
ಯಾರೋ ಹೇಳಿದರು; ಹೊಸದಾಗಿ ಬರೆಯಲು ಶುರುಮಾಡಿರುವ ಲೇಖಕರೆಲ್ಲ ಪದ್ಯ ಬರೆಯುತ್ತಾರೆ. ಒಂದು ಲೇಖನವನ್ನೋ ಕತೆಯನ್ನೋ ಬರೆಯಲು ತುಂಬ ಸಮಯ ಬೇಕಾಗುತ್ತದೆ. ಆದರೆ ಪದ್ಯ ಹಾಗಲ್ಲ, ಎಲ್ಲೆಂದರಲ್ಲಿ ಥಟ್ಟನೆ ಬರೆದುಬಿಡಬಹುದು. ದೀಪಾವಳಿ ವಿಶೇಷಾಂಕಕ್ಕೋ, ಇನ್ಯಾವುದೋ ಸಂಕಲನಕ್ಕೋ ಪದ್ಯ ಕೇಳಿದರೆ ಕೂಡಲೇ ಕಳಿಸುತ್ತಾರೆ. ಅದೇ ಕತೆಯನ್ನೋ ಪ್ರಬಂಧವನ್ನೋ ಕೇಳಿದರೆ ತಡಮಾಡುತ್ತಾರೆ.
ಕವಿತೆಯೆಂದರೆ ಸಂಗ್ರಹವಾಗಿ ಹೇಳುವುದು ಅನ್ನುವ ನಂಬುಗೆ ಹೊಸಕಾಲದ ಕವಿಗಳಲ್ಲಿದೆ. ಬಹುಶಃ ಅದು ಎಲ್ಲ ಕಾಲದ ತರುಣ ಕವಿಗಳಲ್ಲೂ ಇತ್ತೆಂದು ಕಾಣುತ್ತದೆ. ಕವಿತೆಯ ಮೂಲಕ ಏನು ಹೇಳಬೇಕು ಅನ್ನುವುದು ಕೂಡ ಮೊದಲೇ ನಿರ್ಧಾರವಾಗಿಬಿಟ್ಟಂತೆ ಅನೇಕರು ಬರೆಯುತ್ತಾರೆ. `ಸಬ್ಜೆಕ್ಟು ರೆಡಿಯಾಗಿದೆ. ಬರೆಯೋದು ಮಾತ್ರ ಬಾಕಿ. ಒಂದೆರಡು ದಿನದಲ್ಲಿ ಬರೆದುಕೊಡುತ್ತೇನೆ' ಅಂತ ಅನೇಕ ಕವಿಗಳು ಹೇಳುವುದುಂಟು. ಆಧುನಿಕ ಸಂದರ್ಭದಲ್ಲಿ ನಾನು ಸ್ವತಂತ್ರಳು ಅಂದುಕೊಂಡಿರುವ ಮಹಿಳೆ ಸೂಕ್ಪ್ಮಾವಾಗಿ ಹಿಂದಿನ ಕಾಲಕ್ಕಿಂತ ಹೆಚ್ಚು ಶೋಷಣೆಗೆ ಒಳಗಾಗಿದ್ದಾಳೆ. ಇದರ ಬಗ್ಗೆ ಒಂದು ಪದ್ಯ ಬರೀತಿದ್ದೀನಿ ಅಂತ ಕವಿಯೊಬ್ಬರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಹಾಗೆ ಹೇಳಿ ಕೇಳಿ ಬರುವುದು ಕವಿತೆಯಾಗುತ್ತದಾ? ಕವಿತೆಯ ಮೂಲಕ ಏನನ್ನು ಹೇಳಬೇಕೋ ಅದನ್ನು ನಾಲ್ಕು ಸಾಲಲ್ಲೋ ಒಂದು ಪ್ಯಾರಾದಲ್ಲೋ ಹೇಳಿಬಿಡಬಹುದಾದರೆ ಕವಿತೆ ಯಾಕೆ ಬೇಕು? ಅದನ್ನು ಹಾಗೇ ಮಾತಲ್ಲೇ ಹೇಳಿ ಸುಖವಾಗಿರಬಹುದಲ್ಲ? ಪದ್ಯವೆಂಬುದು ಕವಿತೆಯೆಂಬುದು ಒಂದು ಮಾಧ್ಯಮ ಮಾತ್ರವಾ? ಅದು ಕೇವಲ ಒಂದು ಪ್ರಕಾರವಾ? ಹಾಗೆ ಹೇಳುವುದನ್ನು ಹೀಗೆ ಹೇಳುವ ಒಂದು ವಿಧಾನವಾ?
