Tuesday, February 26, 2008

ಅವನು ಮರಳಿ ಬಂದಿದ್ದ..


ನಾನು ಸಾಗರಕ್ಕೆ ಕಾಲಿಟ್ಟದ್ದು ಪಿಯೂಸಿ ಮುಗಿಸಿದ ನಂತರ. ನಮ್ಮೂರಲ್ಲಿ ಡಿಗ್ರಿ ಕಾಲೇಜು ಇಲ್ಲದೇ ಇದ್ದದ್ದರಿಂದ ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡೆ. ಸಾಗರದಲ್ಲಿ ರೂಮು ಮಾಡಿಕೊಂಡೋ ಮನೆ ಬಾಡಿಗೆಗೆ ಮಾಡಿಕೊಂಡೋ ಓದುವಷ್ಟು ಅನುಕೂಲ ನನಗಿರಲಿಲ್ಲ. ಹೀಗಾಗಿ ನನ್ನ ದೊಡ್ಡಪ್ಪ ಇಬ್ಬರು ಗೆಳೆಯರ ವಿಳಾಸ ಕೊಟ್ಟು ಅವರಲ್ಲೊಬ್ಬರ ಮನೆಯಲ್ಲಿರುವಂತೆ ಸೂಚಿಸಿದ್ದರು. ಚಂದ್ರಮಾವಿನಕೊಪ್ಪಲಿನ ರಾಜಶೇಖರ ಮೂರ್ತಿಗಳ ಮನೆ ಒಂದು. ಗಿಳಲಗುಂಡಿಯ ಶಂಕರಪ್ಪನವರ ಮನೆ ಇನ್ನೊಂದು. ನಾನು ಇಬ್ಬರ ಮನೆಗಳಿಗೂ ಹೋಗಿ, ಕೊನೆಗೆ ರಾಜಶೇಖರ ಮೂರ್ತಿಗಳ ಮನೆಯನ್ನೇ ಆರಿಸಿಕೊಂಡೆ. ಯಾಕೆಂದರೆ ಆ ಮನೆಯಲ್ಲಿ ರಾಜಶೇಖರ ಮೂರ್ತಿಗಳಾಗಲೀ ಅವರ ಕುಟುಂಬದವರಾಗಲೀ ವಾಸಮಾಡುತ್ತಿರಲಿಲ್ಲ. ಅವರ ಮಗ ಬೆಂಗಳೂರಿನಲ್ಲಿ ಓದುತ್ತಿದ್ದ. ಮೂರ್ತಿಗಳೂ ರಾಜಕೀಯದಲ್ಲಿ ಸಣ್ಣಮಟ್ಟಿಗೆ ಹೆಸರು ಮಾಡಿ ಬೆಂಗಳೂರು ಧಾರವಾಡ ಅಂತ ಓಡಾಡಿಕೊಂಡಿದ್ದರು. ಹೀಗಾಗಿ ಆ ಮನೆಯ ಏಕಾಂತ ನನಗೆ ತುಂಬ ಹಿಡಿಸಿತ್ತು.
ಚಂದ್ರಮಾವಿನಕೊಪ್ಪಲು ಸಣ್ಣ ಹಳ್ಳಿ. ರಾಜಶೇಖರ ಮೂರ್ತಿಗಳ ಮನೆ ಬಿಟ್ಟರೆ ಅಲ್ಲಿದ್ದ ಮನೆಗಳು ಏಳೋ ಎಂಟೋ. ಅವುಗಳ ಪೈಕಿ ಎರಡು ಮನೆಗಳು ಮೂರ್ತಿಗಳ ಮನೆಯ ಹತ್ತಿರವೇ ಇದ್ದವು. ಒಂದು ನಿವೃತ್ತ ಮಿಲಿಟರಿ ಅಧಿಕಾರಿ ರಾಜೇಗೌಡರ ಮನೆ. ಮತ್ತೊಂದು ಲೀಲಾಬಾಯಿ ಕಾಮ್ರ ಮನೆ. ಲೀಲಾಬಾಯಿ ಕಾಮತರಿಗೆ ಮೂವರು ಸುಂದರಿಯರಾದ ಹೆಣ್ಣುಮಕ್ಕಳು. ಅವರ ಪೈಕಿ ದೊಡ್ಡವಳ ಹೆಸರು ಸರೋಜಿನಿ. ಅವಳೂ ಲಾಲ್ ಬಹಾದೂರ್ ಕಾಲೇಜಿನಲ್ಲೇ ಪಿಯೂಸಿ ಓದುತ್ತಿದ್ದಳು. ಹೀಗಾಗಿ ನನ್ನ ಜೊತೆಗೇ ಕಾಲೇಜಿಗೆ ಬರುವುದಕ್ಕೆ ಶುರುಮಾಡಿದಳು. ಅವಳು ಅಂಗಳದಲ್ಲಿ ಅಡ್ಡಾಡುವುದನ್ನು ನೋಡಬಹುದು ಎಂದುಕೊಂಡು ಆ ಮನೆ ಕಾಣುವಂಥ ರೂಮನ್ನೇ ಆರಿಸಿಕೊಂಡು ಕಿಟಕಿ ಹತ್ತಿರವೇ ಟೇಬಲ್ ಚೇರು ಹಾಕಿಕೊಂಡು ಓದುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೆ. ಕಣ್ಣೆತ್ತಿ ನೋಡಿದರೆ ಸರೋಜಿನಿಯ ಮನೆ ಕಾಣಿಸುತ್ತಿತ್ತು. ಕೊಂಚ ಕಣ್ಣು ತಿರುಗಿಸಿದರೆ ರಾಜೇಗೌಡರ ಮನೆಯಂಗಳ ಕಾಣಿಸುತ್ತಿತ್ತು.
ರಾಜೇಗೌಡರಿಗೆ ಎಪ್ಪತ್ತು ದಾಟಿರಬಹುದು. ಆದರೂ ಗಟ್ಟಿಮುಟ್ಟಾಗಿದ್ದರು. ಬೆಳಗ್ಗೆ ಎದ್ದು ತಾವೇ ಬಾವಿಯಿಂದ ನೀರು ಸೇದಿ ಸ್ನಾನ ಮಾಡುತ್ತಿದ್ದರು. ನಂತರ ಮನೆ ಮುಂದಿನ ಪುಟ್ಟ ಕೈತೋಟದಲ್ಲಿ ಸದಾ ಏನಾದರೊಂದು ಕೆಲಸ ಮಾಡುತ್ತಿರುತ್ತಿದ್ದರು. ಅವರ ಮನೆಗೆ ಯಾರಾದರೂ ಬಂದಿದ್ದನ್ನಾಗಲೀ, ಅವರು ನಕ್ಕದ್ದನ್ನಾಗಲೀ ನಾನು ಕಂಡಿರಲಿಲ್ಲ. ತೋಟಕ್ಕೆ ಬರುವ ಮಂಗಗಳನ್ನೂ ರಾಜೇಗೌಡರು ಗುಂಡಿಟ್ಟು ಕೊಲ್ಲುತ್ತಾರೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಊರಲ್ಲಿ ಅವರಿಗೆ ಅಂಥ ಒಳ್ಳೆಯ ಹೆಸರಿರಲಿಲ್ಲ. ಮಹಾ ಜಿಪುಣ ಅನ್ನುವ ಬಿರುದಂತೂ ಅವರಿಗೆ ಅಂಟಿಕೊಂಡಿತ್ತು.
