
ಅದು ಮುದುಕರಿಗೆ ತಕ್ಕ ನಾಡಲ್ಲ. ತೋಳಸೆರೆಯಲ್ಲಿ
ಯುವಜನರು, ಮರಮರದಲ್ಲು ಹಕ್ಕಿಗಳು
-ಎಲ್ಲ ಸಾವಕೊಂಬ ಸಂತಾನಗಳೆ-ತಂತಮ್ಮ ಹಾಡುಗಳಲ್ಲಿ
ಸಾಲ್ಮ್ ಪಾತಗಳು, ಮ್ಯಕರೆಲ್ ಗಿಜಿಗುಟ್ಟುವ ಸಮುದ್ರಗಳು
ಭೂ, ಜಲ, ಜಂತುಗಳು ಇಡೀ ಗ್ರೀಷ್ಮ ಸ್ತುತಿಸುವುದು ಮುದದಲ್ಲಿ
ಪಡುವುದನ್ನು, ಹುಟ್ಟುವುದನ್ನು, ಸಾಯುವುದನ್ನು...
ಹೀಗೆ ಅನುವಾದಗೊಂಡದ್ದು ಯೇಟ್ಸನ ಸೈಲಿಂಗ್ ಟು ಬೈಜಾಂಟಿಯಂ ಎಂಬ ಪದ್ಯ. ಅನುವಾದಿಸಿದವರು ಯು. ಆರ್. ಅನಂತಮೂರ್ತಿ. ಇಂಥ ಪದ್ಯಗಳು ಅರ್ಥವಾಗುವುದಿಲ್ಲ ಎಂದಾಗ ನವ್ಯದ ಎಲ್ಲ ಕವಿಗಳೂ ಒಕ್ಕೊರಲಿನಿಂದ ಹೇಳಿದ್ದಿಷ್ಟೇ. ಪದ್ಯ ಓದುವುದಕ್ಕೂ ಸಿದ್ಧತೆ ಬೇಕು. ಹೀಗಾಗಿ ಪದ್ಯ ಬಗೆಯುವ ಬಗೆ ಎಂಬ ಅಂಕಣ ಶುರುವಾಯಿತು. ಒಂದು ಪದ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪುಸ್ತಕಗಳು ಬಂದವು. ಅಲ್ಲಿ ಅಂಡರ್ಸ್ಟಾಂಡಿಂಗ್ ಪೊಯೆಟ್ರಿ ಅಂತ ಬರೆದಾಗ ಇಲ್ಲೂ ಅಂಥದ್ದೇನೋ ಬಂತು.
ಮೇಲಿನ ಇಂಗ್ಲಿಷ್ ಪದ್ಯದ ಮೂಲ ಸಾಲುಗಳನ್ನೇ ಓದಿ;
That is no country for old men. The young
In one another's arms, birds in the trees
The salmon falls, the mackerel-crowded seas,
Fish, Flesh or fowl, commend all summer long
whatever is begotten, born and dies.
ಯುವಜನರು, ಮರಮರದಲ್ಲು ಹಕ್ಕಿಗಳು
-ಎಲ್ಲ ಸಾವಕೊಂಬ ಸಂತಾನಗಳೆ-ತಂತಮ್ಮ ಹಾಡುಗಳಲ್ಲಿ
ಸಾಲ್ಮ್ ಪಾತಗಳು, ಮ್ಯಕರೆಲ್ ಗಿಜಿಗುಟ್ಟುವ ಸಮುದ್ರಗಳು
ಭೂ, ಜಲ, ಜಂತುಗಳು ಇಡೀ ಗ್ರೀಷ್ಮ ಸ್ತುತಿಸುವುದು ಮುದದಲ್ಲಿ
ಪಡುವುದನ್ನು, ಹುಟ್ಟುವುದನ್ನು, ಸಾಯುವುದನ್ನು...
ಹೀಗೆ ಅನುವಾದಗೊಂಡದ್ದು ಯೇಟ್ಸನ ಸೈಲಿಂಗ್ ಟು ಬೈಜಾಂಟಿಯಂ ಎಂಬ ಪದ್ಯ. ಅನುವಾದಿಸಿದವರು ಯು. ಆರ್. ಅನಂತಮೂರ್ತಿ. ಇಂಥ ಪದ್ಯಗಳು ಅರ್ಥವಾಗುವುದಿಲ್ಲ ಎಂದಾಗ ನವ್ಯದ ಎಲ್ಲ ಕವಿಗಳೂ ಒಕ್ಕೊರಲಿನಿಂದ ಹೇಳಿದ್ದಿಷ್ಟೇ. ಪದ್ಯ ಓದುವುದಕ್ಕೂ ಸಿದ್ಧತೆ ಬೇಕು. ಹೀಗಾಗಿ ಪದ್ಯ ಬಗೆಯುವ ಬಗೆ ಎಂಬ ಅಂಕಣ ಶುರುವಾಯಿತು. ಒಂದು ಪದ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪುಸ್ತಕಗಳು ಬಂದವು. ಅಲ್ಲಿ ಅಂಡರ್ಸ್ಟಾಂಡಿಂಗ್ ಪೊಯೆಟ್ರಿ ಅಂತ ಬರೆದಾಗ ಇಲ್ಲೂ ಅಂಥದ್ದೇನೋ ಬಂತು.
ಮೇಲಿನ ಇಂಗ್ಲಿಷ್ ಪದ್ಯದ ಮೂಲ ಸಾಲುಗಳನ್ನೇ ಓದಿ;
That is no country for old men. The young
In one another's arms, birds in the trees
The salmon falls, the mackerel-crowded seas,
Fish, Flesh or fowl, commend all summer long
whatever is begotten, born and dies.
ಇಂಗ್ಲಿಷ್ ಬಲ್ಲವರಿಗೆ ಇವತ್ತಿಗೂ ಇಂಗ್ಲಿಷೇ ಸುಲಭ. ಇಂಗ್ಲಿಷ್ ತಿಳಿಯದವರಿಗೆ ಅದು ಕನ್ನಡ ಅನುವಾದದಲ್ಲೂ ತಿಳಿಯದು. ಹಾಗಿದ್ದೂ ಅಂಥ ಅನುವಾದದ ಪ್ರಯತ್ನಗಳು ತುಂಬ ಗಂಭೀರವಾಗಿಯೇ ನಡೆದವು.
ಕಾವ್ಯದ ಅನುವಾದ ಕಷ್ಟ ಅನ್ನುವುದಕ್ಕೆ ಅನೇಕ ಕಾರಣಗಳನ್ನು ಕೊಡಬಹುದು. ಎಕೆ ರಾಮಾನುಜ್ ಕೂಡ ಕೂಡಲ ಸಂಗಮ ಅನ್ನುವುದನ್ನು God of meeting rivers ಎಂದು ಅನುವಾದಿಸಿ ನಗೆಪಾಟಲು ಮಾಡಿದ್ದರು. ನಮ್ಮ ಭಾವಗೀತೆಗಳನ್ನು ಕೂಡ ಅನುವಾದಿಸುವುದು ಕಷ್ಟವೇ. ಯಾಕೆಂದರೆ ಕವಿತೆ ಒಂದು ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡು ಅರಳಿರುತ್ತೆ. ನಮ್ಮ ಸಂಪ್ರದಾಯ, ತಿಳುವಳಿಕೆ, ನೆನಪು, ಗ್ರಹಿಕೆ ಮತ್ತು ಆಚಾರವಿಚಾರಗಳ ಜೊತೆಗೇ ಕವಿತೆ ಹುಟ್ಟುತ್ತದೆ. ತೀರಾ ಸರಳವಾದ `ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು, ಬಳೆಯ ತೊಡಿಸುವುದಿಲ್ಲ ನಿಮಗೆ' ಎಂಬ ಸಾಲನ್ನು ಇಂಗ್ಲಿಷಿಗೆ ಅನುವಾದಿಸಿದರೆ ಅವರಿಗೆ ಏನು ಅರ್ಥವಾಗುತ್ತದೆ. ಯಾವತ್ತೂ ಬಳೆಯನ್ನೇ ತೊಡದವರು, ಬಳೆಗಾರ ಗಂಡಸಿಗೆ ಬಳೆ ತೊಡಿಸುವುದಿಲ್ಲ ಎಂಬ ಸಾಲಿನ ಹಿಂದಿನ ಗೇಲಿಯನ್ನೋ ನವಿಲೂರ ಮನೆಯಿಂದ ತಂದ ನುಡಿಯನ್ನೋ ಹೇಗೆ ಗ್ರಹಿಸುತ್ತಾರೆ. ಹಾಗೇ ಯೇಟ್ಸ್ ಮತ್ತು ಕೀಟ್ಸ್ ಕೂಡ. ಅಲ್ಲಿಯ ಕಾವ್ಯವನ್ನು ಅಲ್ಲಿಗೆ ಒಪ್ಪುವಂತೆ ಸವಿಯಬೇಕು. ಅನುವಾದಿಸುವುದಕ್ಕೇ ಹೋಗಬಾರದು. ಎಲ್ಲೋ ಒಂದೆರಡು ಎಲ್ಲರಿಗೂ ಒಪ್ಪುವ ಸಾಲುಗಳು ಇಷ್ಟವಾದರೆ ಸಂತೋಷಪಡಬೇಕು.
