
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು
ಇದನ್ನು ನಾಲ್ಕೈದು ರಾಗಗಳಲ್ಲಿ ಹಾಡಿ ತೋರಿಸಿ ಅವರು ಕೇಳಿದರು; ಹ್ಯಾಗಿದೆ ಹಾಡು? ಎಷ್ಟೊಂದು ಚೆನ್ನಾಗಿದೆಯಲ್ಲವೇ? ಆದರೂ ನಮ್ಮ ಹುಡುಗರಿಗೆ ಇದು ಬೇಡ. ಅವರು ಬಾಯಿತೆರೆದರೆ ಹಾಡುವುದು ಇಂಗ್ಲಿಷ್ ರೈಮುಗಳನ್ನೇ. ಜಾನಿ ಜಾನಿ ಯೆಸ್ ಪಪ್ಪಾ... ಈಟಿಂಗ್ ಶುಗರ್ ನೋ ಪಪ್ಪಾ.. ಅದಕ್ಕೊಂದು ಅರ್ಥವಾದರೂ ಇದೆಯಾ? ಅದಕ್ಕಿಂತ ನಮ್ಮ `ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?' ಹಾಡನ್ನು ಅದೇ ರಾಗದಲ್ಲಿ ಹಾಡೋಕ್ಕಾಗಲ್ಲವಾ? ಯಾಕೆ ಇಂಗ್ಲಿಷ್ ಹಾಡೇ ಬೇಕು?
ಉತ್ತರಿಸುವುದು ಕಷ್ಟ. ಮಕ್ಕಳಿಗೆ ಇಂಗ್ಲಿಶ್ ಹಾಡೇ ಯಾಕೆ ಇಷ್ಟವಾಗುತ್ತದೆ. ಅವರಿಗೇನೂ ಭಾಷೆಯ ಬಗ್ಗೆ ಮೇಲು ಕೀಳು ಭಾವನೆ ಇರುವುದಕ್ಕೆ ಸಾಧ್ಯವಿಲ್ಲವಲ್ಲ. ಒಂದು ಇಂಗ್ಲಿಶ್ ಹಾಡನ್ನೂ ಒಂದು ಕನ್ನಡ ಹಾಡನ್ನೂ ಒಟ್ಟಿಗೇ ಕಲಿಸಿದರೆ ಮಗು ಯಾಕೆ ಇಂಗ್ಲಿಶ್ ಹಾಡನ್ನೇ ಬೇಗ ಕಲಿತುಬಿಡುತ್ತದೆ?
ಉತ್ತರಿಸುವುದು ಇನ್ನೂ ಕಷ್ಟ. ಯೋಚಿಸಿದಾಗ ಅನೇಕಾನೇಕ ಕಾರಣಗಳು ಹೊಳೆಯುತ್ತಾ ಹೋದವು. ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಎಂದು ಈಗಿನ ಮಗು ಯಾಕೆ ಹಾಡಬೇಕು? ಆ ಮಗು ಯಾವತ್ತಾದರೂ ಬಣ್ಣದ ತಗಡಿನ ತುತ್ತೂರಿಯನ್ನು ನೋಡಿರೋದಕ್ಕೆ ಸಾಧ್ಯವೇ? ತಾನು ನೋಡದೇ ಇರುವ ತುತ್ತೂರಿಯ ಬಗ್ಗೆ ಅದಕ್ಕೆ ಯಾವ ಪ್ರೀತಿ ಇರಲಿಕ್ಕೆ ಸಾಧ್ಯ?
ತುತ್ತೂರಿಯೂದುತ ಕೊಳದ ಬಳಿ, ಕಸ್ತೂರಿ ನಡೆದನು ಸಂಜೆಯಲಿ ಎಂಬ ಸಾಲುಗಳು ಇವತ್ತು ಯಾವ ಮಗುವಿಗಾದರೂ ಅನುಭವಕ್ಕೆ ಬರೋದಕ್ಕೆ ಸಾಧ್ಯವೇ? ಬೆಂಗಳೂರಿನಂಥ ನಗರದಲ್ಲಿ ಸಂಜೆಯೆಲ್ಲಿದೆ? ಕೊಳವೆಲ್ಲಿದೆ? ಇದ್ದರೂ ಕೊಳದ ಬಳಿಗೆ ಹೋಗುವುದಕ್ಕೆ ಕಸ್ತೂರಿ ಕಂದಮ್ಮಗಳಿಗೆ ಪುರುಸೊತ್ತೆಲ್ಲಿದೆ?