-2-
`ದರಿದ್ರದೋನೆ... ಹೋಗ್ತಿಯೋ ಇಲ್ವೋ.... ಶೂಟ್ ಮಾಡ್ತೀನಿ ನೋಡು... ಈಡಿಯಟ್...
ಹಾಗಂತ ಯಾರೋ ಯಾರನ್ನೋ ಬೈಯುವುದು ಕೇಳಿಸುವ ಹೊತ್ತಿಗೆ ನಾನು ಕಾಲೇಜಿಗೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಈ ಅಬ್ಬರದ ದನಿಕೇಳಿ ಕಿಟಕಿಯಿಂದ ಹೊರಗೆ ನೋಡಿದರೆ ಹೆಗಲಿಗೊಂದು ಕಂಬಳಿಹಾಕಿಕೊಂಡು ದೈನೇಸಿಯಂತೆ ಕಾಣುವ ಸಣಕಲನೊಬ್ಬ ರಾಜೇಗೌಡರ ಮನೆಯಂಗಳದಲ್ಲಿ ನಿಂತಿದ್ದು ಕಾಣಿಸಿತು. ಅವನನ್ನು ನೋಡಿದರೆ ಭಿಕ್ಪದವನಂತೆ ಕಾಣಿಸುತ್ತಿದ್ದ. ರಾಜೇಗೌಡರು ಕೆಂಡಾಮಂಡಲ ಸಿಟ್ಟಾಗಿ ಅವನನ್ನು ಅಟ್ಟಲು ಯತ್ನಿಸುತ್ತಿದ್ದರು. ಅವನು ಕ್ಪೀಣ ದನಿಯಲ್ಲಿ ಏನೋ ಕೇಳುತ್ತಿದ್ದ. ರಾಜೇಗೌಡರು ಬೈದಂತೆಲ್ಲ ದೂರ ಹೋಗಿ ಅವರು ಸುಮ್ಮನಾದಂತೆಲ್ಲ ಮತ್ತೆ ಹತ್ತಿರ ಬರುತ್ತಿದ್ದ.
ನಾನು ನೋಡನೋಡುತ್ತಿದ್ದಂತೆ ರಾಜೇಗೌಡರು ಮತ್ತೊಮ್ಮೆ ಜೋರಾಗಿ ಅಬ್ಬರಿಸಿ ಒಳಗೆ ಹೋದರು. ಅವನೂ ಓಡೋಡುತ್ತಾ ಅವರನ್ನು ಹಿಂಬಾಲಿಸಿಕೊಂಡು ಮನೆಯ ಎರಡು ಮೆಟ್ಟಿಲು ಹತ್ತಿ ಬೇಡತೊಡಗಿದ. ಅಷ್ಟು ಹೊತ್ತಿಗೆ ಒಳಗೆ ಹೋದ ಗೌಡರು ತಮ್ಮಕೋವಿಯೊಂದಿಗೆ ಹೊರಬಂದು ಸುಟ್ಟು ಬಿಡುತ್ತೇನೆ ಎಂಬಂತೆ ಸನ್ನೆ ಮಾಡಿದರು. ಆತ ಅದು ಈ ಮುದುಕನಿಂದ ಆಗದ ಕೆಲಸ ಎಂಬಂತೆ ಮತ್ತೊಂದು ಮೆಟ್ಟಿಲು ಹತ್ತಿದ. ಇದ್ದಕ್ಕಿದ್ದಂತೆ ಕೋವಿಯನ್ನು ಥಟ್ಟನೆ ಹಿಂದೆ ತಿರುಗಿಸಿ ಅವನನ್ನು ರಾಜೇಗೌಡರು ತಳ್ಳಿದರು. ಈ ಅನಿರೀಕ್ಪಿತ ಆಘಾತದಿಂದ ಆತ ಆಯತಪ್ಪಿ ದೊಪ್ಪನೆ ಮೆಟ್ಟಿಲಿನಿಂದ ಕೆಳಗೆ ಉರುಳಿದ. ಅವನ ಕತ್ತು ಕೊನೆಯ ಮೆಟ್ಟಿಲಿಗೆ ಸಿಕ್ಕಿ ತುಂಡಾಗಿರಬೇಕು ಅಂತ ಕಾಣುತ್ತದೆ. ಯಾಕೆಂದರೆ ಆತ ಬಿದ್ದಲ್ಲಿಂದ ಏಳಲಿಲ್ಲ.
ರಾಜೇಗೌಡರ ಮುಖದಲ್ಲಿ ಗಾಬರಿ ಕಾಣಿಸಿತು. ಕೆಳಗಿಳಿದು ಅವನ ಮೈಮುಟ್ಟಿ ಅಲ್ಲಾಡಿಸಿದರು. ನಾಡಿ ಹಿಡಿದು ನೋಡಿದರು. ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದರು. ಯಾರೂ ನೋಡುತ್ತಿಲ್ಲ ಅನ್ನುವುದನ್ನು ಖಾತ್ರಿ ಮಾಡಿಕೊಂಡು ಅವನನ್ನು ಮನೆಯೊಳಗೆ ಎಳೆದುಕೊಂಡು ಹೋದರು. ಅದಾದ ಸ್ವಲ್ಪ ಹೊತ್ತಿನ ನಂತರ ರಾಜೇಗೌಡರ ಜೀಪು ಅತೀವ ವೇಗದಿಂದ ಹೊರಟದ್ದನ್ನೂ ನಾನು ನೋಡಿದೆ. ಬಹುಶಃ ಆ ಭಿಕ್ಪುಕನ ಹೆಣವನ್ನು ಅವರು ಅದರಲ್ಲಿ ಒಯ್ದಿರಬೇಕು ಅಂದುಕೊಂಡೆ.