ಅದರಲ್ಲೂ ಕನ್ನಡದಿಂದ ಬೇರೆ ಭಾಷೆಗೆ ಅನುವಾದಿಸುವುದಕ್ಕೆ ಕಷ್ಟವಾಗುವ ಪದ್ಯಗಳೆಂದರೆ ದಾಸರವು.
ಇದೊಂದು ಕೀರ್ತನೆಯನ್ನೇ ನೋಡಿ;
ಶೃಂಗಾರವಾಗಿಹುದು ಶ್ರೀಹರಿಯ ಮಂಚ
ಅಂಗನೆ ರುಕ್ಮಿಣಿಯರಸ ಮಲಗಿರುವ ಮಂಚ
ಬಡಗಿ ಮುಟ್ಟದ ಮಂಚ ಕಡಲಿನೊಳಗಿನ ಮಂಚ
ಮೃಡನ ತೋಳಿನಲಿ ಅಡಗಿರುವ ಮಂಚ
ಸಡಗರವುಳ್ಳ ಮಂಚ ಹೆಡೆಯುಳ್ಳ ಹೊಸ ಮಂಚ
... ಹೀಗೆ ಸಾಗುತ್ತದೆ ಈ ಗೀತೆ. ಇದನ್ನು ಯಾರಾದರೂ ಇಂಗ್ಲಿಷಿಗೆ ಫ್ರೆಂಚಿಗೂ ಅನುವಾದಿಸಿದರೆ ಅಲ್ಲಿಯ ಓದುಗನಿಗೆ ಏನಾದರೂ ದಕ್ಕುವುದಕ್ಕೆ ಸಾಧ್ಯವೇ? ಎಷ್ಟೇ ಟಿಪ್ಪಣಿಗಳನ್ನು ಕೊಟ್ಟರೂ ಈ ಕಲ್ಪನೆ ಮೂಡುವುದಕ್ಕೆ ಸಾಧ್ಯವೇ?
