Wednesday, August 20, 2008

ಕಾಡು ಕಾಡೆಂ­ದರೆ ಕಾಡೇನ ಬಣ್ಣಿ­ಸಲಿ...

ಈ ಪುಟ್ಟ ಕತೆ ಹೀಗೇ ಯಾಕಿ­ರ­ಬೇಕು ಅಂತ ನಂಗೊ­ತ್ತಿಲ್ಲ. 1937ರಲ್ಲೇ ಆತ ಬರೆದ ಈ ಪುಟ್ಟ ಕತೆ ಇವತ್ತು ಓದಿ­ದರೂ ಸಾಕು ತಲ್ಲ­ಣಿ­ಸು­ವಂತೆ ಮಾಡು­ತ್ತದೆ. ಬರೆ­ದಾ­ತನ ಹೆಸರು ಯೊಹಾ­ನ್ನೆಸ್ ಯೆನ್­ಸೆನ್ ಡೆನ್ಮಾ­ರ್ಕಿನ ಕತೆ­ಗಾರ.
ಈತನ ಕತೆ ಹೀಗೆ;
ಒಬ್ಬ ರೈತ. ನಾಲ್ಕು ಕಾಸು ಸಂಪಾ­ದಿ­ಸಿದ ನಂತರ ದುಡಿ­ಯು­ವು­ದ­ಕ್ಕೊಬ್ಬ ಗುಲಾಮ ಬೇಕು ಅನ್ನಿ­ಸು­ತ್ತದೆ. ಸಂತೆಗೆ ಹೋಗು­ತ್ತಾನೆ. ಅಲ್ಲಿ ಒಬ್ಬ ವ್ಯಾಪಾರಿ ಗುಲಾ­ಮ­ರನ್ನು ಮಾರು­ತ್ತಿ­ದ್ದಾನೆ. ರೈತ­ನಿಗೆ ಆ ಗುಲಾ­ಮರು ಯಾರೂ ಇಷ್ಟ­ವಾ­ಗ­ಲಿಲ್ಲ.
ವ್ಯಾಪಾರಿ ಕೊನೆಗೆ ಒಳಗೆ ಮಲ­ಗಿದ್ದ ಎಲ್ಲ ಗುಲಾ­ಮ­ರನ್ನೂ ಕರೆ­ಯು­ತ್ತಾನೆ. ಒಬ್ಬೊ­ಬ್ಬ­ರ­ನ್ನಾಗಿ ತೋರಿ­ಸು­ತ್ತಾನೆ. ಪ್ರತಿ­ಯೊ­ಬ್ಬ­ರನ್ನೂ ಸೂಕ್ಪ್ಮ­ವಾಗಿ ಪರೀ­ಕ್ಪಿ­ಸು­ತ್ತಾನೆ ಗುಲಾಮ. ಕೊನೆ­ಗೊಬ್ಬ ಗುಲಾ­ಮ­ನನ್ನು ಮುಂದಿಟ್ಟು `ಈತ ಹ್ಯಾಗಿ­ದ್ದಾನೆ ನೋಡು. ಕಟ್ಟು­ಮಸ್ತು ಆಸಾಮಿ. ಒಂದೇಟು ಕೊಟ್ಟು ನೋಡು. ಕಮಕ್ ಕಿಮಕ್ ಅನ್ನೋಲ್ಲ. ಮಾಂಸ­ಖಂ­ಡ­ಗಳು ಹೇಗಿವೆ ನೋಡು' ಎನ್ನು­ತ್ತಾನೆ. ಗುಲಾ­ಮನ ಬಾಯಿ ತೆಗೆಸಿ, ಚೂರಿಯ ಹಿಡಿ­ಯಲ್ಲಿ ಹಲ್ಲು­ಗ­ಳನ್ನು ತೋರಿ­ಸು­ತ್ತಾನೆ.
ರೈತ ಕೊಂಚ ಹೊತ್ತು ಯೋಚಿ­ಸು­ತ್ತಾನೆ. ಪರೀ­ಕ್ಪಿ­ಸು­ವಂತೆ ಗುಲಾ­ಮನ ಹೊಟ್ಟೆ­ಗೊಂದು ಏಟು ಹಾಕು­ತ್ತಾನೆ. ಗುಲಾಮ ಮಿಸು­ಕಾ­ಡೋ­ದಿಲ್ಲ. ಪರ­ವಾ­ಗಿಲ್ಲ ಅನ್ನಿಸಿ ವ್ಯಾಪಾರಿ ಹೇಳಿದ ರೇಟನ್ನು ಗೊಣ­ಗು­ತ್ತಲೇ ಕೊಟ್ಟು ಗುಲಾ­ಮ­ನನ್ನು ಮನೆಗೆ ಕರೆ­ತ­ರು­ತ್ತಾನೆ.