ಅರೆಗಳಿಗೆಯಲ್ಲಿ ನಡೆದುಹೋದ ಈ ಅನಪೇಕ್ಪಿತ ಕೊಲೆಗೆ ನನ್ನನ್ನು ಬಿಟ್ಟರೆ ಬೇರೆ ಯಾರೂ ಸಾಕ್ಪಿಯಿರಲಿಲ್ಲ. ರಾಜೇಗೌಡರು ಕೊಲೆ ಮಾಡಿದ್ದಾರೆ ಅಂತ ಹೇಳುವ ಧೈರ್ಯವೂ ನನಗೆ ಬರಲಿಲ್ಲ. ಇದಾದ ಮೂರನೆಯ ದಿನ ಚಂದ್ರವಳ್ಳಿಯ ಸಮೀಪ ಭಿಕ್ಪುಕನೊಬ್ಬ ಬಿದ್ದು ಸತ್ತದ್ದು ಪತ್ರಿಕೆಯಲ್ಲಿ ವರದಿಯಾಯಿತು. ಭಿಕ್ಪುಕನ ಸಾವು ಕೊಲೆ ಅನ್ನಿಸಿಕೊಳ್ಳುವುದಾದರೂ ಹೇಗೆ? ಅದಕ್ಕೆ ಹೆಚ್ಚಿನ ಮಹತ್ವವೇನೂ ಸಿಗಲಿಲ್ಲ.
ನಾನು ರಾಜೇಗೌಡರ ಈ ಕೃತ್ಯವನ್ನು ಬಹಿರಂಗಗೊಳಿಸಲಿಲ್ಲ ಯಾಕೆ ಅಂತ ಅನೇಕ ಸಾರಿ ಯೋಚಿಸಿದ್ದೇನೆ. ಅದಕ್ಕೆ ನನ್ನ ಭಯವೊಂದೇ ಕಾರಣವಾಗಿರಲಿಕ್ಕಿಲ್ಲ. ಎಪ್ಪತ್ತರ ಮುದುಕ ಪೊಲೀಸು, ಕೋರ್ಟು ಅಂತ ಅಲೆಯುವುದನ್ನು ನೋಡುವುದು ನನಗೆ ಬೇಕಿರಲಿಲ್ಲ. ಅಷ್ಟಕ್ಕೂ ಅದೇನೂ ಉದ್ದೇಶಪೂರ್ವಕ ಕೊಲೆ ಅಲ್ಲವಲ್ಲ?
ಆದರೆ ಆಮೇಲೆ ರಾಜೇಗೌಡರನ್ನು ನೋಡಿದಾಗೆಲ್ಲ ನನ್ನನ್ನು ಒಂದು ವಿಚಿತ್ರ ಭಾವನೆ ಕಾಡುತ್ತಿತ್ತು. ಒಂದು ವೇಳೆ ಅವರು ಕೊಲೆ ಮಾಡಿದ್ದನ್ನು ನಾನು ನೋಡಿದ್ದೇನೆ ಅಂತ ಗೊತ್ತಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತು? ನನ್ನನ್ನೂ ಅವರು ಕೊಂದುಬಿಡುತ್ತಿದ್ದರಾ? ಹೀಗೆಲ್ಲ ಯೋಚನೆಗಳು ಬರಲಾರಂಭಿಸಿ ನಾನು ಆ ಕಡೆ ನೋಡುವುದನ್ನೇ ಬಿಟ್ಟೆ.
ಅದೇ ತಿಂಗಳು ಇನ್ನೊಂದು ಅನಾಹುತವೂ ಸಂಭವಿಸಿತು. ನಾನು ಬಹುವಾಗಿ ಇಷ್ಟಪಡುತ್ತಿದ್ದ ಸರೋಜಿನಿಯ ಮದುವೆಯೂ ನಡೆದುಹೋಯಿತು. ಶೃಂಗೇರಿಯ ಕಡೆಯ ಸಂಬಂಧವೊಂದು ಕುದುರಿದ್ದರಿಂದ ಲೀಲಾಬಾಯಿ ಅವಳ ಕಾಲೇಜು ಬಿಡಿಸಿ ಮದುವೆ ಮಾಡಿಕೊಟ್ಟರು. ಅದರಿಂದ ಸರೋಜಿನಿಗೇನೂ ಅಂಥ ದುಃಖವಾದಂತೆ ಕಾಣಿಸಲಿಲ್ಲ. ಆಕೆ ಮಣಗಟ್ಟಲೆ ಬಂಗಾರ ಹೇರಿಕೊಂಡು ತನ್ನ ಸಂಭ್ರಮಕ್ಕೆ ತಾನೇ ಬೆರಗಾಗುತ್ತಾ ಓಪನ್ ಜೀಪಿನಲ್ಲಿ ಹೊರಟದ್ದನ್ನು ನಾನು ಕಣ್ಣಂಚು ಒದ್ದೆ ಮಾಡಿಕೊಂಡು ನೋಡಿದೆ.
-3-
ಅದಾಗಿ ಒಂದು ವರುಷ ಕಳೆಯಿತು. ನಾನು ಬಿ.ಎ. ಫೈನಲ್ಲಿನಲ್ಲಿದ್ದೆ. ಟಿ. ಪಿ. ಅಶೋಕರಂಥ ಮೇಷ್ಟರಿದ್ದುದರಿಂದ ಕಾಲೇಜು ಬೋರು ಅನ್ನಿಸುತ್ತಿರಲಿಲ್ಲ. ಪಾಠದ ಜೊತೆ ಸಿನಿಮಾದ ಕುರಿತೂ ಜಗತ್ತಿನ ಒಳ್ಳೊಳ್ಳೆಯ ಕೃತಿಗಳ ಕುರಿತೂ ಅವರು ಹೇಳುತ್ತಿದ್ದರು.
ಆಗಷ್ಟೇ ಮಳೆಗಾಲ ಶುರುವಾಗಿತ್ತು. ನಾನು ಒಂದು ಸಂಜೆ ಭೀಕರ ಮಳೆಗೆ ಒದ್ದೆಯಾಗಿ ಆಗಷ್ಟೇ ಮನೆಗೆ ನಡೆದು ಬರುತ್ತಿದ್ದೆ. ದಾರಿಯಲ್ಲಿ ನನ್ನ ಮೇಲೆ ಸಾಕಷ್ಟು ನೀರು ಹಾರಿಸಿಕೊಂಡು ಒಂದು ಜೀಪು ಹಾದುಹೋಯಿತು. ನನ್ನಿಂದ ಸ್ವಲ್ಪ ಮುಂದೆ ಹೋಗಿ ಇದ್ದಕ್ಕಿದ್ದಂತೆ ನಿಂತಿತು. ಜೀಪಿನ ಒಳಗೆ ನೀರು ಬೀಳದಂತೆ ಹಾಕಿದ್ದ ಟಾರ್ಪಾಲಿನ್ ಪರದೆಯನ್ನು ಸರಿಸಿ ಯಾರೋ ನನ್ನನ್ನು ಒಳಗೆ ಕರೆದರು. ಒದ್ದೆಮುದ್ದೆಯಾಗಿ ಜೀಪಿನೊಳಗೆ ಕುಳಿತವನಿಗೆ ಕಂಡದ್ದು ಸರೋಜಿನಿ. ಆಕೆ ಹೆರಿಗೆಗೆ ತವರಿಗೆ ಬಂದಿದ್ದಳು. ವರುಷಾರು ತಿಂಗಳೊಳಗೆ ಆದ ಬದಲಾವಣೆಗೆ ಬೆರಗಾಗುತ್ತಾ ನಾನು ಅವಳ ಮುಖ ನೋಡಿದೆ. ತನ್ನ ಜೊತೆಗೇ ಕಾಲೇಜಿಗೆ ಹೋಗುತ್ತಿದ್ದ ಏನೂ ತಿಳಿಯದ ಹುಡುಗನೆದುರು ಬಸುರಿಯಾಗಿ ಕುಳಿತ ಬಗ್ಗೆ ಆಕೆಗೆ ಯಾವ ಮುಜುಗರವೂ ಇದ್ದಂತೆ ನನಗೆ ಅನ್ನಿಸಲಿಲ್ಲ. ಇದ್ದಕ್ಕಿದ್ದಂತೆ ದೊಡ್ಡ ಹೆಂಗಸಾಗಿದ್ದೇನೆ ಎಂಬ ಧಾಟಿಯಲ್ಲಿ ಸರೋಜಿನಿ ನನ್ನನ್ನು ಒಂದೆರಡು ಪ್ರಶ್ನೆಗಳನ್ನು ಕೇಳಿದಳು. ನಾನು ಉತ್ತರಿಸಿದೆ.
