, ಅವನನ್ನು ಸುಟ್ಟಿರಿ. ಅಷ್ಟೇ. ಎಲ್ಲಾ ಕಡೆ ನಡೆಯೋದೂ ಇದೇ'
` ಇಲ್ಲ. ಇದರಲ್ಲೊಂದು ವೈಶಿಷ್ಟ್ಯ ಇದೆ. ನಾನೂ ನನ್ನ ಸೋದರನೂ ಅವಳಿ-ಜವಳಿ. ಒಬ್ಬ ರಾಮಮೂರ್ತಿ ಇನ್ನೊಬ್ಬ ಕೃಷ್ಣಮೂರ್ತಿ. ಚಿಕ್ಕಂದಿನಲ್ಲಿ ಬಚ್ಚಲಮನೇಲಿ ಸ್ನಾನಕ್ಕೆ ಮಲಗಿಸಿದ್ದಾಗ ಕೆಲಸದವಳ ತಪ್ಪಿನಿಂದಾಗಿ ಇಬ್ಬರೂ ಅದಲುಬದಲು ಆಗಿಬಿಟ್ವಿ. ನಮ್ಮಿಬ್ಬರಲ್ಲಿ ಒಬ್ಬ ಸತ್ತುಹೋದ. ಸತ್ತೋನು ರಾಮಮೂರ್ತಿನಾ ಕೃಷ್ಣಮೂರ್ತಿಯಾ ಅಂತ ಕರೆಕ್ಟಾಗಿ ಗೊತ್ತಿಲ್ಲ. ಕೆಲವರು ರಾಮಮೂರ್ತಿ ಅಂತಾರೆ, ಕೆಲವರು ನಾನು ಅಂತಾರೆ'.
`ವಿಚಿತ್ರವಾಗಿದೆ. ನಿಮಗೇನನ್ನಿಸುತ್ತೆ?'
`ದೇವರಿಗೇ ಗೊತ್ತು. ಜಗತ್ತೇ ತಿಳಕೊಳ್ಳಲಿ ಅಂತ ಬಿಟ್ಟಿದ್ದೇನೆ. ಈ ನಿಗೂಢ ರಹಸ್ಯ ನನ್ನ ಬದುಕನ್ನೇ ಬಾಧಿಸುತ್ತಿದೆ ಕಣ್ರೀ. ಒಂದು ರಹಸ್ಯ ಹೇಳ್ತೀನಿ ಕೇಳಿ. ಇದುವರೆಗೆ ಇದನ್ನು ನಾನು ಯಾರಿಗೂ ಹೇಳಿಲ್ಲ. ನಮ್ಮಿಬ್ಬರಲ್ಲಿ ಒಬ್ಬನ ಮೊಳಕೈಯ ಹತ್ರ ಒಂದು ದೊಡ್ಡ ಕಪ್ಪು ಮಚ್ಚೆ ಇತ್ತು. ಆ ಮಚ್ಚೆ ಇದ್ದೋನು ನಾನು. ಮಚ್ಚೆ ಇದ್ದೋನೇ ಸತ್ತು ಹೋಗಿದ್ದು'
`ಆಯ್ತಲ್ಲ. ಇನ್ನೇನಿದೆ ನಿಗೂಢ ರಹಸ್ಯ. ಬದುಕಿರೋರು ಯಾರು ಅಂತ ಗೊತ್ತಾಯ್ತಲ್ಲ?'
`ಸ್ವಲ್ಪ ಸುಮ್ನಿರ್ತೀರಾ? ಈಗ ನಮ್ಮೆಯೋರೆಲ್ಲ ಸತ್ತಿರೋದು ನಾನಲ್ಲ, ನಮ್ಮಣ್ಣ ಅಂದುಕೊಂಡಿದ್ದಾರೆ. ಅದು ಹ್ಯಾಗೆ ತಪ್ಪು ಮಾಡಿದ್ರೋ ಗೊತ್ತಿಲ್ಲ. ಆದರೆ ಎಲ್ಲರೂ ದುಃಖದಲ್ಲಿದ್ದಾರೆ. ಈಗ ನಿಜವಾಗಿಯೂ ನಾನು ಸತ್ತಿರೋದು ಅಂತ ಗೊತ್ತಾದ್ರೆ ಎಷ್ಟು ಬೇಜಾರಾಗೋಲ್ಲ ಹೇಳಿ ಅವರಿಗೆ. ಅದಕ್ಕೇ ನಾನೂ ಸುಮ್ನಿದ್ದೀನಿ. ಯಾರಿಗೂ ಹೇಳೋಕೇ ಹೋಗಲಿಲ್ಲ. ನೀವೂ ಇದನ್ನೆಲ್ಲ ಬರೀಬೇಡಿ ಪ್ಲೀಸ್'
`ಹೌದೆ.. ತುಂಬ ಸಂತೋಷ. ನನಗೆ ಸಂದರ್ಶನಕ್ಕೆ ಬೇಕಾದಷ್ಟು ಮಾಹಿತಿ ಸಿಕ್ಕಿತು. ನಾನಿನ್ನು ಹೊರಡ್ತೀನಿ. ನಿಮಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಪಮಿಸಿ. ಗಳಗನಾಥರ ಶವಸಂಸ್ಕಾರದ ವಿಚಾರ ಬಹಳ ಚೆನ್ನಾಗಿತ್ತು. ಅವರು ವಿಶಿಷ್ಟ ವ್ಯಕ್ತಿ ಅಂದ್ರಲ್ಲ. ನಿಮಗೆ ಹಾಗನ್ನಿಸೋದಕ್ಕೆ ಏನು ಕಾರಣ ಅಂತ ಹೇಳ್ತೀರಾ?'
`ಅದಾ.. ಅದಂತೂ ಸತ್ಯ. ನೂರರಲ್ಲಿ ಒಬ್ಬನೂ ಅದನ್ನು ಕಂಡಿರಲಿಕ್ಕಿಲ್ಲ. ಎಲ್ಲ ಶಾಸ್ತ್ರಗಳೂ ಮುಗಿದು ಇನ್ನೇನು ಮೆರವಣಿಗೆ ಹೊರಡಬೇಕಿತ್ತು. ಶವವನ್ನು ಹೂಗಳಿಂದ ಸುಂದರವಾಗಿ ಸಿಂಗರಿಸಿದ್ದರು. ಈ ಅಂತಿಮ ದೃಶ್ಯವನ್ನು ಕಣ್ಣಾರೆ ನೋಡಬೇಕು ಅಂತ ಅವರೇ ಸ್ವತಃ ಎದ್ದು ವಾಹನದ ಡ್ರೈವರ್ ಜೊತೆ ಹೊರಟರು.'
ಸಂದರ್ಶನಕ್ಕೆ ಬಂದಿದ್ದ ಪತ್ರಕರ್ತ ಜಾಸ್ತಿ ಮಾತಾಡಲಿಲ್ಲ. ಕೃತಜ್ಞತೆ ಹೇಳಿ ಹೊರಟುಹೋದ. ಅವನ ಜೊತೆಗಿನ ಮಾತು ಚೆನ್ನಾಗಿತ್ತು. ಅವನು ಎದ್ದು ಹೋದ ನಂತರ ಬೇಜಾರಾಯಿತು.
*****
ಮಾರ್ಕ್ ಟ್ವೈನ್ ಬರೆದ ಒಂದಂಕದ ನಾಟಕದ ಓದಿ ಹೊಳೆದದ್ದು ಇದು. ಇದು ಏನನ್ನೂ ಹೇಳದೇ ಎಲ್ಲವನ್ನೂ ಹೇಳುತ್ತದೆ. ಇಲ್ಲಿರುವ ತರಲೆ, ಅಧಿಕಪ್ರಸಂಗ, ಅಸಂಗತ ಅಂಶಗಳು ಛೇಡಿಸುತ್ತಲೆ ಇನ್ನೇನೋ ಯೋಚಿಸುವಂತೆ ಮಾಡುತ್ತವೆ ಎಂದುಕೊಳ್ಳಬೇಕಿಲ್ಲ. ಇದೊಂದು ತೀರಾ ಸರಳ ನಾಟಕ. ಎಷ್ಟು ದಕ್ಕುತ್ತದೋ ಅಷ್ಟು.
ತುಂಬ ಸರಳವಾಗಿದ್ದಾಗಲೇ ನಾವು ವಿಪರೀತ ಗೊಂದಲಗೊಳ್ಳುತ್ತೇವೆ. ಗಾಬರಿಯಾಗುತ್ತೇವೆ. ಅದಕ್ಕೆ ಇದೇ ಸಾಕ್ಪಿ.