ಬಾವಿಯೊಳಗಡೆ ನೀರು; ಮೇಲಕ್ಕಾವಿ;
ಆಕಾಶದುದ್ದಕೂ ಅದರ ಕಾರಣ ಬೀದಿ;
ಕಾರ್ಮುಗಿಲ ಖಾಲಿ ಕೋಣೆಯ ಅಗೋಚರ ಬಿಂದು
ನವಮಾಸವೂ ಕಾವ ಭ್ರೂಣರೂಪಿ-
ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ-
ಭೂತರೂಪಕ್ಕೆ ಮಳೆ ವರ್ತಮಾನ.
ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ;
ಭತ್ತಗೋಧುವೆ ಹಣ್ಣು ಬಿಟ್ಟ ವೃಂದಾವನ.
ಗುಡಿಗೋಪುರಗಳ ಬಂಗಾರ ಶಿಖರ.
ಯಾವ ಮೇಷ್ಟ್ರು ಕೂಡ ಈ ಸಾಲುಗಳನ್ನು ಅರ್ಥಮಾಡಿಸಲಾರ. ಪದ್ಯ ಅರ್ಥವಾಗುವುದಕ್ಕೆ ಇರುವ ಸಂಗತಿಯೇ ಅಲ್ಲ. ಅದು ಅನುಭವಕ್ಕಷ್ಟೇ ದಕ್ಕುವ ಅಕ್ಪರಲೋಕ. ಏನೂ ಹೇಳದೇ ಎಲ್ಲವನ್ನೂ ಹೇಳುವುದು ಕವಿತೆಯ ಜಾಯಮಾನ. ಏನಾದರೂ ಹೇಳಲಿಕ್ಕೆಂದೇ ಹೊರಟರೆ ಅದು ಸುತ್ತೋಲೆಯಾಗುತ್ತದೆ. ಕರಪತ್ರ ವಾಗುತ್ತದೆ. ವರದಿಯೋ ಟೀಕೆಯೋ ಹೇಳಿಕೆಯೋ ಆಗುತ್ತದೆ. ಪದ್ಯ ಅದಾವುದೂ ಅಲ್ಲ. ಅದು ಮಂತ್ರದ ಹಾಗೆ ವೇದ್ಯವಾಗುವಂಥದ್ದು. ಅರ್ಥವನ್ನು ಮೀರಿದ್ದು.
ಮೇಲೆ ಸೂಚಿಸಿದ ಗೋಪಾಲಕೃಷ್ಣ ಅಡಿಗರ `ಭೂತ' ಕವನವನ್ನು ಓದುತ್ತಾ ಹೋಗಿ; ಹುಟ್ಟು, ಸಾವು, ವಿಷಾದ, ಅವಮಾನ, ತಲ್ಲಣ, ನಿರಾಶೆ ಎಲ್ಲವೂ ಸುತ್ತಿ ಸುಳಿದು ಹೋಗುತ್ತವೆ. ಕೊನೆಯಲ್ಲಿ ಕಣ್ಣಮುಂದೆ ಅನೂಹ್ಯವಾದ ಚಿತ್ರವೊಂದನ್ನು ಅನಾಯಾಸವಾಗಿ ಮೂಡುತ್ತದೆ. ಭೂತ ರೂಪಕ್ಕೆ ಮಳೆ ವರ್ತಮಾನ ಅನ್ನುವ ಸಾಲಿಗೆ ಬರುವ ಹೊತ್ತಿಗೆ ಸಾವು ಬದುಕಾಗಿ ಮಾರ್ಪಾಟು ಹೊಂದಿರುತ್ತದೆ.
ಇದು ಎಲ್ಲರಿಗೂ ಹೀಗೇ ಆಗಬೇಕೆಂದಿಲ್ಲ. ಕವಿತೆಯ ಶಕ್ತಿಯೇ ಅದು. ಅದು ಒಬ್ಬೊಬ್ಬರನ್ನು ಒಂದೊಂದು ತೆರನಾಗಿ ಸ್ಪರ್ಶಿಸುತ್ತದೆ;
ಮೈಯೆಲ್ಲ ಗಡಗುಟ್ಟುತ್ತಲಿದೆಯೇ?