ಇದಾದ ಒಂದು ತಿಂಗಳ ನಂತರ ಅದೇ ಕಿಟಕಿಯ ಹತ್ತಿರ ಕೂತು ಮಾರ್ಗರೆಟ್ ಅಟ್ ವುಡ್ ಳ ಮೇಲಿನ ವಿಮರ್ಶೆಗಳನ್ನು ಓದುತ್ತಿದ್ದೆ. ಕಣ್ಣು ಅಚಾನಕ ಸರೋಜಿನಿಯ ಮನೆಯ ಕಡೆ ಹರಿಯಿತು. ಗಾಬರಿಬಿದ್ದು ನೋಡಿದೆ. ಸರೋಜಿನಿಯ ಮನೆಯ ಅಂಗಳದಲ್ಲಿ ಅದೇ ಭಿಕ್ಪುಕ ನಿಂತಿದ್ದ. ನಾನು ಖಾತ್ರಿ ಪಡಿಸಿಕೊಳ್ಳಲು ಮತ್ತೊಮ್ಮೆ ನೋಡಿದೆ. ಅದೇ ಹೆಗಲ ಮೇಲೆ ಕಂಬಳಿ ಹೊದ್ದ ದೈನೇಸಿ ಮುಖದ ಭಿಕ್ಪುಕ. ನಾನು ನೋಡನೋಡುತ್ತಿದ್ದಂತೆ ಆತ ನೇರವಾಗಿ ಸರೋಜಿನಿಯ ಮನೆಯೊಳಗೆ ನುಗ್ಗಿದ.
`ಈತ ಸತ್ತಿಲ್ಲ ಹಾಗಿದ್ದರೆ. ಬಹುಶಃ ರಾಜೇಗೌಡನ ಮೇಲೆ ಸೇಡು ತೀರಿಸಿಕೊಳ್ಳಲು ಬಂದಿರಬೇಕು. ಹಾಗಿದ್ದರೆ ಸರೋಜಿನಿ ಮನೆಯ ಒಳಗೆ ಯಾಕೆ ಹೋದ...' ಎಂದು ಯೋಚಿಸುತ್ತಲೇ ನಾನು ಮನೆಯಿಂದ ಹೊರಗೋಡಿ ಬಂದೆ. ನೇರವಾಗಿ ಸರೋಜಿನಿಯ ಮನೆಯತ್ತ ಹೆಜ್ಜೆ ಹಾಕಿದೆ. ಆ ಭಿಕ್ಪುಕ ಏನು ಮಾಡುತ್ತಾನೆ ಅಂತ ನೋಡುವ ಕುತೂಹಲ ನನ್ನದಾಗಿತ್ತು.
ನಾನು ಸರೋಜಿನಿಯ ಮನೆಯೊಳಗೆ ಕಾಲಿಡುವ ಹೊತ್ತಿಗೆ ಅಲ್ಲಿ ಗಿಜಿಗಿಜಿ ಜನಜಂಗುಳಿ. ಒಂದು ಕ್ಪಣದ ಹಿಂದಷ್ಟೇ ಸರೋಜಿನಿ ಗಂಡಮಗುವಿಗೆ ಜನ್ಮವಿತ್ತಿದ್ದಳು. ಆ ಸಂತೋಷದಲ್ಲಿ ಅವರೆಲ್ಲ ಇದ್ದರು. ನಾನೂ ಕೂಡ ಆ ಸಂಭ್ರಮಕ್ಕೆ ಬಂದವನೆಂದುಕೊಂಡು ನನ್ನ ಬಾಯಿಗೂ ಸಕ್ಕರೆ ಹಾಕಿದರು. ಭಿಕ್ಪುಕ ಅಲ್ಲೆಲ್ಲೂ ಕಾಣಿಸಲಿಲ್ಲ. ಒಂದಿಬ್ಬರ ಬಳಿ ವಿಚಾರಿಸಿದ್ದಕ್ಕೆ ಯಾವ ಭಿಕ್ಪುಕನೂ ಬರಲಿಲ್ಲ. ನಾವೆಲ್ಲ ಆಗಿಂದಲೇ ಇಲ್ಲಿದ್ದೇವಲ್ಲ ಅಂದರು. ನಾನು ನೋಡಿದ್ದೇ ಸುಳ್ಳಿರಬಹುದೇನೋ ಅಂದುಕೊಳ್ಳುತ್ತಾ ವಾಪಸ್ಸು ಮನೆಗೆ ಬಂದೆ. ಆವತ್ತಿಡೀ ಓದುವುದಕ್ಕೆ ಸಾಧ್ಯವಾಗಲೇ ಇಲ್ಲ.
-4-
ಹಾಗಿದ್ದರೆ ಭಿಕ್ಪುಕ ಬಂದದ್ದು ಸುಳ್ಳಾ?ಅವನು ಬಂದ ಕ್ಪಣದಲ್ಲೇ ಸರೋಜಿನಿಗೆ ಮಗುವಾಗಿದೆ ಅಂದರೆ ಅವನೇ ಆ ಮಗುವಿನ ರೂಪದಲ್ಲಿ ಬಂದಿದ್ದಾನಾ? ಇತ್ಯಾದಿ ಯೋಚನೆಗಳು ನನಗೆ ಆಗಾಗ ಬರುತ್ತಿದ್ದವು. ಆದರೆ ಅವನ್ನೆಲ್ಲ ನಂಬಲು ನಾನು ಸಿದ್ಧನಿರಲಿಲ್ಲ.
ಇದಾಗಿ ಮತ್ತೆರಡು ವರುಷಗಳು ಸಂದವು. ನಾನು ಶಿವವೊಗ್ಗೆಯ ಆ ಮನೆಯಲ್ಲೇ ಇದ್ದುಕೊಂಡು ಎಂ.ಎ. ಓದುತ್ತಿದ್ದೆ. ಸರೋಜಿನಿ ಅದೇ ಸುಮಾರಿಗೆ ತನ್ನ ಮೂರು ವರುಷದ ಮಗನ ಜೊತೆ ಬಂದಿದ್ದಳು.