ದುರ­ದೃಷ್ಟ. ರೈತ ಮನೆಗೆ ಕರೆ­ತಂದ ಕೆಲವೇ ದಿನ­ಗ­ಳಲ್ಲಿ ಗುಲಾಮ ಕಾಯಿಲೆ ಬಿದ್ದು ಬಡ­ವಾ­ಗುತ್ತಾ ಹೋಗು­ತ್ತಾನೆ. ಅವನು ನಿತ್ಯವೂ ತಾನು ಬಿಟ್ಟು ಬಂದ ಕಾಡು­ಗ­ಳಿ­ಗಾಗಿ ಹಂಬ­ಲಿ­ಸು­ತ್ತಿ­ದ್ದಾನೆ ಅನ್ನೋದು ರೈತ­ನಿಗೆ ಗೊತ್ತಾ­ಗು­ತ್ತದೆ. ರೈತ­ನಿಗೆ ಆತನ ಹಂಬ­ಲದ ಬಗ್ಗೆ ಅಂಥ ಅನಾ­ದ­ರ­ವೇನೂ ಇಲ್ಲ. ಹಂಬ­ಲಿ­ಸುವ ಮನುಷ್ಯ ಮಾತ್ರ ಉಪ­ಯೋ­ಗಕ್ಕೆ ಬರ­ಬಲ್ಲ ಅನ್ನು­ವುದು ರೈತ­ನಿಗೂ ಗೊತ್ತು. ಕನ­ಸು­ಗಳೂ ಆಶೆ­ಗಳೂ ಇರು­ವ­ವ­ರ­ನ್ನಷ್ಟೇ ದುಡಿ­ಸಿ­ಕೊ­ಳ್ಳ­ಬ­ಹುದು. ಸ್ಥಿತ­ಪ್ರ­ಜ್ಞರು ದುಡಿ­ಯು­ವು­ದಿಲ್ಲ.
ರೈತ ನಿರಾ­ಸ­ಕ್ತಿ­ಯಿಂದ ಮಲ­ಗಿ­ರುವ ಗುಲಾ­ಮನ ಹತ್ತಿರ ಹೋಗಿ ಹೇಳಿದ. `ನೀ­ನೇನೂ ಚಿಂತೆ ಮಾಡ­ಬೇಡ. ನಿನ್ನ ಕಾಡು­ಗ­ಳಿ­ರುವ ಜಾಗಕ್ಕೆ ನಾನೇ ನಿನ್ನನ್ನು ಕಳು­ಹಿ­ಸು­ತ್ತೇನೆ. ಇದು ಪ್ರಮಾಣ. ನೀನಿನ್ನೂ ತರುಣ. ಐದೇ ಐದು ವರುಷ ಕಷ್ಟ­ಪಟ್ಟು ಕೆಲಸ ಮಾಡು. ನಾನು ನಿನ್ನನ್ನು ಬಿಟ್ಟು­ಬಿ­ಡ್ತೇನೆ. ನಿನ­ಗಿಷ್ಟ ಬಂದ ಕಡೆ ಹೋಗು­ವಿ­ಯಂತೆ. ನಾನೂ ನಿನ್ನನ್ನು ದುಡ್ಡು ಕೊಟ್ಟು ಕೊಂಡು­ಕೊಂ­ಡಿ­ದ್ದೇನೆ ಅಲ್ವಾ. ನನಗೂ ನಷ್ಟ­ವಾ­ಗ­ಬಾ­ರದು ತಿಳೀ­ತಲ್ಲ'
ಮಾತು ಮಂತ್ರ­ವಾಗಿ ಕೆಲಸ ಮಾಡಿತು. ಗುಲಾಮ ಮೈಮು­ರಿಯೆ ದುಡಿ­ಯ­ತೊ­ಡ­ಗಿದ. ರೈತ ನೋಡ­ನೋ­ಡು­ತ್ತಿ­ದ್ದಂತೆ ಗುಲಾಮ ಬಿಡು­ವಿ­ಲ್ಲದೆ ಕೆಲಸ ಮಾಡ­ತೊ­ಡ­ಗಿದ. ರೈತ­ನಿಗೆ ಕಟ್ಟಿಗೆ ಒಡೆ­ಯು­ವಾಗ, ನೀರು ಸೇದು­ವಾಗ, ಹಾರೆ­ಯಲ್ಲಿ ನೆಲ ಅಗೆ­ಯು­ವಾಗ ತೋಳು­ಗ­ಳಲ್ಲಿ ಪುಟಿ­ಯುವ ಗುಲಾ­ಮನ ಮಾಂಸ­ಖಂ­ಡ­ಗ­ಳನ್ನು ನೋಡು­ವುದೇ ಖುಷಿ ಅನ್ನಿ­ಸ­ತೊ­ಡ­ಗಿತು.
ಗುಲಾಮ ವರು­ಷ­ಗಳ ಲೆಕ್ಕ ಹಾಕು­ತ್ತಿದ್ದ. ಐದು ವರುಷ ಎಂದರೆ ಐದು ಸಂಕ್ರ­ಮ­ಣ­ಗಳು. ತನ್ನ ಕೈಯಲ್ಲಿ ಎಷ್ಟು ಬೆರ­ಳು­ಗ­ಳಿ­ವೆಯೋ ಅಷ್ಟು ಸಂಕ್ರ­ಮ­ಣ­ಗಳು. ಪ್ರತಿ­ದಿ­ನವೂ ಸೂರ್ಯ ಮುಳು­ಗು­ವು­ದನ್ನೇ ನೋಡು­ತ್ತಿದ್ದ ಗುಲಾಮ. ಸೂರ್ಯ ಮುಳು­ಗಿ­ದಂ­ತೆಲ್ಲ ಖುಷಿ. ಒಂದು ಕಲ್ಲೆತ್ತಿ ಪಕ್ಕ­ಕ್ಕಿ­ಡು­ತ್ತಿದ್ದ. ಮೊಟ್ಟ ಮೊದ­ಲಿಗೆ ಸೂರ್ಯ ಪಥ ಬದ­ಲಾ­ಯಿ­ಸಿ­ದಾಗ ಗುಲಾಮ ತನ್ನ ಹೆಬ್ಬೆ­ರಡು ಮಡಿ­ಚಿದ. ಹಾಗೇ ಮತ್ತೊಂದು ಸಂಕ್ರ­ಮಣ ಕಳೆ­ಯಿತು, ತೋರು ಬೆರಳು ಮಡಿ­ಚಿದ. ಗುಲಾ­ಮ­ನಿಗೆ ತನ್ನ ಬಿಡು­ಗ­ಡೆಗೆ ಕಾರ­ಣ­ವಾ­ಗು­ತ್ತಿ­ರುವ ಎರಡು ಬೆರ­ಳು­ಗಳ ಮೇಲೆ ಎಲ್ಲಿ­ಲ್ಲದ ಪ್ರೀತಿ. ಉಳಿದ ಮೂರು ಬೆರ­ಳು­ಗಳು ಗುಲಾ­ಮ­ಗಿ­ರಿಯ ಸಂಕೇತ ಅನ್ನಿಸಿ ಬೇಸ­ರ­ವಾ­ಗು­ತ್ತಿತ್ತು.
ಹೀಗೆ ಗುಲಾಮ ಸೂರ್ಯ­ನನ್ನು ನೋಡುತ್ತಾ ಕಾಲ ಸರಿ­ಯು­ವು­ದನ್ನು ನೋಡುತ್ತಾ ದುಡಿ­ಯು­ತ್ತಿದ್ದ ಗುಲಾಮ. ಕ್ರಮೇಣ ಅವನ ಲೆಕ್ಕ­ಗಳು ಆಳವೂ ವಿಶಾ­ಲವೂ ಆದವು. ಹಿಗ್ಗಿ­ದವು. ಗೋಜಲು ಗೋಜ­ಲಾದ ದೊಡ್ಡ ಗಂಟು­ಗ­ಳಾಗಿ ಸಾಗು­ತ್ತಿದ್ದ ವರು­ಷ­ಗ­ಳನ್ನು ಹಿಡಿ­ಯು­ವುದು ಅವನ ಅಳ­ವಿಗೆ ಮೀರಿದ್ದು. ಆದರೆ ಹೊತ್ತು ಮುಳು­ಗುವ ಪುಟ್ಟ ಕ್ಪಣ ಅವ­ನಿಗೆ ನಿಲು­ಕು­ವಂ­ತದ್ದು. ವರ್ತ­ಮಾ­ನ­ದಲ್ಲಿ ಕಣ್ಮ­ರೆ­ಯಾದ ಕಾಲ ಭೂತಕ್ಕೆ ಸೇರಿ­ಕೊ­ಳ್ಳುವ ಸೂರ್ಯಾ­ಸ್ತದ ಘಳಿ­ಗೆ­ಯಲ್ಲೇ ಆತ ತನ್ನ ಬದು­ಕನ್ನು ಪುನ­ರ್ರೂ­ಪಿ­ಸಿ­ಕೊ­ಳ್ಳು­ತ್ತಿದ್ದ. ಭೂತ­ಕಾ­ಲ­ವೆ­ನ್ನು­ವುದು ಎಂದೂ ಹಿಂದಿ­ರು­ಗ­ಲಾ­ರದ ಹಾದಿ­ಯಂತೆ, ಭವಿ­ಷ್ಯ­ವೆಂ­ಬುದು ಎಂದೂ ದಾಟ­ಲಾ­ರದ ಮರ­ಳು­ಗಾ­ಡಿ­ನಂತೆ ಕಾಣಿ­ಸು­ತ್ತಿತ್ತು.
ಹೀಗೆ ಕಾಲದ ಬಗ್ಗೆ ಚಿಂತಿ­ಸುತ್ತಾ ಗುಲಾ­ಮನ ಒಳ­ಜ­ಗತ್ತು ವಿಸ್ತಾ­ರ­ಗೊಂ­ಡಿತು.ಅ­ವನ ಹಂಬ­ಲವೇ ಕಾಲ­ಕ್ಕೊಂದು ಅನಂ­ತ­ತೆ­ಯನ್ನು ತಂದು­ಕೊ­ಟ್ಟಿತ್ತು. ಜಗತ್ತು ಅನಂ­ತ­ವಾ­ಗುತ್ತಾ ಸಾಗಿತ್ತು. ಪ್ರತಿ­ಯೊಂದು ಸೂರ್ಯಾ­ಸ್ತವೂ ಅವನ ಬದು­ಕನ್ನು ಅರ್ಥ­ಪೂ­ರ್ಣ­ವಾ­ಗಿ­ಸುತ್ತಾ ಹೋಗು­ತ್ತಿತ್ತು.
ಕೊನೆಗೂ ಐದು ವರುಷ ಕಳೆ­ಯಿತು. ಗುಲಾಮ ರೈತನ ಬಳಿಗೆ ಬಂದು ಬಿಡು­ಗಡೆ ಕೋರಿದ. ಕಾಡು­ಗಳ ನಡುವೆ ಇದ್ದ ತನ್ನ ಮನೆಗೆ ಹೋಗ­ಬೇಕು ಅನ್ನಿ­ಸಿತು. ರೈತ ಯೋಚಿಸಿ ಹೇಳಿದ;