ಈ ಒಂದೇ ಒಂದು ಹಾಡು ಹತ್ತಾರು ಕತೆಗಳನ್ನು ಹೇಳುತ್ತದೆ ಅನ್ನುವುದನ್ನು ಗಮನಿಸಿ. ಪಲ್ಲವಿಯಲ್ಲೇ ಇದು ಅಂಗನೆ ರುಕ್ಮಿಣಿಯರಸ ಅನ್ನುವಲ್ಲಿ, ಶ್ರೀಹರಿಯ ಪತ್ನಿ ರುಕ್ಮಿಣಿ ಅನ್ನುತ್ತದೆ. ಅಲ್ಲಿಗೆ ಕೃಷ್ಣಾವತಾರದ ಕತೆ ಗೊತ್ತಿಲ್ಲದವರಿಗೆ ರುಕ್ಮಿಣಿಯೇ ಲಕ್ಪ್ಮಿ ಅನ್ನುವುದು ಗೊತ್ತಾಗುವುದು ಸಾಧ್ಯವಿಲ್ಲ. ಅಲ್ಲಿಂದ ಮುಂದೆ ಬಡಗಿ ಮುಟ್ಟದ ಮಂಚ ಎನ್ನುವುದನ್ನು ಅರ್ಥಮಾಡಿಕೊಂಡರೂ ಹಾಲಿನ ಸಮುದ್ರದಲ್ಲಿ ವಿಷ್ಣು ಮಲಗಿರುತ್ತಾನೆ ಎನ್ನುವ ಕಲ್ಪನೆ ಇಲ್ಲದವರಿಗೆ ಕಡಲಿನೊಳಗಿಹ ಮಂಚ ಎಂಬ ಸಾಲು ಗ್ರಹಿಕೆಗೆ ನಿಲುಕದ್ದು. ಶಿವ ತೋಳಿಗೆ ಹಾವನ್ನು ಸುತ್ತಿಕೊಂಡಿರುತ್ತಾನೆ ಅನ್ನೋದು ಗೊತ್ತಾಗದ ಹೊರತು ಮೃಡನ ತೋಳಿನಲಿ ಅಡಗಿರುವ ಮಂಚ ಎಂಬುದರ ಗೂಢಾರ್ಥ ಅರಿವಾಗದು. ಮತ್ತೆ ಈಶ್ವರನನ್ನು ಮೃಡ ಎಂದೇಕೆ ಕರೆಯುತ್ತಾರೆ ಅನ್ನುವುದಕ್ಕೆ ಮತ್ತೊಂದು ಕತೆ ಕೇಳಬೇಕಾಗುತ್ತದೆ.
ಇನ್ನೂ ಮುಂದಕ್ಕೆ ಓದುತ್ತಿದ್ದಂತೆ ಮತ್ತೊಂದೊಂದೇ ಕತೆಗಳು ಎದುರಾಗುತ್ತವೆ. ಕಾಳಗದೊಳರ್ಜುನನ ಮಕುಟ ಕೆಡಹಿದ ಮಂಚ ಎಂಬ ಸಾಲಿನಲ್ಲಿ ತಕ್ಪಕನ ಕತೆಯಿದೆ. ಅರ್ಜುನನ ಮಕುಟವನ್ನೇ ಅದ್ಯಾಕೆ ಕೆಡವಿತು ಅನ್ನುವುದು ಮತ್ತೊಂದು ಕತೆ.
ಕತೆಯನ್ನು ಅನುವಾದಿಸಬಹುದು. ನಾಟಕವನ್ನು ಮತ್ತೊಂದು ಭಾಷೆಗೆ ಅಳವಡಿಸಬಹುದು. ಕಷ್ಟಪಟ್ಟರೆ ಪ್ರಬಂಧವನ್ನೂ ನಮ್ಮದಲ್ಲದ ಭಾಷೆಯಿಂದ ತಂದು ಓದಿ ಸುಖಿಸಬಹುದು. ಆದರೆ ಕಾವ್ಯ ಮಾತ್ರ ಅದೇ ಭಾಷೆಯಲ್ಲಿ ಹುಟ್ಟಬೇಕು. ಅಷ್ಟೇ ಅಲ್ಲ, ಒಂದು ಭಾಷೆಯಲ್ಲಿ ಒಂದು ರೂಪದಲ್ಲಿ ಅರಳಿದ ಕವಿತೆಯನ್ನು ಮತ್ತೊಂದು ರೂಪದಲ್ಲಿ ಪ್ರಕಟಪಡಿಸುವುದೂ ಕಷ್ಟವೇ. ಮಂಕುತಿಮ್ಮನ ಕಗ್ಗವನ್ನೋ, ಅಂತಃಪುರಗೀತೆಯನ್ನೋ ಇನ್ನೊಂದು ಥರ ಬರೆಯಬಹುದಾ ಯೋಚಿಸಿ ನೋಡಿ!