ಮೂರು ವರುಷಕ್ಕೆ ಆ ಮಗು ಸಾಕಷ್ಟು ತುಂಟಾಟಿಕೆ ಮಾಡುತ್ತಿತ್ತು. ಸರೋಜಿನಿ ಮಗುವನ್ನು ಮಹಡಿಯ ಮೇಲೆ ಕೂರಿಸಿ ತಾನು ಬೆಳಗಿನ ಬಿಸಿಲಿಗೆ ತಲೆಯೊಣಗಿಸಿಕೊಳ್ಳುತ್ತಾ ನಿಂತಿದ್ದಳು. ಮಗು ಮಹಡಿಯ ಒಣಗಲೆಂದು ಪೇರಿಸಿಟ್ಟಿದ್ದ ಡಬ್ಬಗಳನ್ನು ಕೋಲಿನಿಂದ ಬಡಿಯುತ್ತಾ ಸದ್ದು ಮಾಡುತ್ತಿತ್ತು. ಬಹುಶಃ ಆ ಸದ್ದು ಪಕ್ಕದ ಮನೆಯ ರಾಜೇಗೌಡರಿಗೆ ಕಿರಿಕಿರಿ ಉಂಟು ಮಾಡಿರಬೇಕು. ಅವರು ಸಿಟ್ಟಿನಿಂದ ಧಡ್ ಎಂದು ಬಾಗಿಲು ತೆರೆದು ಹೊರಬರುತ್ತಿರುವುದು ಕಾಣಿಸಿತು. ಇನ್ನೇನು ಆ ಮಗುವಿಗೆ ಹೊಡೆದೇಬಿಡುತ್ತಾರೇನೋ ಎಂಬಂತಿತ್ತು ಅವರ ಮುಖಭಾವ.
ಅವರು ಹೊರಗೆ ಬರುತ್ತಿದ್ದಂತೆ ಮಗು ಮತ್ತೊಮ್ಮೆ ಡಬ್ಬಾಗಳನ್ನು ಕೋಲಿನಿಂದ ಬಡಿಯಿತು. ಮಹಡಿಯ ಬದಿಯಲ್ಲಿಟ್ಟಿದ್ದ ಡಬ್ಬಗಳು ಹೊಡೆತಕ್ಕೆ ಜಾರಿ ಮತ್ತಷ್ಟು ಬದಿಗೆ ಸರಿದಿದ್ದವು. ಮಗುವಿನ ಆ ಹೊಡೆತಕ್ಕೆ ಅಷ್ಟೂ ಡಬ್ಬಗಳೂ ಭೀಕರ ಸದ್ದು ಮಾಡುತ್ತಾ ಜಾರಿ ಸಿಮೆಂಟಿನ ಅಂಗಳಕ್ಕೆ ಬಿದ್ದವು. ಆ ಸದ್ದಿಗೆ ನಾನೇ ಬೆಚ್ಚಿಬಿದ್ದೆ. ಅದೇ ಹೊತ್ತಿಗೆ ಮನೆಯಿಂದ ಹೊರಗೆ ಬಂದ ರಾಜೇಗೌಡ ಈ ಸದ್ದಿಗೆ ಬೆದರಿ ತಡಬಡಾಯಿಸಿ ಮೂರನೆ ಮೆಟ್ಟಿಲಿನಿಂದ ಜಾರಿದ್ದು ನನ್ನ ಕಣ್ಣಿಗೆ ಕಾಣಿಸಿತು. ಅರೆಕ್ಪಣದಲ್ಲೇ ವರುಷಗಳ ಹಿಂದೆ ಭಿಕ್ಪುಕ ಬಿದ್ದಿದ್ದ ಭಂಗಿಯಲ್ಲೇ ರಾಜೇಗೌಡನೂ ಬಿದ್ದಿದ್ದ. ಕೊನೆಯ ಮೆಟ್ಟಿಲಿಗೆ ಕತ್ತು ಹೊಡೆಸಿಕೊಂಡಿದ್ದ.
ಆತ ಸತ್ತು ಹೋಗಿದ್ದ.
-5-
ಮಾರನೆಯ ದಿನ ರಾಜೇಗೌಡನ ಅಂತ್ಯಕ್ರಿಯೆ ನಡೆಯಿತು. ಮುದುಕ ಕಾಲುಜಾರಿ ಬಿದ್ದು ಸತ್ತುಹೋದ ಎಂದು ಜನ ಮಾತಾಡಿಕೊಂಡರು. ಅದಾದ ಹನ್ನೊಂದನೇ ದಿನಕ್ಕೆ ರಾಜೇಗೌಡನ ಉತ್ತರಕ್ರಿಯೆಯೂ ನಡೆದುಹೋಯಿತು. ಬಂದಿದ್ದ ಜನ ರಾಜೇಗೌಡನ ಅಂಗಳದಲ್ಲಿ ನಿಂತು ಬೀಡಿ ಸೇದುತ್ತಾ ಮಾತಾಡಿಕೊಳ್ಳುತ್ತಿದ್ದರು. ನಾನು ಎಂದಿನಂತೆ ಕಿಟಕಿಯಿಂದ ನೋಡುತ್ತಾ ಕೂತಿದ್ದೆ.
ಇದ್ದಕ್ಕಿದ್ದಂತೆ ಆ ಭಿಕ್ಪುಕ ಮತ್ತೆ ಕಾಣಿಸಿಕೊಂಡ. ಈ ಸಾರಿ ಸರೋಜಿನಿಯ ಮನೆಯ ಬಾಗಿಲು ತೆಗೆದು ಹೊರಗೆ ಬಂದು ನಾನು ನೋಡನೋಡುತ್ತಿರುವಂತೆಯೇ ನಡೆದು ದೂರ ದೂರವಾಗುತ್ತಾ ಮರೆಯಾದ. ನಾನು ದಿಗ್ಭ್ರಾಂತನಾಗಿ ನೋಡುತ್ತಾ ಕುಳಿತಿದ್ದೆ.
ಸಂಜೆಯ ಹೊತ್ತಿಗೆ ಸರೋಜಿನಿಯ ಮಗು ಎಲ್ಲೂ ಕಾಣಿಸುತ್ತಿಲ್ಲ ಎಂಬ ಸುದ್ದಿಯ ಜೊತೆಗೇ ಸರೋಜಿನಿಯ ಮುಗಿಲು ಮುಟ್ಟುವ ಆಕ್ರಂದನ ನನ್ನ ಕಿವಿಗೆ ಬಿತ್ತು. ಮನೆಯವರೆಲ್ಲ ಮಗುವಿಗಾಗಿ ಹುಡುಕಾಟ ನಡೆಸಿದ್ದರು. ರಾಜೇಗೌಡರ ಉತ್ತರಕ್ರಿಯೆಯೆ ಬಂದವರ್ಯಾರೋ ಮಗುವನ್ನು ಕದ್ದು ಕೊಂಡು ಹೋಗಿದ್ದಾರೆ ಎಂದೂ ಕೆಲವರು ಊಹಿಸಿ ಮಾತಾಡತೊಡಗಿದರು.
ನಾನು ಏನೂ ತೋಚದೆ ಸರೋಜಿನಿಯ ಮನೆಯ ಹತ್ತಿರ ಹೋದೆ. `ಮಗು ಇವತ್ತಲ್ಲ ನಾಳೆ ಸಿಗುತ್ತೆ. ಎಲ್ಲಿಗೆ ಹೋಗುತ್ತೆ' ಅಂತ ಸರೋಜಿನಿಗೆ ಯಾರೋ ಸಮಾಧಾನ ಹೇಳುತ್ತಿದ್ದರು.
ಮಗು ಸಿಗೋಲ್ಲ ಯಾಕೆಂದರೆ....
ವಿವರಿಸುವ ಶಕ್ತಿ ನನಗಿರಲಿಲ್ಲ.