`ನಿನ್ನ ಕೆಲ­ಸಕ್ಕೆ ಮೆಚ್ಚಿ­ದ್ದೇನೆ. ನೀನು ಹೋಗ­ಬ­ಹುದು. ಆದರೆ ನಿನ್ನ ಮನೆ ಎಲ್ಲಿದೆ? ಪಶ್ಚಿ­ಮಕ್ಕಾ? ನೀನು ಆ ದಿಕ್ಕನ್ನೇ ನೋಡು­ತ್ತಿ­ದ್ದು­ದನ್ನು ನಾನೂ ನೋಡಿ­ದ್ದೇನೆ'
`ಹೌದು, ಪಶ್ಚಿ­ಮಕ್ಕೆ' ಎಂದ ಗುಲಾಮ.
`ಹಾ­ಗಿ­ದ್ದರೆ ಅದು ತುಂಬ ದೂರ. ಅಲ್ಲಿಗೆ ಹೋಗು­ವು­ದಕ್ಕೆ ನಿನ್ನ ಹತ್ತಿರ ಹಣ­ವಾ­ದರೂ ಎಲ್ಲಿದೆ? ದುಡ್ಡಿ­ಲ್ಲದೆ ಅಲ್ಲಿಗೆ ಹೇಗೆ ಹೋಗ್ತೀಯ? ಒಂದು ಕೆಲಸ ಮಾಡು. ಮೂರು ವರುಷ, ಉಹುಂ.. ಎರಡೇ ಎರಡು ವರುಷ ಕೆಲಸ ಮಾಡು. ನಿಂಗೆ ಎಷ್ಟು ಬೇಕೋ ಅಷ್ಟು ದುಡ್ಡು ಕೊಡ್ತೀನಿ'
ಗುಲಾಮ ತಲೆ­ದೂ­ಗಿದ. ಮತ್ತೆ ಗೆಯ್ಮೆ ಶುರು­ಮಾ­ಡಿದ. ಆದರೆ ಮೊದ­ಲಿ­ನಂತೆ ದಿನ­ಗಳ ಲೆಕ್ಕ ಇಡೋದು ಅವ­ನಿಗೆ ಸಾಧ್ಯ­ವಾ­ಗ­ಲಿಲ್ಲ. ಹಗ­ಲು­ಗ­ನಸು ಕಾಣು­ತ್ತಿದ್ದ ಗುಲಾಮ ನಿದ್ದೆ­ಯಲ್ಲಿ ಅಳುತ್ತಾ ಮಾತಾ­ಡು­ತ್ತಿದ್ದ. ಮತ್ತೆ ಕಾಯಿಲೆ ಬಿದ್ದ.
ಈ ಬಾರಿ ರೈತ ಮತ್ತೆ ಅವನ ತಲೆಯ ಬಳಿ ಕೂತು ಪ್ರೀತಿ­ಯಿಂದ ಮಾತಾ­ಡಿದ;
`ನಾ­ನೀಗ ಮುದುಕ. ನನಗೂ ಪಶ್ಚಿ­ಮದ ಕಾಡು­ಗ­ಳತ್ತ ಹೋಗ­ಬೇಕು ಅನ್ನೋ ಹಂಬ­ಲ­ವಿತ್ತು. ಆದರೆ ಆಗ ನನ್ನ ಬಳಿ ದುಡ್ಡಿ­ರ­ಲಿಲ್ಲ. ಈಗ ದುಡ್ಡಿ­ದ್ದರೂ ಅಲ್ಲಿಗೆ ಹೋಗ­ಲಾರೆ. ಆದರೆ ನೀನು ಹುಡುಗ, ಬಲ­ಶಾಲಿ. ಮೊದಲು ಕಾಯಿ­ಲೆ­ಯಿಂದ ಸುಧಾ­ರಿ­ಸಿಕೋ'.
ಗುಲಾ­ಮನ ಕಾಯಿಲೆ ನಿಧಾ­ನ­ವಾಗಿ ಗುಣ­ವಾ­ಗ­ತೊ­ಡ­ಗಿತು. ಆದರೆ ಕೆಲ­ಸ­ದಲ್ಲಿ ಹಳೆಯ ಉತ್ಸಾಹ ಇರ­ಲಿಲ್ಲ. ಕೆಲ­ಸದ ನಡುವೆ ನಿದ್ದೆ ಮಾಡು­ವು­ದನ್ನೂ ಅಭ್ಯಾಸ ಮಾಡಿ­ಕೊಂಡ. ಅದ­ಕ್ಕೋ­ಸ್ಕರ ರೈತ­ನಿಂದ ಏಟು ತಿಂದ. ಬಿಕ್ಕಿ ಬಿಕ್ಕಿ ಅತ್ತ.
ಹೀಗೆ ಎರಡು ವರುಷ ಕಳೆ­ಯಿತು. ರೈತ ಗುಲಾ­ಮ­ನನ್ನು ಬಿಟ್ಟು­ಬಿಟ್ಟ. ಗುಲಾಮ ಪಶ್ಚಿ­ಮದ ಕಡೆಗೆ ಹೆಜ್ಜೆ ಹಾಕಿದ. ಎಷ್ಟೋ ತಿಂಗ­ಳು­ಗಳ ನಂತರ ಆತ ನಿರಾಶೆ ಮತ್ತು ಹತಾ­ಶೆ­ಯಿಂದ ಜರ್ಜ­ರಿ­ತ­ನಾಗಿ ವಾಪಸ್ಸು ಬಂದ. ಅವ­ನಿಗೆ ತನ್ನ ಕಾಡು­ಗಳ ಸುಳಿವು ಸಿಕ್ಕಿ­ರ­ಲಿಲ್ಲ.
