Wednesday, June 11, 2008

ಮೈಸೂರ ಮಳ್ಳಿ-ಗೆ (ಒಂದಷ್ಟು ತುಂಟಸಾಲು)

ಒಳಮನೆಯಲಿ ನೀರಾಯಿತು
ಎಂದಳು
ನಾದಿನಿ ರಾಗದಲಿ

ಇವಳಿಗೆ ನಾದಿನಿ ಎಂದರೆ
ಕೆಂಡಕೋಪ!

ಕೋಣೆಯೊಳಗೆ ಬಳೆಯ ಸದ್ದು
ನಗುವರತ್ತೆ ಬಿದ್ದು ಬಿದ್ದು.

ಮಾವನಿಗೆ ಅತ್ತೆ ಎಂದರೆ
ಅಖಂಡ ಅಸೂಯೆ

ನೀಲಾಂಬರದ ನಡುವೆ
ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು
ಸನ್ನಿಧಿಯಲಿ..

ರೋಹಿಣಿ ಬೆಳಗಿದರೆ
ನೀಲಾಂಬರಕ್ಕೆ
ಮಿಂಚು ಕಳವಳ

ನಾಳೆ ಮಂಗಳವಾರ
ಮಾರನೆಯ ದಿನ
ನವಮಿ
ಆಮೇಲೆ ನಿಲ್ಲುವೆನೆ
ನಾನು ಇಲ್ಲೇ?

ಮಂಗಳವಾರ
ಕ್ಷೌರದಂಗಡಿಗೆ ರಜ.

ಯಾರು ಕದ್ದು ನುಡಿದರೇನು?
ಊರೇ ಎದ್ದು ಕುಣಿದರೇನು?
ಜನರ ಬಾಯಿಗಿಲ್ಲ ಬೀಗ!

ಇಲ್ಲಾಗಿರುವುದು ಅದೇ ಈಗ!

ಟಿಪ್ಪಣಿ- ಹಿಂದೆ ಕವಿಗಳನ್ನು ಕವಿಗಳು ಗೇಲಿ ಮಾಡಿಕೊಂಡು ಕಾಲೆಳೆಯುತ್ತಾ ನಕ್ಕು ಹಗುರಾಗುವ ಪರಿಪಾಟ ಇತ್ತು ಎಂದು ಅಲ್ಲಲ್ಲಿ ಓದಿದ ನೆನಪು. ಬರಿಗೊಡಗಳಿಗೆ ಸಮಾಧಾನ ಹೇಳುತ್ತಿದೆ ನೀರಿಲ್ಲದ ನಲ್ಲಿ ಅನ್ನುವ ಸಾಲನ್ನು ವೈಎನ್ ಕೆ ಗುಂಪಿನ ಗೆಳೆಯರು ಬರಿತೊಡೆಗಳಿಗೆ
ಸಮಾಧಾನ ಹೇಳುತ್ತಿದೆ
ನೀರಿಲ್ಲದ
ನಲ್ಲಿ
ಎಂದು ಆಡಿಕೊಂಡು ನಗುತ್ತಿದ್ದರಂತೆ. ಲಂಕೇಶರು ಮೈಸೂರು ಮಲ್ಲಿಗೆಯ ಕುರಿತೂ ಹೀಗೊಂದು ತುಂಟ ಪದ್ಯ ಬರೆದಿದ್ದರು.
ಇನಿಯನ ಕರೆಗೆ
ಇವಳು ಸದಾ ಹೊರಗೆ
ನನ್ನ ಹಸಿದ ಹಲ್ಲಿಗೆ
ಅವಳ ಮೈಸೂರು ಮಲ್ಲಿಗೆ.


ಅಂಥ ತುಂಟಪದ್ಯಗಳ ಸಾಲಿಗೆ ಸೇರಿಸಿ ನಕ್ಕು ಹಗುರಾಗಬಹುದಾದ ಸಾಲಿದು. ಕೆಎಸ್ ನ ಪ್ರಿಯರು ಕ್ಷಮಿಸುತ್ತಾರೆ ಎಂಬ ನಂಬಿಕೆ ನನ್ನದು.