31 comments:

Bala said...

ಕತೆ ಚೆನ್ನಾಗಿದೆ, ’ಭಿಕ್ಷುಕ್’ ಹೊರಟು ಹೊದ ಮೇಲೂ ಮುಗ್ದವಾದ ಮಗು ಎಂದಿನಂತೆ ಆಟ ಆಡಿಕೊಂಡಿರಬೇಕೆನಿಸಿತು ....

ಬಾಲ.

Anonymous said...

ನಮ್ಮೂರಿನ ಕತೆ!. ಟಿ. ಪಿ. ಅಶೋಕ್ ಹೆಸರು ನೋಡಿ ಆಶ್ಚರ್ಯ ಹಾಗು ಕುತೂಹಲವಾಯಿತು!. ಇಪ್ಪತ್ತು ವರ್ಷಗಳಿಂದ ನಮ್ಮ ಪಕ್ಕದ ಮನೆಯಲ್ಲೀ ಇದ್ದರೂ ನಮ್ಮ ಪಾಲಿಗೆ ಅವರು ಒಂದು ಮುಚ್ಚಿದ ಪುಸ್ತಕ!. ಈ ಕತೆ, ಅವರಷ್ಟೇ ಕುತೂಹಲಕಾರಿಯಗಿದೆ!.

Dr.D.M.Sagar
Canada

ಸುಪ್ತದೀಪ್ತಿ suptadeepti said...

ಅಬ್ಬಬ್ಬಾ! ಇಂಥದ್ದನ್ನು ನೀವು ನೋಡಿದಿರಾ? ದಿವ್ಯದೃಷ್ಟಿ ಇದೆ ಸರ್ ನಿಮಗೆ.

ಸಿಂಧು Sindhu said...

ಪ್ರೀತಿಯ ಜೋಗಿ..

ಒಂದೇ ಉಸಿರಿಗೆ ಓದಿಬಿಟ್ಟೆ. ಸಾಗರದ ಹೆಸರು ಕಂಡ ಕೂಡಲೆ ಮಂತ್ರಮುಗ್ಧ ಮನ.

ಕತೆಯನ್ನ ಮ್ಯಾಜಿಕ್ ಥರಾ ಹೇಳೋದು ಹೇಗೆ ಅಂತ ನಿಮ್ ಹತ್ರ ಕಲ್ತುಕೋಬೇಕು. ಅಸಂಗತವೆನ್ನಿಸಬಹುದಾದ ವಿಷಯವನ್ನ, ಸಾಗರ/(ಅಥವಾ ಯಾವ ಊರಾದರೂ)ದ ಸುತ್ತ ಮುತ್ತಲ ಪ್ರದೇಶ/ವ್ಯಕ್ತಿಗಳನ್ನು ಜೋಡಿಸಿ ಇಟ್ಟು ಓಹ್ ಇದು ನಮ್ಮೂರಿನದೇ ಕತೆ ಅನ್ನಿಸುವ ಹಾಗೆ ಬರೆದ ರೀತಿ ಅನನ್ಯ.

ಥ್ಯಾಂಕ್ಯೂ.

ಪ್ರೀತಿಯಿಂದ
ಸಿಂಧು

dinesh said...

ಕಥೆ ತುಂಬಾ ಚೆನ್ನಾಗಿದೆ......ಸಾಗರದ ಕಾಲೇಜಿನಲ್ಲಿ ಪತ್ರಿಕೋಧ್ಯಮ ಪಾಠ ಮಾಡುತ್ತಿದ್ದ ದಿನಗಳು ನೆನಪಾದವು ...

ಮೋಹನ್ ಮೂರ್ತಿ ಮಾ ಕೆಂ said...

iddakiddanthe magu kaaneyaagidannu oppalu saadyavaaguthilla . . .


-maakem

ಶಾಂತಲಾ ಭಂಡಿ said...

ಪ್ರೀತಿಯ ಜೋಗಿಯವರೆ...
ಭಯ ಆಗತ್ತೆ ಈ ಕಥೆ ಕೇಳಿ. ಹಾಗೇ ಮಗು ಕಾಣೆಯಾಗಿದ್ದಕ್ಕೆ ಬೇಸರವೂ ಕೂಡ. ಕಥೆ ಕೇಳಿದ ನಮಗೇ ಹೀಗಿರಬೇಕಾದರೆ.... ಕಥೆಯನ್ನು ಕಂಡೂ ಹೀಗಿರುವ ನಿಮ್ಮ ಮನಸ್ಥಿತಿಗೆ ಸಲಾಮ್.

krutavarma said...

fantacyಯನ್ನು ವಾಸ್ತವದೊಂದಿಗೆ ಎಷ್ಟೊಂದು ಸಹಜವಾಗಿ ಬೆರೆಸುತ್ತೀರಲ್ವಾ? amazing!
ಗಳಗನಾಥರು, ಟಿ.ಪಿ.ಅಶೋಕ, ಗೋರೂರು, ಭೀಮಸೇನ ಜೋಷಿ... ಇವರೆಲ್ಲ ನಿಮ್ಮ ಕಥೆಯಲ್ಲಿ ಪಾತ್ರವಾಗ್ತಾರೆ. outsiders ಅಂತ ಅನ್ನಿಸೋದೇ ಇಲ್ಲ.
ಸಹಜತೆ, ಸರಳತೆ - ಇವೇ ನಿಮ್ಮ ಕಥೆಯನ್ನು ತುಂಬಾ interesting ಆಗಿ ಮಾಡುತ್ತೇನೋ ಅನ್ಸುತ್ತೆ.

Anonymous said...

ಕತೆ ಮೆಚ್ಚಿಕೊಂಡ ಎಲ್ಲರಿಗೂ ಥ್ಯಾಂಕ್ಸ್. ತುಂಬ ಅನುಮಾನದಿಂದಲೇ ಬರೆದೆ. ಬರೆದ ನಂತರ ಅನುಮಾನ ಹೆಚ್ಚಾಯಿತು. ಹಿಂದೊಮ್ಮೆ ಸಾಗರದ ಹಾದಿಯಲ್ಲಿ ಸಾಗುತ್ತಿರುವಾಗ ಕಣ್ಣಿಗೆ ಬಿದ್ದ ಒಂಟಿ ಮನೆ ಮತ್ತು ಭಿಕ್ಷುಕ ಬರೆಯುವ ಹೊತ್ತಿಗೆ ಕಣ್ಮುಂದಿತ್ತು.
-ಜೋಗಿ

SHREE said...

bahaLa dinagaLa nanthara ondu oLLe kathe odide, thanx jogi sir. inthaddu jaasthi bareeri :)

ಶ್ರೀನಿಧಿ.ಡಿ.ಎಸ್ said...

ಚಂದದ ಕಥೆ ಸಾರ್. ಓದುತ್ತ ಓದುತ್ತ ನಾನೇ ಕಥೆಯೊಳಗೆ ಇಳಿಯುವ ಹೊತ್ತಿಗೆ ಕಥೆ ಮುಗಿದು ಹೋಯಿತು. ನಾನಿನ್ನೂ ಆ ಕಥೆಯೊಳಗೇ ಇದ್ದೇನೆ. ಏನು ಮಾಡಲಿ?

ಜೊತೆಗಿನ್ನೊಂದು ಮಾತು-ಆ ಚಿತ್ರ ಬೇಕಿತ್ತೇ ಈ ಕಥೆಗೆ? ನಮ್ಮ ಭಿಕ್ಷುಕನನ್ನ ನಮಗೇ ಯೋಚಿಸಲು ಬಿಡಬೇಕಿತ್ತು.

ಸುಪ್ತದೀಪ್ತಿ suptadeepti said...

ಶ್ರೀನಿಧಿಯ ಮಾತಿಗೆ ನನ್ನ ಸಹಮತ.

Anonymous said...