ರೈತ ಹೇಳಿದ `ಪೂರ್ವ ದಿಕ್ಕಿಗೆ ಹೋಗು. ಅಲ್ಲಾ­ದರೂ ನಿನ್ನ ಕಾಡು­ಗಳು ಸಿಗ­ಬ­ಹುದು'.
ಗುಲಾಮ ಪೂರ್ವಕ್ಕೆ ಅಲೆದ. ತುಂಬ ದಿನ ನಡೆದ ನಂತರ ಅವ­ನಿಗೆ ಅವನ ಕಾಡು­ಗಳು ಸಿಕ್ಕವು. ಆದರೆ ಆ ಕಾಡು­ಗಳ ಪರಿ­ಚ­ಯವೇ ಅವ­ನಿಗೆ ಇರ­ಲಿಲ್ಲ. ಆತ ಅಲ್ಲಿಂ­ದಲೂ ನಿರಾ­ಶ­ನಾಗಿ ಮರ­ಳಿದ, ರೈತನ ಬಳಿ ತನ್ನ ಕಾಡು­ಗಳು ಎಲ್ಲಿಯೂ ಇಲ್ಲ ಎಂದ. ರೈತ ಹಾಗಿ­ದ್ದರೆ ನನ್ನ ಜೊತೆ­ಗಿರು ಎಂದು ಪ್ರೀತಿ­ಯಿಂ­ದಲೇ ಹೇಳಿದ.
ಗುಲಾಮ ಅಲ್ಲೇ ಉಳಿದ. ಹೊಟ್ಟೆ ತುಂಬ ತಿನ್ನು­ತ್ತಿದ್ದ. ಆರೋಗ್ಯ ಕಾಪಾ­ಡಿ­ಕೊ­ಳ್ಳು­ತ್ತಿದ್ದ. ಕಷ್ಟ­ಪಟ್ಟು ದುಡಿ­ಯು­ತ್ತಿದ್ದ. ತಪ್ಪು ಮಾಡಿ­ದಾಗ ಏಟು ತಿನ್ನು­ತ್ತಿದ್ದ. ಪ್ರತಿ­ಭಾ­ನು­ವಾರ ಪಶ್ಚಿ­ಮ­ದತ್ತ ನೋಡುತ್ತಾ ಕೂರು­ತ್ತಿದ್ದ. ಕ್ರಮೇಣ ಅವ­ನಿ­ಗೊ­ಬ್ಬಳು ದಾಸಿಯೂ ಸಿಕ್ಕಳು.
ವರುಷ ಸಂದವು. ರೈತನ ಮನೆ­ಯಲ್ಲಿ ಗುಲಾ­ಮನ ಆರು ಮಕ್ಕಳು ದುಡಿ­ಯು­ತ್ತಿ­ದ್ದರು. ಫಸಲು ಹುಲು­ಸಾ­ಗಿತ್ತು. ಮಕ್ಕ­ಳಿಗೆ ಕಾಡಿನ ಕಲ್ಪ­ನೆಯೂ ಇರ­ಲಿಲ್ಲ. ದುಡಿ­ಯು­ತ್ತಿ­ದ್ದರೆ ಕಾಲ ಸರಿ­ಯು­ತ್ತದೆ ಮತ್ತು ನಮ್ಮನ್ನು ಶಾಶ್ವ­ತ­ವಾದ ಕಾಡು­ಗ­ಳಿಗೆ ಕರೆ­ದೊ­ಯ್ಯು­ತ್ತಾರೆ ಎಂದು ರೈತ ಹೇಳು­ತ್ತಿದ್ದ. ಪ್ರತಿ­ಭಾ­ನು­ವಾರ ಗುಲಾಮ ಮಕ್ಕ­ಳನ್ನೂ ದಿಬ್ಬದ ಮೇಲೆ ಕರೆ­ದೊಯ್ದು ಸೂರ್ಯಾಸ್ತ ತೋರಿ­ಸು­ತ್ತಿದ್ದ. ಅವ­ರಿಗೂ ಹಂಬ­ಲಿ­ಸು­ವು­ದನ್ನು ಕಲಿ­ಸು­ತ್ತಿದ್ದ.
ರೈತ­ನಿಗೆ ವಯ­ಸ್ಸಾ­ಗಿದೆ. ಆತ ಏಳ­ಲಾರ ಕೂರ­ಲಾರ. ಆತನ ಮಗ ಇನ್ನೂ ಎಳಸು. ಆದರೆ ರೈತ­ನಿಗೆ ಚಿಂತೆ­ಯಿಲ್ಲ. ಯಾಕೆಂ­ದರೆ ಗುಲಾ­ಮ­ರಿ­ದ್ದಾರೆ. ಒಬ್ಬೊ­ಬ್ಬರು ಬಲ­ಶಾ­ಲಿ­ಗಳು. ಯಾರ ಭಯವೂ ಇಲ್ಲ.
ಎಲ್ಲ­ಕ್ಕಿಂತ ಹೆಚ್ಚಾಗಿ ಈ ಗುಲಾಮ ಹುಡು­ಗರು ಕೊಡಲಿ ಬೀಸಿ ಮರ­ಗ­ಳನ್ನು ಕಡಿ­ಯು­ತ್ತಿ­ದ್ದಾರೆ. ಅವ­ರಿಗೆ ಕಾಡೇ ಇಲ್ಲ.