6 comments:

Unknown said...

congrats. ನಿಮಗೂ ಜೊತೆಗೆ ಉಮ ಅವರಿಗೂ.
ಈ ಕಥೆಯನ್ನ ನೀವು ಬರೆಯಬಾರದಿತ್ತು ಅಂತ ಅಂದುಕೊಳ್ಳುತ್ತಿದ್ದಾಗಲೇ ನಾನು ಓದಿಯಾಗಿತ್ತು. sun-ದರ್ಶನ ಕೊಡದ ಈ ವೇಳೆಯಲ್ಲಿ ಈ ಸಂದರ್ಶನ ಖುಷಿ ಕೊಡ್ತು.
(ನೀವು ಕಾಡಿಗೆ ಹೋಗಿ ಬಂದರೂ ಬಡವಾದ ಸೂಚನೆ ಕಾಣಿಸ್ತಿಲ್ಲ)

ARUN MANIPAL said...

ಇದುವರೆಗೆ ಇದನ್ನು ನಾನು ಯಾರಿಗೂ ಹೇಳಿಲ್ಲ. ನಮ್ಮಿಬ್ಬರಲ್ಲಿ ಒಬ್ಬನ ಮೊಳಕೈಯ ಹತ್ರ ಒಂದು ದೊಡ್ಡ ಕಪ್ಪು ಮಚ್ಚೆ ಇತ್ತು. ಆ ಮಚ್ಚೆ ಇದ್ದೋನು ನಾನು. ಮಚ್ಚೆ ಇದ್ದೋನೇ ಸತ್ತು ಹೋಗಿದ್ದು'
..?? @@ಒಮ್ಮೆಗೆ ಗೊತ್ತಾಗ್ಲಿಲ್ಲ ..ಮತ್ತೊಮ್ಮೆ ಓದಿದೆ ಹುಚ್ಚು ಹಿಡುಯದು ಒಂದು ಬಾಕಿ.. ತಲೆ ಕೆರ್ಕೊಂಡು ಕೆರ್ಕೊಂಡು ಸಾಕಾಯ್ತು..??;-)

ಮೃಗನಯನೀ said...

ಕಂಗ್ರಾಟ್ಸೂ.....

ಹರೀಶ್ ಕೇರ said...

Hosa kathe kodi Jogi please.
- Harish Kera

ಮಲ್ಲಿಕಾಜು೯ನ ತಿಪ್ಪಾರ said...

Suvarna prasasti bandidakke cangrats Sir

Anonymous said...

congrats guruve