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು-
ಗುಣಿಸುವ ಮಾಯೆಯೆಂಥದು ಹೇಳು.
ಏ ಗಾಳಿ,
ಆ ಕತೆಯನೊರೆದು ಮುಂದಕೆ ತೆರಳು
*****
ಕವಿತೆಯೆಂದರೆ ಬದುಕು. ಬರೆಯದಿರುವುದು ಸಾವು. ಅಡಿಗರೊಮ್ಮೆ ಹೇಳಿದರು;ಕಾವ್ಯ ನನಗೆ ಜೀವನ್ಮರಣದ ಪ್ರಶ್ನೆ. ಬಹುಶಃ ಅದೇ ಸರಿ. ಹಸಿವೆಯ ಹಾಗೆ ಕಾಡದಿದ್ದರೆ, ದಾಹದ ಹಾಗೆ ಕಂಗೆಡಿಸದೇ ಇದ್ದರೆ, ಕಾಮದ ಹಾಗೆ ತಪಿಸದೇ ಇದ್ದರೆ, ಸಾವಿನ ಹಾಗೆ ಮೋಹಿಸದೇ ಹೋದರೆ ಪದ್ಯ ಬರೆಯಬಾರದು. ಕವಿತೆ ಬರೆದು ಕವಿಯಲ್ಲ ಅನ್ನಿಸಿಕೊಳ್ಳುವ ಬದಲು, ಬರೆಯದೇ ಒಂದಲ್ಲ ಒಂದು ದಿನ ಕವಿಯಾದೇನು ಅಂತ ಕಾಯುವುದು ಮೇಲು.
ಕಾವ್ಯಕ್ಕೆ ವಿಚಿತ್ರವಾದ ಸಮಸ್ಯೆಗಳಿವೆ. ಅನಂತಮೂರ್ತಿಯವರ ಬರಹಗಳಲ್ಲಿ ಆಗುವ ಹಾಗೆ, ಎಷ್ಟೋ ಸಾರಿ ಗದ್ಯಕ್ಕೆ ಪದ್ಯದ ತಳಮಳಗಳನ್ನು ಹೊತ್ತುಕೊಳ್ಳುವ ಶಕ್ತಿಯಿದೆ. ಆದರೆ ಪದ್ಯ ಹಾಗಲ್ಲ, ಅದು ಗದ್ಯದ ಭಾರಕ್ಕೆ ಮುಳುಗುತ್ತದೆ. ಜಯಂತ ಕಾಯ್ಕಿಣಿ ಬರೆದ ಅನೇಕ ಕವಿತೆಗಳನ್ನೂ ಇದಕ್ಕೆ ಉದಾಹರಣೆಯಾಗಿ ಕೊಡಬಹುದು.
ಕವಿಗಳ ಸಮಸ್ಯೆಯೆಂದರೆ ಅವರು ಗೊತ್ತಿರುವ ಸಂಗತಿಗಳ ಕುರಿತು ಬರೆಯುತ್ತಾರೆ. ಗೊತ್ತಿರುವುದರ ಕುರಿತು ಬರೆದದ್ದು ಯಾವತ್ತೂ ಕವಿತೆ ಆಗಲಾರದು. ಬರೆಯುವ ಹೊತ್ತಿಗೆ ಕವಿಗೂ ಗೊತ್ತಿಲ್ಲದೇ ಹೋದದ್ದು ಮಾತ್ರ ಕಾವ್ಯವಾಗಿ ಒಡಮೂಡುತ್ತದೆ. ಮಹಾಭಾರತವೋ ರಾಮಾಯಣವೋ ಕಾವ್ಯವಾಗುವುದ ಅದರಲ್ಲಿರುವ ಕಥನದ ಅಂಶದಿಂದಲ್ಲ, ಬೆರಗುಗೊಳಿಸುವ ಕವಿಗೂ ಗೊತ್ತಿಲ್ಲದ ಸತ್ಯಗಳ ಅನಾವರಣದಿಂದ.