14 comments:

Anonymous said...

ಆದಿಯಲ್ಲಿ ಕತ್ತಿಯಹರಿತದಲ್ಲಿ ದಂತಪರೀಕ್ಷೆಯ ದೃಶ್ಯವೇ ಮುಂದಿನ ಕಥಾವಸ್ತುವಿನ ಧ್ವನಿ. ಮಾನವವೀಯತೆಯನ್ನೇ ಪರಿಹಾಸಮಾಡುವಂತಿದೆ. ಹೆಜ್ಜೆ ಹೆಜ್ಜೆಗೂ ಶೋಷಣೆಯ ಬಿಂಬ ತೋರಿದರೂ ನೌಕರನ (ಗುಲಾಮ ಎನ್ನಲಾರೆ) ಆಶಾಕಿರನವೇ ಕಣ್ಣನ್ನು ಕುಕ್ಕಿ ರೈತನ ಕಟುಪಾತ್ರವನ್ನು ಮರೆಸುತ್ತದೆ. ದಾಸಿಯ ಪ್ರವೇಶ ಕೊಂಚ ಅಸಹಜ ಎನ್ನಿಸಿದರೂ "a blend of soft water to cool the intoxicating complexity" ರೀತಿಯಲ್ಲಿ ಕಥೆಯು ಅಪೇಕ್ಷಿಸುವ ಮುಕ್ತಾಯವನ್ನು ಸಫಲಗೊಳಿಸುತ್ತದೆ. ಅಂತ್ಯದಲ್ಲಿ ರೈತನ ನಿಶ್ಚಿಂತೆ, ಬಾಲಕ ರೈತ (ಭವಿಷ್ಯ ವಾಣಿ !), ಬಹುಸಂಖ್ಯಾತರಾದ ರೈತಪುತ್ರರೂ ಎಲ್ಲವೂ ಸಾಂಕೇತಿಕ. A symbolic representation of ironical sense rampant throughout, rather in an undiscovered flow. ಕಥೆಯ ಪರಿಹಾಸದ ಕಟುಸತ್ಯವು ಕಡೆಯಲ್ಲಿ ನೌಕರನ ಕೊಡಲಿಯ ಮಾದರಿಯಲ್ಲೀ ನಮ್ಮನ್ನು ಪ್ರಹರಿಸುತ್ತದೆ.