ನೋಡುತ್ತಾ ಹೋದರೆ ನಮ್ಮ ಬಹಳಷ್ಟು ಮಕ್ಕಳ ಗೀತೆಗಳು ಹೀಗೇ ಸವಕಲಾಗಿವೆ ಅನ್ನಿಸಿತು. ಕೆಲವು ಉದಾಹರಣೆಗಳನ್ನು ನೋಡೋಣ;
ರೊಟ್ಟಿ ಅಂಗಡಿ ಕಿಟ್ಟಪ್ಪ!
ನಂಗೊಂದು ರೊಟ್ಟಿ ತಟ್ಟಪ್ಪ!
ಪುಟಾಣಿ ರೊಟ್ಟಿ!
ಕೆಂಪಗೆ ಸುಟ್ಟು!
ಒಂಬತ್ತು ಕಾಸಿಗೆ ಕಟ್ಟಪ್ಪ!
ಈಗ ರೊಟ್ಟಿ ಅಂಗಡಿ ಎಲ್ಲಿದೆ? ಅಲ್ಲಿ ಕಿಟ್ಟಪ್ಪನೆಲ್ಲಿದ್ದಾನೆ? ಈಗಿರುವುದು ರೋಟಿ ಘರ್. ಅಲ್ಲಿ ರೊಟ್ಟಿಯನ್ನು ತಟ್ಟುವುದಿಲ್ಲ. ಒಂಬತ್ತು ಕಾಸು ಎಂದರೆ ಕಿಟ್ಟಪ್ಪನಿಗೆ ಅರ್ಥವೇ ಆಗುವುದಿಲ್ಲ. ಇನ್ನು ಇದನ್ನು ರಾಗವಾಗಿ ಹಾಡುವ ಪುಟ್ಟಪ್ಪನಿಗೆ ಎಲ್ಲಿಂದ ಅರ್ಥವಾಗಬೇಕು?
ಗಂಟೆಯ ನೆಂಟನೆ ಓ ಗಡಿಯಾರ
ಬೆಳ್ಳಿಯ ಬಣ್ಣದ ಗೋಳಾಕಾರ
ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ.. ಟಿಕ್ ಟಿಕ್ ಟಿಕ್
ಈಗಂತೂ ಕಿವಿಯನು ಹಿಂಡುವ ಗಡಿಯಾರಗಳೇ ಇಲ್ಲ. ಅವು ಟಿಕ್ ಟಿಕ್ ಸದ್ದು ಮಾಡುವುದೂ ಇಲ್ಲ. ಹಾಗೇ ಅಜ್ಜನ ಕೋಲಿದು ನನ್ನಯ ಕುದುರೆ ಎಂದು ಹಾಡುವುದಕ್ಕೆ ಮನೆಯಲ್ಲಿ ಅಜ್ಜನೇ ಇರುವುದಿಲ್ಲ. ಅಜ್ಜನಿದ್ದರೂ ಅವನು ಕೋಲೂರಿ ನಡೆಯುವುದಿಲ್ಲ.
ಕುವೆಂಪು ಅಂತೂ ಕನ್ನಡದಲ್ಲಿ ಹರಿ ಬರೆಯುವನು; ಕನ್ನಡದಲಿ ಹರ ತಿರಿಯುವನು ಎಂದು ಕನ್ನಡದ ಕುರಿತೊಂದು ಪದ್ಯ ಬರೆದರು. ಇವತ್ತಿನ ಮಕ್ಕಳು ಕನ್ನಡವೂ ಬೇಡ, ತಿರಿದು ತಿನ್ನುವ ಸ್ಥಿತಿಯೂ ಬೇಡ ಎಂದು ಇಂಗ್ಲಿಶ್ ಹಾಡಿಗೆ ಮೊರೆ ಹೋಗಿರಲಿಕ್ಕೂ ಸಾಕು.