ಸರ್ವಜ್ಞ ಬರೆದ ಮೂರು ಸಾಲಿನ ತ್ರಿಪದಿಗಳನ್ನು ಮತ್ತೊಂದು ಭಾಷೆಗೆ ಅನುವಾದಿಸಲಿಕ್ಕೆ ಹೊರಟರೆ ಎಂಥ ಅನಾಹುತವಾದೀತು ಯೋಚಿಸಿ;
ಬೆರೆವಂಗೆ ರೋಗವೂ ಮೊರೆವಂಗೆ ರಾಗವೂ
ಬರೆವಂಗೆ ಓದು- ಬರುವಂತೆ ಸಾಧಿಪಗೆ
ಬಾರದಿಹುದುಂಟೆ? ಸರ್ವಜ್ಞ.
ಉಂಡು ಕೆಂಡವ ಕಾಸಿ ಉಂಡು ಶತಪಥ ನಡೆದು
ಉಂಡೆಡದ ಮಗ್ಗುಲಲಿ ಮಲಗೆ ವೈದ್ಯನಾ
ಭಂಡಾಟವಿಲ್ಲ! ಸರ್ವಜ್ಞ.
ಚಿತ್ರ- ಈ ಫೊಟೋ ಕಳುಹಿಸಿಕೊಟ್ಟದ್ದು ಗೆಳೆಯ ಹರಿಪ್ರಸಾದ್. ಅವರಿಗೆ ಅವರ ಗೆಳೆಯರಾರೋ ಕಳುಹಿಸಿದರಂತೆ. ಇದನ್ನು ಹಿಡಿದವನ ಹೆಸರು ಕೃಷ್ಣ ಘುಲೆ. ಹಾವು ಹಿಡಿಯುವುದರಲ್ಲಿ ಆತ ನಿಷ್ಣಾತ. ಈ ಇಪ್ಪತ್ತು ಕೇಜಿ ತೂಗುವ ಹನ್ನೆರಡು ಅಡಿ 3 ಇಂಚು ಉದ್ದದ ಹಾವನ್ನು ಆತ ಹಿಡಿದದ್ದು ಗೋವಾದಲ್ಲಿ.
14 comments:
ಶ್ರೀಹರಿಯ ಮಂಚವನ್ನು ಪತಾಕೆಯಾಗಿ ಹಿಡಿದಿರುವ ಪುಣ್ಯಾತ್ಮ ಯಾರಪ್ಪ ಇದು? ಚಿತ್ರ ನೋಡಿಯೇ ಭಯವಾಯ್ತು. ಅವರ ಎದುರಿಗೆ ನಿಲ್ಲಲು ಹೇಳಬೇಡಿ. ಪ್ಲೀಸ್.
good concept......
Where can I get High resolutiuon Photo of this snake? Where exactly was this snake caught or any details of this Snake?
ನೂರಕ್ಕೆ ನೂರು ಒಪ್ಪಿಕೊಳ್ಳಬೇಕಾದ ಮಾತು ಹೇಳಿದ್ದೀರ ಜೋಗಿ ಸರ್..
Jogi Jangamare, malegaalada ee sanjeyalli olleya vichara tilidaddu kene bereta, ghama ghamisuva haalannu kudidantaayitu-- chaliyu doora, bechchane hitavada anubhava bere. aha!!!
ahudahudu, oppide. astuddada havu edurige ittu howda alva andre enta kelidru yes, yes!
pushpa, manglooru.