ಗೊತ್ತಿಲ್ಲದ್ದು ಗೊತ್ತಾಗುವ ಕ್ಪಣಕ್ಕೆ ಒಳ್ಳೆಯ ಉದಾಹರಣೆ ಲಂಕೇಶರ ಅವ್ವ;
ಕಾಲು ಶತಮಾನದ ಬಳಿಕ;
ಜಗಳಗಂಟಿಯಾಗಿದ್ದ ಈ ಅವ್ವ ಈಗ ನನ್ನಲ್ಲಿ
ವಿನಯ ಮತ್ತು ಮೌನ.
ಹಾಗೆ ಗೊತ್ತಿಲ್ಲದೇ ಹುಟ್ಟಿದ್ದು ರಾಮಾಯಣ. ಗೊತ್ತಿಲ್ಲದೇ ಹುಟ್ಟಿದ್ದು ಕುಮಾರವ್ಯಾಸನ ಭಾರತ. ಬೇಂದ್ರೆಯ ಎಷ್ಟೋ ಕವಿತೆಗಳಿಗೆ ಗೊತ್ತಿಲ್ಲ, ಗುರಿಯಿಲ್ಲ. ತುಂಬ ಸರಳವಾಗಿ ಹೇಳಬೇಕೆಂದರೆ ಕೆಎಸ್ ನರಸಿಂಹಸ್ವಾಮಿ ಬರೆದದ್ದೂ ಅದೇ;
ಗೋರಿದೀಪದ ಕೆಳಗೆ ಹಲ್ಲಿ ಐದರ ಹರಕೆ
ತಳವಿರದ ತಟ್ಟೆಯಲ್ಲಿ ಐದು ಗೆಜ್ಜೆ
ಪಳಯುಳಿಕೆ ಕನಸಾಚೆಗೈದು ಬಣ್ಣದ ಹಸೆಗೆ
ಬಂದ ಸುಂದರಿ ನಿನಗೆ ಎಷ್ಟು ಲಜ್ಜೆ?
ಮಾತಿನಲ್ಲಿ ಹುಟ್ಟಿದ್ದು ಗದ್ಯ, ಆತ್ಮದಲ್ಲಿ ಹುಟ್ಟಿದ್ದು ಪದ್ಯ; ಒಳ್ಳೆಯ ಕವಿಗಾಗಿ ಮಾತಿಗಾಗಿ ತಡಕಾಡುತ್ತಾನೆ. ಥಟ್ಟನೆ ಹೊರಹೊಮ್ಮಿದರೆ ಅದು ಚಿಕ್ಕಮಗಳೂರು ಕಣ್ಣ್ ಸಾಹಿತ್ಯವಾಗುತ್ತದೆಯೇ ಹೊರತು ಕವಿತ್ವ ಆಗುವುದಿಲ್ಲ. ಕವಿ ಏನನ್ನೋ ಹೇಳಹೊರಟಾಗ ಅದು ಅನುಭವವೂ ಆಗಿರುವುದಿಲ್ಲ, ಅನುಭಾವವೂ ಆಗಿರುವುದಿಲ್ಲ. ಅವೆರಡನ್ನೂ ಮೀರಿದ ಇನ್ನೇನೋ ಆಗಿ ಅವನಿಗೇ ಗೊತ್ತಾಗದ ಹಾಗೆ ಬರೆಸಿಕೊಂಡು ಬಿಡುತ್ತದೆ;
Nor dread nor hope attend
A dying animal;
A man awaits his end
Dreading and hoping all
Many times he died
Many times rose again
A great man in his pride
confronting murderous man
casts derision upon
Supersession of breath;
He knows death to the bone
Man has created death.