ಹಾಗಂತ ಇಂಗ್ಲಿಶ್ ನರ್ಸರಿ ರೈಮುಗಳ ಪುಸ್ತಕ ತೆಗೆದು ನೋಡಿದರೆ ಅವೇನೂ ಅಷ್ಟು ಖುಷಿಕೊಡುವಂತೆ ಏನಿಲ್ಲ. ಹಾಟ್ ಕ್ರಾಸ್ ಬನ್ಸ್.. ಹಾಟ್ ಕ್ರಾಸ್ ಬನ್ಸ್... ಎಂಬ ಹಾಡು ರೊಟ್ಟಿ ಅಂಗಡಿ ಕಿಟ್ಟಪ್ಪನಿಗಿಂತ ಉತ್ತಮವಾದದ್ದೇನಲ್ಲ. ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಗಿಂತ ಮಿನುಗೆಲೆ ಮಿನುಗೆಲೆ ನಕ್ಪತ್ರ ಎಂಬ ಸಾಲೇ ಆಪ್ತ ಎನಿಸುತ್ತದೆ. ಜಾಕ್ ಅಂಡ್ ಜಿಲ್ ವೆಂಟ್ ಅಪ್ ದಿ ಹಿಲ್ ಎಂಬುದಕ್ಕಿಂತ ತಿಂಗಳ ಬೆಳಕಿನ ಇರುಳಿನೊಳಂದು ಅಮ್ಮನು ಕೆಲಸದೊಳಿರುವುದ ಕಂಡು ಗೋಪಿಯೂ ಪುಟ್ಟೂ ಹೊರಗಡೆ ಬಂದು ಬಾವಿಗೆ ಇಣುಕಿದರು ಎಂಬ ಕಲ್ಪನೆಯೇ ರೋಚಕವಾಗಿದೆ.
ಹಾಗಿದ್ದರೂ ಇಂಗ್ಲಿಶ್ ಹಾಡೇ ಯಾಕೆ ಜನಪ್ರಿಯ.
ಉತ್ತರಿಸುವುದು ಕಷ್ಟ.
-2-
ಒಂದು ಭಾಷೆ ಆಡುತ್ತಾ ಆಡುತ್ತಾ ಸವಕಲಾಗುತ್ತದೆ. ಆ ಭಾಷೆಯ ಮೂಲಕ ಹೊಸತೇನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ ಎನ್ನಿಸುತ್ತದೆ. ಹೊಸದನ್ನು ಹೇಳಿದರೂ ಹಳೆಯದರಂತೆ ಕೇಳಿಸುವ ಜಡತ್ವ ಒಂದು ಭಾಷೆಯನ್ನು ಒಂದು ಹಂತದಲ್ಲಿ ಅಮರಿಕೊಳ್ಳುತ್ತದೆ. ಆಗ ಆ ಭಾಷೆಯೇ ತನ್ನನ್ನು ತಿದ್ದಿ ತೀಡಿಕೊಂಡು ಕಾಯಕಲ್ಪ ಮಾಡಿಕೊಳ್ಳಬೇಕಾಗುತ್ತದೆ.