-ಜೋಗಿ

8 comments:

Unknown said...

ಹಹ್ಹಹ್ಹ!!!!

congrats!

ARUN MANIPAL said...

ನೀವು ಮತ್ತೆ ಬಂದದ್ದು ಸಂತೋಷ ;) .....ಮತ್ತೆ ಸ್ವರ್ಣ ಕಮಲದ ಗರಿ ಮುಡಿದುಕೊಂಡದಕ್ಕೆ ಅಭಿನಂದನೆಗಳು ಕೂಡ..;)

ಅಮರ said...

ಅಂತು ಅತ್ತಿತ್ತ ಸುತ್ತಿ ಕೊನೆಗೆ ಮಲ್ಲಿಗೆ ಬಳ್ಳಿಯ ಕಡೆ ಬಂದಿರಾ..... ಚೂರು ಬೇಸರ ಮಾಡ್ಕೊಳೊಣ ಅಂದ್ರೆ.... ಕೊನೆಯ ಸಾಲುಗಳನ್ನ ಬರೆದು ಅದಕ್ಕೂ ಅವಕಾಶ ಕೊಟ್ಟಿಲ್ಲ ..... ಒಟ್ಟಿನಲ್ಲಿ ಬ್ಲಾಗಿನ ತುಂಬಾ ಹೊಸ ಕವನಗಳದೇ ಘಮಲು.... ಇಷ್ಟು ದಿನ ಅಜ್ಞಾತ ವಾಸದಲ್ಲಿದದ್ದಕ್ಕು ಸಾರ್ಥಕವಾಯ್ತು... :)
-ಅಮರ

Anonymous said...

ಬರಿದಾದ ಬ್ಲಾಗಿಗೂ ಮನಕ್ಕೂ ಹಿಂತಿರುಗಿ ಬಂದ ನವ ಕವಿಗೆ ಸ್ವಾಗತ.

Anonymous said...

congrats for winnig the award

ಮೃಗನಯನೀ said...

ಇಂಥ ಕೂಗನಳಿಸಿದೆ ಬೆಳಗಿ ಬ್ಲಾಗ ಹರಸಿದೆ... :-)

Anonymous said...

ಬರೀ ತೊಡೆಗಳಿಗೆ
ಸಮಾಧಾನ
ಹೇಳುತ್ತಿದೆ ನೀರಿಲ್ಲದ
ನಲ್ಲಿ!
ಅಂತ ಮಾರ್ಪಡಿಸಿಕೊಂಡು ಬಿದ್ದು ಬಿದ್ದು ನಕ್ಕೆ..!

ಸಿಂಧು sindhu said...

ಪ್ರಿಯ ಜೋಗಿ,

ತುಂಟ ಪದ್ಯಗಳ ಸಾಲಿಗೆ ಸೇರಿಸಿ ನಕ್ಕು ಹಗುರಾಗಿ ಬಿಡಿ ಎಂಬ ಸಾಲು ಓದುವವರೆಗೂ ದುಮ್ಮಾನವಿತ್ತು.
"ಮೂಲವರು ಬದುಕು, ಉತ್ಸವಮೂರ್ತಿ ಕವಿತೆ" ಅಂತ ಎದೆ ತುಂಬ ನಕ್ಷತ್ರ ಮಿನುಗಿಸಿ ಬರೆದವರ ಕವಿತೆಗಳಿಗೆ ನವಿರು ಹಾಸ್ಯದ ಪ್ರಭಾವಳಿ ಕೊಟ್ಟಿದೀರಿ. ಇನ್ನೇನು ದುಮ್ಮಾನ, ಇನ್ಯಾವ ಬಿಗುಮಾನ.. :)

ಪ್ರೀತಿಯಿಂದ
ಸಿಂಧು