ಯೇಟ್ಸನ ಈ ಪದ್ಯದ ಸೊಬಗನ್ನು ನೋಡಿ. ಇಲ್ಲಿಯ ಒಂದು ಅಕ್ಪರವನ್ನು ಕಿತ್ತರೂ ಕೂಡ ಇಡೀ ಪದ್ಯ ಅರ್ಥ ಕಳಕೊಳ್ಳುತ್ತದೆ. ಸಾವಿನ ನಿಗೂಢತೆಯನ್ನು ಮೀರಿ ನಿಲ್ಲುವ ಪ್ರಯತ್ನ ಇದಲ್ಲ. ಕೇವಲ ಚಿಂತನೆಗಳನ್ನೇ ಹರಳುಗಟ್ಟಿರುವ ಈ ಸಾಲುಗಳನ್ನು ಒಟ್ಟಾಗಿ ಓದಿಕೊಂಡಾಗ ಅವು ಕೇವಲ ಚಿಂತನೆಗಳಷ್ಟೇ ಆಗಿ ಉಳಿಯುವುದಿಲ್ಲ. ಕೊನೆಯಲ್ಲಿ ಅರಿವಾಗುವ ಭಾವ ಇಡೀ ಕವಿತೆಯನ್ನು ಬೆಳಕಾಗಿಸುತ್ತದೆ. ಮನುಷ್ಯ ತನ್ನ ಯೋಚನೆಯಲ್ಲಿ, ಬುದ್ಧಿವಂತಿಕೆಯಲ್ಲಿ, ಜ್ಞಾನದಲ್ಲಿ ಸಾಯುವ ಮೊದಲೇ ಸಾವನ್ನು ಕಾಣಬಲ್ಲ. ಅದರ ಭೀಕರತೆಯನ್ನು ಅರಿಯಬಲ್ಲ. ಆದರೆ ಪ್ರಾಣಿಗಳಿಗೆ ಸಾವೆಂಬುದೇ ಇಲ್ಲ. ಯಾಕೆಂದರೆ ಅವುಗಳಿಗೆ ಸಾವಿನ ಬಗ್ಗೆ ಏನೇನೂ ಗೊತ್ತಿಲ್ಲ!
ಒಂದು ಕವಿತೆಯಲ್ಲಿ ಒಬ್ಬ ಕವಿಯ ವ್ಯಕ್ತಿತ್ವ ಅಭಿವ್ಯಕ್ತಗೊಳ್ಳುತ್ತದೆ ಅನ್ನುವುದೂ ಸುಳ್ಳು. ಕವಿ ಯಾವುದು ಅಲ್ಲವೋ ಅದು ಕವಿತೆಯಾಗಿ ಮೂಡುತ್ತದೆ. ಹೀಗಾಗಿ ಬೇಂದ್ರೆ ಹೇಳಿದ್ದು ನಿಜ; ಬೇಂದ್ರೆಯೊಳಗೆ ಒಬ್ಬ ಕವಿಯಿದ್ದಾನೆ. ಆ ಕವಿ ಬೇಂದ್ರೆಯೇ ಆಗಿರಬೇಕಿಲ್ಲ. ಹಾಗೆ ನೋಡಿದರೆ ಯಾವ ಲೇಖಕನೂ ಇಡಿಯಾಗಿ ಅವನೊಬ್ಬನೇ ಆಗಿರುವುದಿಲ್ಲ. ಆತ ತನ್ನ ಕಾಲದ ಅಸಂಖ್ಯಾತ ರೂಪಕಗಳ, ಪ್ರತಿಮೆಗಳ, ತಲ್ಲಣಗಳ ಒಟ್ಟು ಮೊತ್ತ.
ದೇವರು ರುಜು ಮಾಡಿದನು; ಕವಿ ಪರವಶನಾಗುವ ಅದ ನೋಡಿದನು!
ಅಲ್ಲಿ ಬರೀ ಕುವೆಂಪು ಮಾತ್ರ ಇದ್ದಿದ್ದರೆ ಬಹುಶಃ ಅವರು ಪರವಶರಾಗುತ್ತಿರಲಿಲ್ಲ; ಬರೀ ನೋಡುತ್ತಿದ್ದರು.
(ಚಿತ್ರ- ಅಪಾರ.)
ನನ್ನ ಸಂಕಲನವೊಂದಕ್ಕೆ ಅಪಾರ ವಿನ್ಸಾಸಗೊಳಿಸಿದ್ದು.
8 comments:
ಹೀಗೆ ಅಂತರ್ಜಾಲದಲ್ಲಿ ದಿಕ್ಕು,ದಿಸೆಯಿಲ್ಲದೆ ಅಲೆವಾಗ ಜೋಗಿ ಮನೆ ಕಾಣಸಿಕ್ಕಿತು. ತಂಪಾಗಿದೆ ಇಲ್ಲಿ. ಆಗಾಗ ಬಂದು ಇಲ್ಲಿ ಠಿಕಾಣಿ ಹೂಡಿದರೆ ನಿಮಗೇನು ತೊಂದರೆ ಇಲ್ಲ ತಾನೇ?