ಪೂರ್ಣಿಮಾ ಭಟ್ಟ, ಸಣ್ಣಕೇರಿ said...

ಇಷ್ಟೇ ಇಷ್ಟು ಕಥೆ ಎಷ್ಟೆಲ್ಲಾ ಹೇಳುತ್ತದೆ, ಅಲ್ವಾ..?

Anonymous said...

"ಹಂಬ­ಲಿ­ಸುವ ಮನುಷ್ಯ ಮಾತ್ರ ಉಪ­ಯೋ­ಗಕ್ಕೆ ಬರ­ಬಲ್ಲ ಅನ್ನು­ವುದು ರೈತ­ನಿಗೂ ಗೊತ್ತು. ಕನ­ಸು­ಗಳೂ ಆಶೆ­ಗಳೂ ಇರು­ವ­ವ­ರ­ನ್ನಷ್ಟೇ ದುಡಿ­ಸಿ­ಕೊ­ಳ್ಳ­ಬ­ಹುದು. ಸ್ಥಿತ­ಪ್ರ­ಜ್ಞರು ದುಡಿ­ಯು­ವು­ದಿಲ್ಲ." - ಈ ವಾಕ್ಯ ಇಸ್ತವೈತು. ಬಹಳ ಅರ್ಥಪೂರ್ಣವಾದುದು ಎಂದಿನ್ನಿಸಿತು.
ಮೇಲ್ನೋಟಕ್ಕೆ ಈ ಕತೆ ಪ್ರಾಚೀನವಾದ ಯಾವುದೊ ಹಳ್ಳಿಯ ರೈತನ ಕತೆ ಎನ್ನಿಸಿದರೂ, ಆಳದಲ್ಲಿ ಇದು ಒಂದು ಸಮಕಾಲೀನ ಭವಣೆಯ ಕತೆ ಎನ್ನುವುದು ಕತೆಯ ಕೊನೆ ಕೊನೆಗೆ ಸ್ಪಷ್ಟವಾಗುತ್ತ ಹೋಗುತ್ತದೆ. ಇಲ್ಲಿನ ಧನವಂತ ರೈತ ಪ್ರಸ್ತುತ ಪಾಶ್ಚ್ಯಾತ್ಯ ಮುಂದುವರೆದ ದೇಶಗಳನ್ನು ಪ್ರತಿನಿಧಿಸುತ್ತಾನೆ. ನಮ್ಮಂತಹ ಚಾಕರಿ ಮಾಡುವ ಗುಲಾಮರೆಸ್ತೋ ಮಂದಿ.
ಮಾತ್ರವಲ್ಲ, "ಗುಲಾಮಗಿರಿ" ಮುಗಿದ ಮೇಲೆ ಕುಉದ ನಾವು ನಮ್ಮ ನಮ್ಮ "ಕಾಡು" ಗಳನ್ನೂ ಮರಳಿ ಹುದುಕಲಾರೆವು. ಅಂದು ಹುಟ್ಟಿ ಬೆಳೆದ ಆ ಕಾಡು ಇಂದು ಗುರುತು ಸಿಗಲಾರದಸ್ತು ಬದಲಾಗಿದೆ. ಒಟ್ಟಿನಲ್ಲಿ, ಬಹಳಷ್ಟು ಅನಿವಾರ್ಯ ಹಾಗು ಅಸಂಗತ ವಿದ್ಯಮಾನಗಳಲ್ಲಿ ಬಂಧಿಯಾಗುವ ಚಿತ್ರಣ ಈ ಕತೆಯಲ್ಲಿ ಇದೆ ಎಂದು ನನ್ನ ಭಾವನೆ.

ಜೋಗಿಯವರು ಈ ಕತೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರೆ ಸಂತೋಷ.

Dr.D.M.Sagar

ಸಿಂಧು ಭಟ್. said...

ನಮ್ಮ ನಿಮ್ಮೆಲ್ಲ್ರರ ಕತೆಯು ಇದೇ ಅಲ್ಲವೇ? ಕೆಲಸಕ್ಕೆಂದು ಹಳ್ಳಿ ಬಿಟ್ಟು ಡೆಲ್ಲಿ (ನಗರ)ಗೆ ಬರುವುದು.ಇಲ್ಲಿ ಇದ್ದಾಗ ನಾವು ಬೆಳೆದ ಪರಿಸರದ ತೀವ್ರ ಸೆಳೆತ.ಆದರೆ ಅಲ್ಲಿಗೆ ಹೋಗಿ ಮತ್ತೆ ಶಾಶ್ವತವಾಗಿ ಉಳಿಯಲಾಗದ ಸ್ಥಿತಿ.

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಿಯ ಜೋಗಿ ಅವರೆ...
ಬೆಳಿಗ್ಗೆಯೇ ಕಥೆಯನ್ನ ಓದಿದ್ದೆ. ಕಾಡುತ್ತಲೇ ಇತ್ತು. ಸಂಜೆ ಗೆಳೆಯನೊಂದಿಗೆ ಪ್ರಯಾಣಿಸುತ್ತ ಈ ಕಥೆಯನ್ನವರಿಗೆ ಹೇಳಿದೆ.ಕಥೆಹೇಳಿ/ಕೇಳಿ ಮುಗಿದಾದ ಮೇಲೆ ಆಸ್ವಾದನೆಯೊಳಗಿನ ಏಕತಾನತೆಯ ಮೌನ. ಮೌನವಾದ ಕಣ್ಣುಗಳಲ್ಲೆಲ್ಲ ರೈತ ಹಾಗೂ ಗುಲಾಮ ಇಬ್ಬರೇ ಇದ್ದಿದ್ದು. ಕಥೆ ಮುಗಿದ ಮೇಲೂ ಅದರ ಬಗ್ಗೆಯೇ ಮಾತಾಡುವ ಮನಸ್ಸು ಇರಲಿಲ್ಲ. ತಾವೇ ತಾವಾಗಿ ಕಾಡುವ ಕಥೆಗಳನ್ನ/ವಿಷಯಗಳನ್ನ ಮತ್ತೆ ಮತ್ತೆ ಕಲಕಿಕೊಳ್ಳಬಾರದು ಅನ್ನಿಸಿದ ಮೌನವದು. ರೈತ ಹಾಗೂ ಗುಲಾಮ ಎರಡೂ ಪಾತ್ರಗಳೂ ಹುಟ್ಟಿದಾಗಿಂದ ಒಡೆಯ ಹಾಗೂ ಒಕ್ಕಲಿಗರೆಂಬ ಹೆಸರಲ್ಲಿ ನಮಗೆಲ್ಲ ಪರಿಚಿತರೇ ಆಗಿದ್ದಕ್ಕಿರಬೇಕು, ಕಥೆ ಮುಗಿದ ಮೇಲೂ ಕಾಡುತ್ತದೆ. ನಮ್ಮೊಳಗೇ ಉಳಿಯುತ್ತದೆ.
"ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ..." ಮತ್ತೆ ಬಣ್ಣಿಸುವುದು ಬೇಡ, ದಕ್ಕಿದಷ್ಟೇ ಕಾಡುತ್ತಿದೆ ಬೇಕಾದಷ್ಟು.
ಮತ್ತೊಂದು ಒಳ್ಳೆಯ ಕಥೆಯನ್ನ ಎಂದಿನಂತೆ ಸುಂದರವಾಗಿ ಹಂಚಿಕೊಂಡಿದ್ದಕ್ಕೆ ಧನ್ಯವಾದ.