ಕತೆಯನ್ನು ಹಾಕುವಾಗ ಚಿತ್ರ ಹಾಕಿರಲಿಲ್ಲ. ಗೆಳತಿ ಯಾಮಿನಿ ಆ ಚಿತ್ರ ಕಳುಹಿಸಿಕೊಟ್ಟು ಇದನ್ನೂ ಜೊತೆಗಿಡು ಅಂದಳು. ಆ ಕಣ್ಣುಗಳ ವಿಷಾದ ನನ್ನನ್ನು ಆಕರ್ಷಿಸಿತು. ಕತೆಗೂ ಚಿತ್ರಕ್ಕೂ ಸಂಬಂಧವಿಲ್ಲ ಎಂದುಕೊಂಡು ಓದಿಕೊಳ್ಳಲಾಗದೇ
-ಜೋಗಿ

ಶ್ರೀನಿಧಿ.ಡಿ.ಎಸ್ said...

ಕಷ್ಟ ಅನ್ನಿಸತ್ತೆ! ಮೊದಲಿಗೇ ಆ ಮುಖ ಕಾಣುವುದರಿಂದ, ಅದನ್ನು ಬಿಟ್ಟು ಯೋಚನೆ ಮಾಡೋಕಾಗೋದು ಸುಲಭವಲ್ಲ ಅನ್ಸತ್ತೆ ಸಾರ್.. ನನ್ನ ಅಭಿಪ್ರಾಯವಷ್ಟೆ..

ವಿಕ್ರಮ ಹತ್ವಾರ said...
This comment has been removed by the author.
ವಿಕ್ರಮ ಹತ್ವಾರ said...

ಒಬ್ಬ ಭಿಕ್ಷುಕನ ಯಾಚನೆ. ರಾಜೇಗೌಡನ ಅವಮಾನ. ಕಾರಣ ಗೊತ್ತಿಲ್ಲ. ಭಿಕ್ಷುಕನ ಸಾವು ಆಕಸ್ಮಿಕ. ಪುನರ್ಜನ್ಮ. ಸೇಡು. ರಾಜೇಗೌಡನ ಸಾವು ಆಕಸ್ಮಿಕದಂತೆ ಕಂಡರೂ ಕೊಲೆ. ಬದುಕಿದ್ದಾಗ ಯಾಚಿಸುವ ಭಿಕ್ಷುಕನಿಗೆ ಸತ್ತ ಮೇಲೆ ಆತ್ಮಾಭಿಮಾನ, ಕೆಚ್ಚು ಮೂಡುತ್ತದೆ. ಅದು ಉದ್ದೇಶಿತ ಅಲ್ಲದ್ದರಿಂದ, ರಾಜೇಗೌಡ ಸಾಯಿಸಿದ್ದು ಭಿಕ್ಷುಕನ ಕೆಚ್ಚಿಗೆ ಕಾರಣ ಇರಲಾರದು. ಹಾಗಿದ್ದರೆ, ಅವನಿಗಾದ ಅವಮಾನವೇ ಕಾರಣವಿರಬೇಕು. ಬದುಕಿರುವಾಗ ಸಹಿಸಿಕೊಳ್ಳುವವನು ಸತ್ತ ಮೇಲೆ ಪ್ರತೀಕಾರಕ್ಕೆ ಹೊರಡುತ್ತಾನೆ. ಬದುಕಿನ ಅನಿವಾರ್ಯತೆ ಮನುಷ್ಯನ ನಿಜವಾದ ಒಳಗನ್ನು ಮರೆಮಾಚಿರುತ್ತದೆಯೇ? ಸಾಯುವುದೆಂದರೆ ಸದ್ಯದ ಅನಿವಾರ್ಯತೆಗಳಿಂದ ದೊರಕುವ ಮುಕ್ತಿಯೇ? ಹಾಗಿದ್ದರೆ, ರಾಜೇಗೌಡನ ನಿಜವಾದ ಒಳಗು ಸಹ ಬೇರೆಯೇ ಇರಬಹುದೇ? ಇಲ್ಲಿ ನಿಜವಾದ ದೋಷಿ ಯಾರು?

Magic realism ? ;)

'ಹಾಗಿದ್ದರೆ ಭಿಕ್ಪುಕ ಬಂದದ್ದು ಸುಳ್ಳಾ?ಅವನು ಬಂದ ಕ್ಪಣದಲ್ಲೇ ಸರೋಜಿನಿಗೆ ಮಗುವಾಗಿದೆ ಅಂದರೆ ಅವನೇ ಆ ಮಗುವಿನ ರೂಪದಲ್ಲಿ ಬಂದಿದ್ದಾನಾ? ಇತ್ಯಾದಿ ಯೋಚನೆಗಳು ನನಗೆ ಆಗಾಗ ಬರುತ್ತಿದ್ದವು.

ಇದನ್ನು ಹೇಳಬೇಕಾದ ಅವಶ್ಯಕತೆ ಇಲ್ಲ ಅನಿಸಿತು.

I was totally involved. Thanks for a nice story.

Anonymous said...

ವಿಕ್ರಮ್
ನೀವು ಹೇಳಿದ್ದು ಸರಿ, ಆ ಸಾಲುಗಳನ್ನು ಹೇಳಬೇಕಾಗಿರಲಿಲ್ಲ. ಅದನ್ನು ಹೇಳಿದ ಮೇಲೂ ನನಗೆ ತೃಪ್ತಿಯಾಗಿಲ್ಲ. ಕತೆ ನಾನು ಹೇಳಬೇಕಾದ್ದನ್ನೋ ತಾನು ಹೇಳಬೇಕಾದ್ದನ್ನೋ ಹೇಳುತ್ತದೆಯೋ ಇಲ್ಲವೋ ಎಂಬ ಅನುಮಾನ. ಭಾವದ ಅಭಿವ್ಯಕ್ತಿಯಲ್ಲಿ ಭಾಷೆಯ ನಿಶ್ಯಕ್ತಿಯಲ್ಲಿ ನಾವು ಎಷ್ಟೋ ಸಲ -ಓವರ್ ಡುಯಿಂಗ್-ಅನ್ನಿಸುವ ಹಾಗೆ ವರ್ತಿಸುತ್ತೇವೆ. ಬದುಕಲ್ಲೂ, ಬರಹದಲ್ಲೂ. ಕರ್ಮ.
-ಜೋಗಿ

Anonymous said...

ಶ್ರೀನಿಧಿ.
ಭಿಕ್ಷುಕನ ಕೊಲೆ ಮಾಡಿದ್ದೇನೆ. ಯಾಮಿನಿ ಮುನಿಸಿಕೊಂಡು ಜಗಳಕ್ಕೆ ಬಂದರೆ, ದೂರವಾದರೆ ಮತ್ತೊಬ್ಬ ಗೆಳತಿಯನ್ನು ಹುಡುಕಿಕೊಡುವ ಹೊಣೆ ನಿಮ್ಮದು ನೆನಪಿರಲಿ.
-ಜೋಗಿ

avanu said...

sarojini bagge odhuvaga nanna ajji mane pakkadhalli iddha preethi nenepadhalu. EEga avalige Eradu makkalu. Eegashte kelasa seriruva nanna nodi nakkalu. Aadhare bikshuka kanisalilla. Photo thegedhu olle kelasa madidiri. Yamini plz kopa beda

ಸುಶ್ರುತ ದೊಡ್ಡೇರಿ said...