ಪದ್ಯದ ಬಗ್ಗೆ ಇಷ್ಟು ಸುಂದರವಾಗಿ ಬರೆದಿರುವುದು ಓದಿ ಬಹಳ ಕಾಲ ಆಗಿತ್ತು. ಕಾವ್ಯ ಅನ್ನೋದು ಪದ್ಯದಲ್ಲಿ ಮಾತ್ರ ಇರೋದಲ್ವಲ್ಲ... ಲಂಕೇಶರ ಟೀಕೆ-ಟಿಪ್ಪಣಿ ನೆನಪಿಗೆ ಬಂತು. ಬಹಳ ಬಹಳ ಬಹಳ ಥ್ಯಾಂಕ್ಸ್...
http://anivaasi.blogspot.com
ಅತಿಥಿ ದೇವೋ ಭವ.
ನೆಂಟರು ಪರಮನೆಂಟ ಆದರೂ ಸಂತೋಷವೇ. ಮನೆ ಚಿಕ್ಕದು, ಆದರೆ ಸೊಳ್ಳೆ ಕಾಟ ಇಲ್ಲ.
ಅನಿವಾಸಿಯವರಿಗೊಂದು ಥ್ಯಾಂಕ್ಸ್. ನಿಮ್ಮ ನಿವಾಸಕ್ಕೂ ಹೋಗಿ ಬಂದೆ. ಸೇತುವೆಯನ್ನು ನೋಡಿ ಬಂದೆ, ದಾಟಲಿಲ್ಲ.
ಥ್ಯಾಂಕ್ಸ್...
ನಮಸ್ಕಾರ ಜೋಗಿ. ಹೀಗೇ ತಿರುಗಾಡುತ್ತಾ ಬಂದೆ; ನಿಮ್ಮ ಮನೆ ಸಿಕ್ಕಿತು. ಆಸರಿಗೆ ಅಕ್ಕರೆಯ ಅಕ್ಷರ ಪಾನಕ ಇತ್ತು, ಇನ್ನೇನು ಬೇಕು? ಒಂದಿಷ್ಟು ನಿಂತೆ, ಕೂತೆ.
ಪದ್ಯ ಸಲೀಸು ಅಂತ ನಾನೂ ಅಂದುಕೊಂಡಿದ್ದೇನೆ; ಆದರೆ ಅಕ್ಷರಗಳನ್ನು ಕರೆದು ಸಾಲಿನಲ್ಲಿ ನಿಲ್ಲಿಸಿ, ಕೂರಿಸಿ ಪದ್ಯ ಬರೆಯುವುದು ನನ್ನ ಜಾಯಮಾನವಲ್ಲ, ಅದು ನನ್ನದಲ್ಲದ ಪದ್ಯ. ನಿಮ್ಮದೇ ಒಂದು ಮಾತಿನಂತೆ ಪದ್ಯ ತನ್ನ-ತಾನೇ ಬರೆಸಿಕೊಳ್ಳುತ್ತದೆ, ಯಾರೂ ಬರೆಯುವುದಲ್ಲ. ಆಮೇಲೆ ಒಮ್ಮೆ ಓದಿ, "ಇದನ್ನು ನಾನೇ ಬರೆದೆನೆ?" ಅನ್ನುವ ಬೆರಗು ಮಾತ್ರ ನನ್ನದು. ಪದ್ಯ ನನ್ನ ಕಡೆ ನಕ್ಕ ಹಾಗೆ ಗದ್ಯ ನಗದು, ಅದಕ್ಕಾಗಿ ಪದ್ಯ ನನಗಿಷ್ಟ.
It captures a mood of poetry very well. All good creative work, tends to capture the unknown through the known process. That leap should happen. Unless that happens I believe, creative expression does not climb the peak. I like your blog and it is different from rest. Like a honest diary it reads.
I want to you write on Gangdhar Cittal. His 72 poems are all time great and exemplary how an individual experience translate into the man kind challenge.