ಷೇಕ್ಸ್ ಪಿಯರ್ ಸಾನೆಟ್ಟುಗಳನ್ನು ಕನ್ನಡದಲ್ಲಿ ಓದಿದಾಗ, ಕಾಳಿದಾಸನ ಶಾಕುಂತಲ ಅಥವಾ ಮೇಘದೂತವನ್ನು ಎಸ್.ವಿ.ಪರಮೇಶ್ಬರ ಭಟ್ಟರು ಅನುವಾದಿಸಿದ ಹಳೆಗನ್ನಡದಲ್ಲಿ ಓದಿದಾಗ ಹೀಗೇ ಅನ್ನಿಸಿತ್ತು. ಹಾಗಂತ ಪರಮೇಶ್ವರ ಭಟ್ಟರು ಸಾಮಾನ್ಯರೇನಲ್ಲ. ಆದರೆ, ಪ್ರತಿ ಭಾಷೆಗೂ ಅದರದ್ದೇ ಶಬ್ದಲಾಲಿತ್ಯವಿರುತ್ತದೆ. ಅದನ್ನು ಉಳಿಸಿಕೊಂಡು ಅನುವಾದ ಮಾಡುವುದು ಕಷ್ಟ. ಶಬ್ದಲಾಲಿತ್ಯಕ್ಕೆ ಗಮನ ಕೊಟ್ಟರೆ ಅರ್ಥ ಕೆಡುವ ಅಪಾಯ. ಕಾವ್ಯವನ್ನು ಅದದೇ ಭಾಷೆಯಲ್ಲಿ ಓದುವುದು ಒಳ್ಳೆಯದು. ಇಷ್ಟಕ್ಕೂ ನನಗೆ ಆ ಭಾಷೆ ಬರುವುದಿಲ್ಲ, ಹಾಗಾಗಿ ಓದಲು ಸಾಧ್ಯವಿಲ್ಲ ಎಂದರೆ ಭಾರೀ ನಷ್ಟವೇನೂ ಇಲ್ಲವಲ್ಲ! ಒಂದು ಮಜಾ ಏನು ಅಂದ್ರೆ, ನಮಗೆ ಎರಡೂ ಭಾಷೆ ಗೊತ್ತಿದ್ದಾಗ ಮಾತ್ರ ಈ ಕೊರತೆ ಕಾಣಿಸುತ್ತದೆ. ಕನ್ನಡಕ್ಕೆ ಅನುವಾದಿಸಿದ ಉರ್ದು ಕವಿತೆಗಳನ್ನು ಯಾವ ತಕರಾರಿಲ್ಲದೆ ಓದುವುದಿಲ್ಲವೇ?
- ಸೀತಾಳಭಾವಿ
ನಾನು ಸೀತಾಳಭಾವಿಯರ ಜತೆ ಒಪ್ಪುತ್ತೇನೆ. ಅನುವಾದ ಕುರಿತಾದ ಅಸಡ್ದೆಯ ಹಿಂದೆ ಜೋಗಿಯವರು ಮೂಲ ಮತ್ತು ಅನುವಾದಿತಗಳ ನಡುವೆ ಏರ್ಪಡಿಸಿಕೊಳ್ಳುವ ಮೌಲ್ಯ ಇದೆ. ಈ ಮೌಲ್ಯದ ಪ್ರಕಾರ ಅನುವಾದಿತ ಕೃತಿ ತನ್ನ ಮೂಲದ ನೆರಳು, ದಾಸ, ಮೂಲದಂತೇ ಇರಬೇಕಾದದ್ದು. ಹಾಗೇನೂ ಆಗಬೇಕಾಗಿಲ್ಲವಲ್ಲ. ಹಲವರು ಅನ್ನುವ ಹಾಗೆ, ಅನುವಾದವೂ ಒಂದು ಮೂಲ ಕೃತಿಯೇ. ಯಾಕೆಂದರೆ ಯಾವ ಕೃತಿಯೂ ಆತ್ಯಂತಿಕವಾದ ಒಂದೇ ರೂಪದಲ್ಲಿರಲಾರದ್ದರಿಂದ, ಅನುವಾದಿತ ಕೃತಿ ಮೂಲಕ್ಕೆ ತಕ್ಕದ್ದೋ ಅಲ್ಲವೋ ಅನ್ನುವ ತೀರ್ಮಾನವೇ ಬೇಕಿಲ್ಲ. ಏಕಭಾಷಿಗಳ ದೃಷ್ಟಿಯಲ್ಲಿ ನೋಡಿದರೆ, ಜೋಗಿಯವರು ಅನ್ನುವ ಅಸಾಧ್ಯತೆ ಹೇಗೆ ದ್ವಿಭಾಷಿಗಳ ಒತ್ತಾಯದ ದೃಷ್ಟಿಕೋನ ಎಂದು ಅರಿವಿಗೆ ಬರುತ್ತದೆ.