ಪ್ರೀತಿಯಿಂದ,
-ಶಾಂತಲಾ ಭಂಡಿ.

Sushrutha Dodderi said...

ಕಾಡೋ ಕತೆ.. ಥ್ಯಾಂಕ್ಸ್..

ಆಲಾಪಿನಿ said...

ಜೋಗಿಯವರೆ,
ಕತೆ ‘ಕಾಡು’ತ್ತಿದೆ.
ಮೌನ ಬೇಕೆನ್ನಿಸುತ್ತಿದೆ.
ಆದರೂ ‘ಕಾಡು’ ಬಿಡುತ್ತಿಲ್ಲ.
-ಶ್ರೀದೇವಿ ಕಳಸದ

ಹಳ್ಳಿಕನ್ನಡ said...

ಶೋಷಣೆಯ ಧೀರ್ಘ ನಿಟ್ಟುಸಿರು.
Translation ತುಂಬಾ ಚೆನ್ನಾಗಿದೆ.

Santhosh Ananthapura said...

ಅಧ್ಬುತ ಸಂವೇದನೆಯನ್ನು ಅಭಿವ್ಯಕ್ತಿಸುವ ಸದಾ 'ಕಾಡು'ವ ಕಥೆ

Karnataka Best said...

urina berina nenapu bengalurinali kadutade.... nimma baraha helodu ade tane

ಸಿಂಧು sindhu said...

ಪ್ರೀತಿಯ ಜೋಗಿ,

ತುಂಬ ಇಷ್ಟವಾದ ಕತೆ ಇದು. ವ್ಯಾಪಾರದ ಬದುಕಿನ ಸೂತ್ರಗಳು ಮತ್ತು ಗುಲಾಮಗಿರಿ, ಜೀವನಪ್ರೀತಿ ಮತ್ತು ಬದುಕನ್ನ ಸಹ್ಯವಾಗಿಸುವ ಪರಿಸರ, ನಮ್ಮದೆನ್ನಿಸುವ ಎಲ್ಲವೂ ಕನ್ನಡಿಯ ಗಂಟಾಗುವ ಕ್ಷಣಗಳು.. ತುಂಬ ಒಳ್ಳೆಯ ಅಭಿವ್ಯಕ್ತಿ.
ಮೊನ್ನೆ ಯಾವಾಗಲೋ ಅರ್ಧರಾತ್ರಿಯಲ್ಲಿ ಉದಯಸಿನೆಮಾದಲ್ಲಿ ಬರುತ್ತಿದ್ದ ದೇವರಕಾಡು ಸಿನೆಮಾ ನೋಡಿದ ಸಂಗಾತಿ ಮರುದಿನ ಬೆಳಿಗ್ಗೆ ಹೇಳಿದ ಕತೆ ನೆನಪಾಯಿತು. ಆದರೆ ಅದು ವಿಷಾದಯೋಗವಲ್ಲ.. ಜೀವನಯೋಗ..

ಇಂತಹ ಕತೆಗಳನ್ನ, ಓದನ್ನ ಹಂಚಿಕೊಂಡಿದ್ದಕ್ಕೆ ತುಂಬ ಧನ್ಯವಾದಗಳು.

ಪ್ರೀತಿಯಿಂದ
ಸಿಂಧು

raju hulkod said...

ಕನ­ಸು­ಗಳೂ ಆಶೆ­ಗಳೂ ಇರು­ವ­ವ­ರ­ನ್ನಷ್ಟೇ ದುಡಿ­ಸಿ­ಕೊ­ಳ್ಳ­ಬ­ಹುದು. ಸ್ಥಿತ­ಪ್ರ­ಜ್ಞರು ದುಡಿ­ಯು­ವು­ದಿಲ್ಲ.
Melina salugalu nannanu yochanege talliide. idu ondu kathegintha hechhagi naijatheyeno annisatodagide. THANKS FOR IT.

raju hulkod said...

ಕನ­ಸು­ಗಳೂ ಆಶೆ­ಗಳೂ ಇರು­ವ­ವ­ರ­ನ್ನಷ್ಟೇ ದುಡಿ­ಸಿ­ಕೊ­ಳ್ಳ­ಬ­ಹುದು. ಸ್ಥಿತ­ಪ್ರ­ಜ್ಞರು ದುಡಿ­ಯು­ವು­ದಿಲ್ಲ.
Melina salugalu nannanu yochanege talliide. idu ondu kathegintha hechhagi naijatheyeno annisatodagide. THANKS FOR IT.

ARUN MANIPAL said...

ಪೌಲೋ ಕೋಯೆಲೋನ ದಿ ಅಲ್ ಕೆಮಿಸ್ಡ್ ನೆನಪಾಯಿತು ..ಅದೂ ಮಧ್ಯದಲ್ಲೊಂದು ಕಡೆ ಹೀಗೆ ಅನ್ನಿಸುತ್ತದೆ..;)