Btw, I also liked way you have written on Khasaneesar. Ashwrohi, I felt it did not make the transition from individual experience – however any great writings always will lend to debate. You could have avoided narrating his person tragedies. I always afraid, knowing writer background in details may hamper good reading (not necessarily). Those generation are different, Lankesh, URA, Desai, Srikrishna Alanahalli, Devanur, Tejashwi all have written deep and insightful stories and we can read N number of times same. Each time it appears as new
Warm Regards
ashok
ಸರ್, ನಿಮ್ಮನ್ನು ಬ್ಲಾಗ್ಲೋಕದಲ್ಲಿ ಕಂಡು ಸಿಕ್ಕಾಪಟ್ಟೆ ಖುಷಿಯಾಯಿತು. 'ಹಾಯ್'ನಲ್ಲಿ ನಿಮ್ಮ ಬರಹಗಳನ್ನು ಓದಿ ಮೊದಮೊದಲು ಹುಚ್ಚು ಹಿಡಿಯುವಂತಾಗುತ್ತಿತ್ತು: 'ಯಾರಪ್ಪಾ ಈಕೆ ಜಾನಕಿ...' ಅಂತ. ಕೊನೆಗೆ ಅದು 'ರವಿ ಕಾಣದ್ದನ್ನೂ ಕಾಣುವ' ಜೋಗಿ ಅಂತ ಗೊತ್ತಾಯಿತು.'ಜಾನಕಿ ಕಾಲಂ' ಹೆಸರಿನಲ್ಲಿ ಆ ಬರಹಗಳು ಪುಸ್ತಕವಾಗಿ ಪ್ರಕಟವಾಗಿದೆ ಅಂತ ಗೊತ್ತಾದ ತಕ್ಷಣ ಹೋಗಿ ಕೊಂಡುಬಂದು ನನ್ನ ಲೈಬ್ರರಿಗೆ ಸೇರಿಸಿದ್ದೆ.
ನನ್ನನ್ನು ಅದೆಷ್ಟೋ ಒಳ್ಳೆಯ ಕೃತಿಗಳನ್ನು ಓದುವಂತೆ ಪ್ರೇರೇಪಿಸಿದ್ದು ನಿಮ್ಮ ಬರಹಗಳು ಸರ್. ಕತೆ, ಕವಿತೆಗಳ ರಚನೆಯ ಬಗ್ಗೆ ನೀವು ಬರೆದ ಬರಹಗಳೇ ನನ್ನ ಬ್ಲಾಗ್-ಬರಹಗಳಿಗೆ ಇವತ್ತಿಗೂ ಮಾರ್ಗದರ್ಶಿಗಳು. ಥ್ಯಾಂಕ್ಸ್ ಎ ಲಾಟ್ ಫಾರ್ ದಟ್.
ಈಗ ಇಲ್ಲಿ ಸಿಕ್ಕಿದ್ದೀರಾ, ಇನ್ನು ಬಿಡುವುದಿಲ್ಲ ಬಿಡಿ :)
ಪ್ರಿಯ ಅಶೋಕ್
ನಿಮ್ಮ ಮಾತು ಸರಿ. ಲೇಖಕರ ಖಾಸಗಿ ಸಂಕಟಗಳು ಅವರ ಬರಹವನ್ನು ಓದುವ ಹೊತ್ತಿಗೆ ಓದುಗನನ್ನು ಯಾವತ್ತೂ ಪ್ರಭಾವಿಸುವಂತಿರಬಾರದು. ನಾನು ಖಾಸನೀಸರ ನೋವಿನ ಬಗ್ಗೆ ಬರೆಯಬಾರದಿತ್ತು ಅಂತ ಈಗ ಅನ್ನಿಸುತ್ತಿದೆ. ನಿಮ್ಮ ಸಲಹೆಗೆ ಥ್ಯಾಂಕ್ಸ್.
ಗಂಗಾಧರ ಚಿತ್ತಾಲರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.
"ಪದ್ಯಂ ವಧ್ಯಂ ಗದ್ಯಂ ಹೃದ್ಯಂ" ಎಂದ ಪಿ.ಇ.ಟಿ ಮಾಸ್ಟ್ರು (= ನಂದಳಿಕೆ ಲಕ್ಷ್ಮೀನಾರಾಯಣ = ಮುದ್ದಣ) ಮತ್ತು ನಾನು ಒಂದೇ ತಾಲೂಕಿನವರು (ಕಾರ್ಕಳ) ಆದ್ದರಿಂದ ನನಗೂ ಪದ್ಯ ಅಷ್ಟಕ್ಕಷ್ಟೇ!
Post a Comment