ಆದರೆ ಆ ಶಕ್ತಿ ಪ್ರಾದೇಶಕ ಭಾಷೆಗಳಿಗೆ ಅಷ್ಟು ಸುಲಭವಾಗಿ ದೊರಕುವುದಿಲ್ಲ. ಅದಕ್ಕೆ ಕಾರಣ ಅದನ್ನು ಬಲ್ಲವರ ಸಂಖ್ಯಾಮಿತಿ. ಸಂಸ್ಕೃತ ಮೃತಭಾಷೆಯಾದದ್ದು ಇದೇ ಕಾರಣಕ್ಕೆ. ತನ್ನ ವಿಪರೀತ ಮಡಿವಂತಿಕೆಯಿಂದಾಗಿ ಸಂಸ್ಕೃತ ಮತ್ತು ಕನ್ನಡ ಪದಗಳ ಸಂಧಿ ಕೂಡ ಅಕ್ಪಮ್ಯ ಅಪರಾಧವಾಗಿತ್ತು. ಸಂಸ್ಕೃತ ಭಾಷೆ ತನ್ನನ್ನು ಒಂದಿಷ್ಟೂ ಬಿಟ್ಟು ಕೊಡಲು ಒಪ್ಪಲಿಲ್ಲ. ಹೀಗಾಗಿ ಅದು ಕ್ರಮೇಣ ಬಳಕೆಯಿಂದಲೇ ಮಾಯವಾಯಿತು. ಲ್ಯಾಟಿನ್ ಭಾಷೆಗೆ ಆದದ್ದೂ ಅದೇ. ಆದರೆ ಕನ್ನಡವು ಸಂಸ್ಕೃತದಿಂದ ಪದಗಳನ್ನು ಕಡ ತಂದುಕೊಂಡಂತೆ ಇಂಗ್ಲಿಶ್ ಲ್ಯಾಟಿನ್ ಪದಗಳನ್ನು ಹೇಗೆಂದರೆ ಹಾಗೆ ತೆಗೆದುಕೊಂಡಿತು. ಹೇಗೆ ಬೇಕೋ ಹಾಗೆ ಬಳಸಿಕೊಂಡಿತು. ಇವತ್ತು ಇಂಗ್ಲಿಷಿಗೆ ಮಡಿವಂತಿಕೆಯೇ ಇಲ್ಲ. ಅದು ಕಂಗ್ಲಿಶ್ ಎಂಬ ಪದವನ್ನು ಯಾವ ಮುಜುಗರವೂ ಇಲ್ಲದೆ ಸ್ವೀಕರಿಸಬಲ್ಲದು. ಬಂಗಾಲಿಗಳು ಮಾತಾಡುವ ಇಂಗ್ಲಿಷನ್ನು ಬಿಂಗ್ಲಿಶ್ ಎಂದು ಕರೆಯಬಲ್ಲದು.
ಆ ಮಟ್ಟಿಗಿನ ಔದಾರ್ಯ ಕನ್ನಡಕ್ಕೆ ಸಾಧ್ಯವಾಗಲೇ ಇಲ್ಲ. ಇವತ್ತು ಹಿಂದಿಯಲ್ಲಿ ಬೆರೆತಷ್ಟು ಸಲೀಸಾಗಿ ಕನ್ನಡದ ಜೊತೆ ಇಂಗ್ಲಿಶ್ ಬೆರೆತರೆ ಕನ್ನಡಿಗರು ಸಂಕಟ ಪಡುತ್ತಾರೆ. ಸಿಂಪ್ಲಿ ಟಾಕಮಾಡಿ ಅನ್ನುವ ಬೆರಕಿ ಕನ್ನಡವನ್ನು ಬೈಯುತ್ತಾರೆ. ಆದರೆ ಸಿಂಪ್ಲಿ ಟಾಕಮಾಡಿ ಅಂತ ಮಾತಾಡುವುದೂ ಕನ್ನಡವೇ ಅನ್ನುವುದಾಗಲೀ, ಅದನ್ನು ನಿರಾಕರಿಸಿದರೆ ತಿರಸ್ಕರಿಸಿದರೆ ಅವರು ಪೂರ್ತಿ ಇಂಗ್ಲಿ್ಗೆ ಮೊರೆಹೋಗುತ್ತಾರೆ ಎನ್ನುವುದಾಗಲೀ ನಮಗೆ ಹೊಳೆಯುವುದೇ ಇಲ್ಲ.
ಇದಕ್ಕೆ ಬಹುತೇಕ ನಮ್ಮ ಪತ್ರಿಕೆಗಳ ಭಾಷೆ ಕಾರಣ. ಇಡೀ ಕನ್ನಡನಾಡಲ್ಲಿ ಯಾರೂ ಕೂಡ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ತೀರಿಕೊಂಡರು ಎನ್ನುವುದಿಲ್ಲ. ರೋಡ್ ಆಕ್ಸಿಡೆಂಟಲ್ಲಿ ಮೂರು ಜನ ಸತ್ತರಂತೆ ಅಂತಾರೆ. ಆದರೆ ಪತ್ರಿಕೆ ಇವತ್ತಿಗೂ ರಸ್ತೆ ಅಪಘಾತ ಎಂದೇ ಬಳಸುತ್ತದೆ. ಆಕ್ಸಿಡೆಂಟಲ್ಲಿ ಅನ್ನುವುದನ್ನು ಕೇಳುತ್ತಾ ಬೆಳೆದ ಮಗು ಪತ್ರಿಕೆ ಓದಲು ಆರಂಭಿಸಿದಾಗ ಅದಕ್ಕೆ ಇಂಗ್ಲಿಶ್ ಪತ್ರಿಕೆಯೇ ಹೆಚ್ಚು ಸುಲಭ ಮತ್ತು ಸಲೀಸಾಗಿ ಕಾಣುತ್ತದೆಯೇ ಹೊರತು ಕನ್ನಡ ಪತ್ರಿಕೆ ಅಲ್ಲ.