ಫೋಟೋ ಗೀಟೋ ಎಲ್ಲಾ ತೆಗೆದಮೇಲೇ ನಾನು ನೋಡಿದ್ದು ಈ ಪೋಸ್ಟು! ಕತೆಯಲ್ಲಿ ನಮ್ಮೂರು ಸಾಗರ, ಟಿ.ಪಿ. ಅಶೋಕ, ಎಲ್.ಬಿ. ಕಾಲೇಜು ಎಲ್ಲಾ ಬಂದದ್ದರಿಂದ ತುಂಬಾ ಇನ್ವಾಲ್ವ್ ಆದ್ನೇನೋ ಅಂದ್ಕೊಂಡೆ ಮೊದಲಿಗೆ; ಆದ್ರೆ ನೀವು ಬೇರೆ ಊರು, ಬೇರೆ ಹೆಸರುಗಳನ್ನು ಹಾಕಿ ಬರ್ದಿದ್ರೂ ಅಷ್ಟೇ ಇನ್ವಾಲ್ವ್ ಆಗಿ ಓದಿಸಿಕೊಳ್ತಿತ್ತು ಈ ಕತೆ ಅನ್ನಿಸ್ತು ಆಮೇಲೆ..

ಕತೆ ನಿಜಕ್ಕೂ ಬಹಳ ಚೆನ್ನಾಗಿದೆ. ಥ್ಯಾಂಕ್ಸ್.

ಸುಶ್ರುತ ದೊಡ್ಡೇರಿ said...

ಹಾಂ, ಹೊಸ ಲೇಔಟೂ..!

ಮೃಗನಯನೀ said...

ಅಹಾ.... ಓದುತ್ತಾ ಆಶ್ಚರ್ಯ ಪಟ್ಟುಕೊಳ್ಳುತ್ತಾ...


ಹೊಟ್ಟೆಕಿಚ್ಚಾಗುತ್ತೆ,ನಂಗೆ ಯಾಕೆ ಇಷ್ಟು ಚೆನ್ನಾಗಿ ಬರೆಯೋಕ್ಕೆ ಬರೋಲ್ಲ???;-)

MD said...

ಜೋಗಿ ಸರ್,
ನಿಮ್ಮ ಈ ಬರಹವನ್ನು ನಾನು ನೀವು ಬ್ಲಾಗ್ ನಲ್ಲಿ ಹಾಕಿದ ದಿನವೇ ನೋಡಿದೆ.
ಭಿಕ್ಷುಕನ ಚಿತ್ರ ನೋಡಿದ ಮೇಲೆ ಅದ್ಯಾಕೋ 'ಹಾಗೇ' (ಚಿತ್ರಗಳು ಕೆಲವೊಂದು ಸಾರಿ ಮನಸ್ಸನ್ನು ತಪ್ಪು ಕಲ್ಪನೆಗಳಿಗೊಳಪಡಿಸುತ್ತವೆ !) ಅನ್ನಿಸಿ ಸುಮ್ಮನೆ ಓದದೆ ಬಿಟ್ಟುಬಿಟ್ಟೆ.
ಇವತ್ತು ಎಲ್ಲ ಓದುಗರ ಕಮೆಂಟು ಓದಿದ ಬಳಿಕ ಕಥೆ ಓದಿದೆ.
ಅಬ್ಬಾ ! ಸೂಪರ್ ಕತೆ.
ಒಂದು ಧಾರಾವಾಹಿ ವೀಕ್ಷಿಸಿದಂತಾಯಿತು.
ಕ್ಯಾಮೆರಾ ಹಿಡಿದಿಡುವ ಕುತೂಹಲ/ಸಂದೇಹಗಳು ನಿಮ್ಮ ಅಕ್ಷರಗಳೇ ಮಾಡಿತೋರಿಸಿದವು.
ಹ್ಯಾಟ್ಸ್ ಆಫ್

ಸಂತೋಷಕುಮಾರ said...

ಹಿಂದೆ ಎಲ್ಲೋ ಓದಿದ ನೆನಪು.. ಮೊದಲು ಎಲ್ಲಾದರೂ ಪ್ರಕಟವಾಗಿತ್ತಾ?

Anonymous said...

ಇರಬಹುದು. ಆದ್ರೆ ಎಲ್ಲೀಂತ ನನಗೆ ನೆನಪಾಗ್ತಿಲ್ಲ. ನನ್ನ ಅಂಕಣಗಳಲ್ಲಿ ಎಲ್ಲೋ ಬಂದಿರಬಹುದು. ನಾನೂ ಹುಡುಕ್ತಿದ್ದೇನೆ. ಬರೆದಿಟ್ಟು ತುಂಬಾ ದಿನ ಆಗಿತ್ತು. ಹಾಗೆಲ್ಲ ಬರೆದು ಸುಮ್ಮನೆ ಇಡೋದು ನನಗೆ ಅಭ್ಯಾಸ ಇಲ್ಲ. ಆದ್ರೆ ಎಲ್ಲೀಂತ ನೆನಪಾಗ್ತಿಲ್ಲ. ಎಲ್ಲೀಂತ ತಿಳಿಸಿ, ಪ್ಲೀಸ್.
-ಜೋಗಿ

'ಸವೀ' Sahana said...

in Janaki column, if i am not wrong

or else in the same Kannada site where Nadiya nenapina hangu was first first published

Sahana

Anonymous said...

Olleya kathegaLu yaavaagalU ellO Odidanthe iruttave! Avu Aaptavaaguva reethiye haage...

ಶ್ರೀಕಾಂತ said...

ಈ ಕಥೆಯ ಮೊದಲ ಪ್ಯಾರಾ ಓದುತ್ತಿದ್ದಂತೆಯೆ ಕೊನೆಯವರೆಗೂ ನೆನಪಾಗಿ ಹೋಯಿತು. ಕಾರಣ ಈ ಕಥೆಯು ಮೊದಲು ’ಓ ಮನಸೇ’ನಲ್ಲಿ ಪ್ರಕಟವಾಗಿತ್ತು ಎಂಬುದಾಗಿ ನೆನಪು. ಓ ಮನಸೇ ಪತ್ರಿಕೆಯ ಮೊದಲ ಇನ್ನಿಂಗ್ಸ್ ನ ಯಾವುದೋ ಒಂದು ಸಂಚಿಕೆಯಲ್ಲಿ ಓದಿದ್ದೇವೆ. ಜೋಗಿಯವರ ಹೆಸರಲ್ಲಿತ್ತೋ ಅಥವಾ ಬೇರೆ ಯಾರದೋ ಹೆಸರಲ್ಲಿ ಪ್ರಕಟವಾಗಿತ್ತೋ ಗೊತ್ತಿಲ್ಲ. ಇದೇಕೆ ಹೀಗಾಯಿತು ಎಂದು ಆಶ್ಚರ್ಯವಾಗುತ್ತಿದೆ. ಜೋಗಿಯವರು ಸ್ಪಷ್ಟೀಕರಿಸಬೇಕಾಗಿ ವಿನಂತಿ.

Vinayakram said...

kathe superrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrr........!


matte matte baruthirali intha kathe...........

Anonymous said...

nanage EE kathena O manaseli Odida nenapu...baradavaru yAru antha nenapige barthilla.let me check that

Anonymous said...

nanage EE kathena O manaseli Odida nenapu...baradavaru yAru antha nenapige barthilla.let me check that