ಕಮಲಾಕರ
ಸೀತಾಳಭಾವಿ ಮತ್ತು ಕಮಲಾಕರ್ ವಾದ ನನಗೂ ಒಪ್ಪಿಗೆಯೇ. ನಾನು ಹೇಳುತ್ತಿರುವುದು ಅನುವಾದದ ಭಾಷೆಯ ಬಗ್ಗೆ ಅಲ್ಲ, ಸನ್ನಿವೇಶಧ ಬಗ್ಗೆ. ಮಾನವ ಸಂಬಂಧಗಳ ಕುರಿತು ಮಾತಾಡುವಾಗ ಅನುವಾದದಲ್ಲಿ ಅಂಥ ತಪ್ಪುಗಳೇನೂ ಆಗಲಾರವು. ಆದರೆ, ಯಾವಾಗ ನಾವು ಸನ್ನಿವೇಶ, ಸಂದರ್ಭದ ಕುರಿತು ಹೇಳುತ್ತೇವೋ, ಆಗ ಓದುಗನಿಗೆ ಅನುವಾದ ಅರ್ಥವಾಗುವ ಸಂಭಾವ್ಯ ಕಡಿಮೆ. ವೈಯನ್ಕೆ ಹೇಳುತ್ತಿದ್ದರು- ಒಂದು ಇಂಗ್ಲಿಷ್ ನಾಟಕವನ್ನು ಅನುವಾದಿಸುವ ಹೊತ್ತಲ್ಲಿ ಲಂಕೇಶ್- o olive tree..ಎಂಬ ಉದ್ಗಾರವನ್ನು ಓ ಜೀವವೃಕ್ಷವೇ ಎಂದು ಮಾಡಿದ್ದರಂತೆ. ಇತ್ತೀಚೆಗೆ ಕರೀಗೌಡ ಬೀಚನಹಳ್ಳಿಯವರು ಕತೆಯೊಂದನ್ನು ಅನುವಾದಿಸುವ ಹೊತ್ತಿಗೆ she made a boat from trunk ಅನ್ನುವುದನ್ನು ಪೆಟ್ಟಿಗೆಯಿಂದ ಮಾಡಿದ ದೋಣಿ ಎಂದು ಬಳಸಿದ್ದರು. ದಾಸರ ಪದಗಳನ್ನೇ ನೋಡಿ-
ಯಮಸುತನ ರಾಣಿಗೆ ಅಕ್ಷಯ ವಸನವನಿತ್ತೆ
ಸಮಯದಲ್ಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ..
ಎಂಬ ಸಾಲು ಮತ್ತೊಂದು ದೇಶದ ಭಾಷೆಗೆ ಹೋದಾಗ ಯಮಸುತ, ಅವನ ರಾಣಿ, ಅಕ್ಷಯ ವಸನ, ಅಜಮಿಳನ ಕತೆ ಎಲ್ಲವನ್ನೂ ಹೇಳಬೇಕಾಗುತ್ತದೆ. ಇಲ್ಲದೇ ಹೋದರೆ ರೆಫರೆನ್ಸ್ ಟು ಕಾಂಟೆಕ್ಸ್ಟೇ ತಪ್ಪಿಗೋಗುತ್ತದೆ.
ಉರ್ದು ಕವಿತೆಗಳ ಭಾವ ಪ್ರೇಮ. ಪ್ರೇಮದ ಬಗ್ಗೆ ಯಾವ ಭಾಷೆಯಲ್ಲಿ ಹೇಳಿದರೂ ಇಷ್ಟವಾಗುತ್ತದೆ. ಅದೇ ಯೇಟ್ಸೇ ಕವಿತೆಗಳನ್ನು ಹಾಗೆ ಅರ್ಥಮಾಡಿಕೊಳ್ಳಿ ನೋಡೋಣ.