ಇಂಥ ಅನೇಕ ಉದಾಹರಣೆ ಕೊಡಬಹುದು. ಎಲ್ಲರೂ ನಾಳೆ ಕರೆಂಟಿಲ್ಲವಂತೆ ಎಂದು ಮಾತಾಡಿಕೊಳ್ಳುತ್ತಿದ್ದರೆ ನಾಳೆ ವಿದ್ಯುತ್ ಪೂರೈಕೆ ಸ್ಥಗಿತ ಎಂದು ಪತ್ರಿಕೆಗಳು ಬರೆಯುತ್ತವೆ.ರೋಡ್ ರಿಪೇರಿ ನಡೀತಿದೆ ಅನ್ನುವುದನ್ನು ರಸ್ತೆ ದುರಸ್ತಿಕಾರ್ಯ ಎಂದು ಬರೆದರೆ ಹೊಸಗನ್ನಡದ ಹುಡುಗರಿಗೆ ಹೇಗೆ ಅರ್ಥವಾಗಬೇಕು?
ಅದು ಅರ್ಥವಾಗಬೇಕಾದರೆ ಇಡೀ ನಾಡಿನ ಭಾಷೆಯೇ ಬದಲಾಗಬೇಕು. ಹಾಗಾಗುವುದಂತೂ ಸಾಧ್ಯವಿಲ್ಲ. ಕನಿಷ್ಠ ಹಳ್ಳಿಗಳಲ್ಲಾದರೂ ಅದು ಸಾಧ್ಯ ಎನ್ನುವುದು ಕೂಡ ಇವತ್ತು ಭ್ರಮೆ. ಯಾಕೆಂದರೆ ಎಲ್ಲಾ ಟೀವಿ ಚಾನಲ್ಲುಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳದ್ದು ಬೆಂಗಳೂರಿನ ಭಾಷೆಯೇ. ಎಲ್ಲರೂ ಸೀರಿಯಲ್ಲುಗಳನ್ನು ನೋಡುತ್ತಿದ್ದರೆ ಪತ್ರಿಕೆಗಳಲ್ಲಿ ಆವತ್ತು ಪ್ರಸಾರವಾಗುವ ಧಾರಾವಾಹಿಗಳ ಪ್ರಸ್ತಾಪ ಇರುತ್ತದೆ. ಧಾರಾವಾಹಿಯೇ ಸೀರಿಯಲ್ಲು ಅನ್ನುವುದು ಮಗುವಿಗೆ ಹೇಗೆ ಅರ್ಥವಾಗಬೇಕು?
ಇಂಥದ್ದೇ ಇನ್ನೊಂದು ಹಠಮಾರಿತನ ಕನ್ನಡ ಅಂಕಿಗಳಿಗೆ ಸಂಬಂಧಿಸಿದ್ದು. 639 ಎಂಬುದನ್ನು ಕನ್ನಡ ಅಂಕಿಯಲ್ಲಿ ಬರೆದ ಪತ್ರ ಬಂದಾಗ ಅದಕ್ಕಾಗಿ ಕೊರಿಯ್ ಹುಡುಗ ಪಡುವ ಕಷ್ಟ ಅವನಿಗೇ ಗೊತ್ತು. ಆತ ಒಂದು ದಿನವಿಡೀ ಬೀದಿ ಬೀದಿ ಅಲೆದು ಆ ಸಂಖ್ಯೆ ಎಷ್ಟೆಂದು ತಿಳಿಯದೇ ಒದ್ದಾಡಿ ಹಲವಾರು ಮಂದಿಯಿಂದ ಅದನ್ನು ಇಂಗ್ಲಿಶ್ ಅಂಕಿಗೆ ಅನುವಾದಿಸಿಕೊಂಡು ಸಂಕಟಪಟ್ಟಿದ್ದ.
ಇವೆಲ್ಲ ಕನ್ನಡದ ಕಷ್ಟಗಳು. ಕನ್ನಡ ಸಿನಿಮಾಗಳಂತೆ ಕನ್ನಡ ಸಾಹಿತ್ಯ ಕೂಡ ಕಷ್ಟದಲ್ಲಿದೆ. ಕಾರಣ ತುಂಬ ಸರಳವಾಗಿದೆ. ಇವತ್ತು ನಾವು ನೋಡುವ ಜಾಹೀರಾತುಗಳಲ್ಲಿ ಬರುವ ಮಾಡೆಲ್ಗಳೆಲ್ಲ ಹಿಂದಿ ಸಿನಿಮಾ ನಟನಟಿಯರು. ನಮಗೆ ಲಕಹಾಕಿಕೊಂಡು ಸ್ನಾನ ಮಾಡಿ ಎಂದು ಉಪದೇಶಿಸುವುದು ಐಶ್ವರ್ಯ ರೈ ಅಂದ ಮೇಲೆ ನಾವು ಅವಳ ಸಿನಿಮಾವನ್ನೇ ನೋಡುವುದಕ್ಕೆ ಹೋಗುತ್ತೇವೆ. ನಮ್ಮ ಕನ್ನಡದ ನಟನಟಿಯರು ಯಾವ ಜಾಹೀರಾತಲ್ಲಾದರೂ ಕಾಣಿಸಿಕೊಂಡದ್ದನ್ನು ನೀವು ನೋಡಿದ್ದೀರಾ? `ಆರೋಕ್ಯ' ಹಾಲು ಬಿಟ್ಟರೆ!
ಹಾಗೆ ಟೀವಿ ಧಾರಾವಾಹಿಗಳಲ್ಲಿ ಯಾವ ಪಾತ್ರವಾದರೂ ಕನ್ನಡದ ಕಾದಂಬರಿಗಳನ್ನೋ ಪತ್ರಿಕೆಗಳನ್ನೋ ಓದುವುದನ್ನು ನೋಡಿದ್ದೀರಾ? ಯಾವುದಾದರೂ ಟೀವಿ ಸೀರಿಯಲ್ಲಿನ ಪಾತ್ರ ಎಸ್ ಎಲ್ ಭೆರಪ್ಪನವರ `ಮಂದ್ರ' ಓದಿದೆ ಎಂದಿದ್ದು ನಿಮಗೆ ಗೊತ್ತಾ? ಅವರು ಓದುವುದು ಸಿಡ್ನಿ ಶೆಲ್ಡನ್ನನ್ನೋ, ಹ್ಯಾರಿ ಪಾಟರನ್ನೋ. ಅಂದ ಮೇಲೆ ಅದನ್ನು ನೋಡುವವರು ಯಾಕೆ `ಮಂದ್ರ' ಓದುತ್ತಾರೆ?
-3-
ಇವೆಲ್ಲ ಪ್ರಶ್ನೆಗಳಲ್ಲ. ಇವತ್ತಿನ ಸ್ಥಿತಿಯನ್ನು ವಿವರಿಸುವುದಕ್ಕೆ ಇಷ್ಟೆಲ್ಲ ಹೇಳಬೇಕಾಯಿತು. ಕನ್ನಡದ ಓದುಗರು ಕಡಿಮೆಯಾಗಿದ್ದಾರೆ. ಕಾವ್ಯವನ್ನೂ ಸಣ್ಣಕತೆಯನ್ನೂ ಕಾದಂಬರಿಗಳನ್ನೂ ಅವರು ಓದುತ್ತಿಲ್ಲ ಎಂಬ ಚರ್ಚೆ ಇತ್ತೀಚೆಗೆ ಮುನ್ನೂರ ಹದಿನಾರನೇ ಸಾರಿ ನಡೆಯಿತು. ಪುಸ್ತಕಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಕೊಂಡು ಓದುವವರಿಲ್ಲ ಎಂಬ ವಾದವನ್ನು ಹಲವು ಲೇಖಕರು ಮುಂದಿಟ್ಟರು. ಅದೂ ಒಂದು ಅರ್ಥದಲ್ಲಿ ನಿಜವೇ? ರಾಘವೇಂದ್ರ ಪಾಟೀಲರ 141 ಪುಟದ ಕಾದಂಬರಿಯ ಬೆಲೆ 120 ರುಪಾಯಿ.