-ಜೋಗಿ
ಜೋಗಿಯವರ ವಾದಕ್ಕೆ ನನ್ನದೂ ಒಂದು ಓಟು. ಅನುವಾದ (ಭಾವಾನುವಾದವೇ ಇರಲಿ, ಪೂರ್ಣಾನುವಾದವೇ ಇರಲಿ) ಅದು ಭಾರತೀಯ ಭಾಷೆಯಿಂದ ಭಾರತೀಯ ಭಾಷೆಗೆ ಅಷ್ಟೊಂದು ಬದಲಾಗಲಾರದು (ಬೇಂದ್ರೆಯವರ "ಕನ್ನಡ ಮೇಘದೂತ"ವನ್ನು ಇಲ್ಲಿ ಸ್ಮರಿಸಬಹುದು; ಅದೊಂದು ಅದ್ಭುತ ಕನ್ನಡೀಕರಣ). ಆದರೆ ಭಾವಸಂದರ್ಭ ಬದಲಾಗುವ ಆಂಗ್ಲ ಅಥವಾ ಇನ್ನಿತರ ಭಾಷೆಗಳಿಂದ ಕನ್ನಡಕ್ಕಾಗಲೀ, ಕನ್ನಡದಿಂದ ಪ್ರಪಂಚದ ಬೇರೆ ಭಾಷೆಗಾಗಲೀ ಸಾಹಿತ್ಯ ಭಾಷೋಲ್ಲಂಘನ ಮಾಡಬೇಕಾದರೆ ತೊಡಕುಗಳು ಸಹಜ.
ಭಾಷೆಗೂ ಭಾವನೆಗೂ ಇರುವ ಸಂಬಂಧವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್....
ಕನ್ನಡದಿಂದ (ಅಥವಾ ಯಾವುದೇ ಭಾರತೀಯ ಭಾಷೆಯಿಂದ) ಇಂಗ್ಲೀಷ್ ಗೆ ಅನುವಾದಿಸುವಾಗ ಪಾಶ್ಚಾತ್ಯ (ಅಥವಾ ಭಾರತೀಯರಲ್ಲದ) ಓದುಗರನ್ನು ಗಮನದಲ್ಲಿರಿಸಿಕೊಂಡು, ಅವರಿಗೆ ಅನುಕೂಲವಾಗುವಂತೆ ಅನುವಾದಿಸಲು ಹೊರಟರೆ ಅನುವಾದ ಕೆಟ್ಟು ಹೋಗುವ ಸಾಧ್ಯತೆಯೇ ಹೆಚ್ಚು (ಕೂಡಲಸಂಗಮದೇವ God of meeting rivers ಆಗುವಂತೆ).
ಈಗ ಬ್ಲಾಗ್ ಅನ್ನುವ ಶಬ್ದವನ್ನೇ ತೆಗೆದುಕೊಳ್ಳೋಣ, ಅದೆಷ್ಟು ಸುಲಭವಾಗಿ ಅದನ್ನು ಇಂಗ್ಲೀಷ್ ಮತ್ತು ಕನ್ನಡ (ಬ್ಲಾಗುವುದು) ಭಾಷೆಗಳು ತಮ್ಮದನ್ನಾಗಿ ಮಾಡಿಕೊಂಡವು ನೋಡಿ. ಹಾಗೇ ಯಾಕೆ ಭಾರತೀಯ ಭಾಷೆಯ ಶಬ್ದಗಳೂ “ಕಾವ್ಯ”ದ ಅನುವಾದದಲ್ಲಿ ಹಾಗೆಯೇ ಬಳಕೆಯಾಗಬಾರದು?
ಘಂಟಾನಾದ, ಮಂಗಳಾರತಿ ಎಂಬಂತಹ ಶಬ್ದಗಳ ಪ್ರತಿಮೆ, ವಿಶಾಲಾರ್ಥಗಳನ್ನು ಕಟ್ಟಿಕೊಡಲು ಯಾವ ಶಬ್ದಗಳಿವೆ ಇಂಗ್ಲೀಷ್ ನಲ್ಲಿ? We should use the word ``mangalarathi'' itself instead of searching an English word for it.
Let the reader of that poetry take the pain of finding the meaning of that ``image''. ಬರೀ ಸಾಹಿತ್ಯ ಹೋದರೆ ಸಾಕಾಗದು, ಅದು ಶಬ್ದಸಹಿತವಾಗಿ (ಪ್ರತಿಮಾಸಹಿತವಾಗಿ) ಬೇರೆ ಭಾಷೆಗೆ ಹೋಗಬೇಕು, ಹೀಗನ್ನಿಸುತ್ತದೆ ನನಗೆ. ಅಂಕಿತನಾಮವೂ ಅನುವಾದವಾಗಿಬಿಟ್ಟರೆ ಹೇಗೆ?
respected sir, it is really interesting to read your writings
nice concept....it should be view by so called our NAVYA Poets
Post a Comment