ಹಾಗಂತ ಬೆಲೆ ಕಡಿಮೆ ಇಟ್ಟರೆ ಪುಸ್ತಕಗಳು ಖರ್ಚಾಗಿಬಿಡುತ್ತವೆ ಅನ್ನುವುದೂ ಸರಿಯಲ್ಲ. ಕುವೆಂಪು ಬರೆದ `ರಾಮಾಯಣ ದರ್ಶನಂ' ಅವೆನ್ಯೂ ರಸ್ತೆಯಲ್ಲಿ ಹತ್ತು ರುಪಾಯಿಗೆ ಸಿಗುತ್ತದೆ. ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯ ಇಪ್ಪತ್ತೋ ಇಪ್ಪತ್ತೈದೋ ಪ್ರತಿಗಳು ಮಲ್ಲೇಶ್ವರಂನ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ನಾಲ್ಕಾರು ವರುಷಗಳಿಂದ ಬಿದ್ದಿದೆ. ಜನ ಎತ್ತಿ ನೋಡಿ ಆಘ್ರಾಣಿಸಿ ಹಾಗೆ ಬಿಟ್ಟು ಹೋಗುತ್ತಾರೆ. ಐದು ರುಪಾಯಿಗೆ ಕಾರಂತರ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿ ಸಿಗುತ್ತದೆ ಎಂಬ ಕಾರಣಕ್ಕಾದರೂ ಅದನ್ನು ಮನೆಗೆ ಒಯ್ಯುವುದಿಲ್ಲ.
ಕಾರಣ ಇಷ್ಟೇ; ಸಹೃದಯ ಓದುವ ವರ್ಗ ಮೂರು ಸೀಳಾಗಿದೆ. ಹಿಂದೆ ಓದದೇ ಇದ್ದವರು ಇಂದೂ ಓದುತ್ತಿಲ್ಲ. ಹಿಂದೆ ಓದುತ್ತಿದ್ದವರಲ್ಲಿ ಅರ್ಧದಷ್ಟು ಮಂದಿ ಟೀವಿಯ ಮುಂದೆ ಪ್ರತಿಷ್ಠಾಪನೆ ಆಗಿದ್ದಾರೆ. ಇನ್ನರ್ಧ ಮಂದಿ ಇಂಗ್ಲಿಶ್ ಕೃತಿಗಳನ್ನು ಓದುವುದಕ್ಕೆ ಶುರುಮಾಡಿದ್ದಾರೆ. ಮತ್ತೊಂದಷ್ಟು ಕಟ್ಟಾ ಓದುಗರು ತೀರಿಕೊಂಡಿದ್ದಾರೆ.
ಇವೆಲ್ಲವನ್ನೂ ಅರ್ಥಮಾಡಿಕೊಳ್ಳದೇ ಓದುಗರು ಕಡಿಮೆ ಆಗಿದ್ದಾರೆ ಅನ್ನುವುದು ತಪ್ಪಾಗುತ್ತದೆ. ಅಂದ ಹಾಗೆ ಸರ್ಕಾರಿ ಅಂಕಿಅಂಶಗಳ ಪ್ರಕಾರ ಓದುಗರ ಸಂಖ್ಯೆ ಅತೀವ ಹೆಚ್ಚಾಗಿದೆ. ಯಾಕೆಂದರೆ ಸರ್ಕಾರ ತನ್ನ ಗ್ರಂಥಾಲಯಗಳಿಗಾಗಿ ಕೊಳ್ಳುವ ಪುಸ್ತಕಗಳ ಸಂಖ್ಯೆ ಆರು ಪಟ್ಟು ಹೆಚ್ಚಿದೆ.
ಆದರೆ ಗ್ರಂಥಾಲಯಗಳ ಜಾಗ ಅಷ್ಟೇ ಇದೆ.
-4-
ಮತ್ತೊಂದು ಮಕ್ಕಳ ಗೀತೆಯೊಂದಿಗೆ ಮುಗಿಸೋಣ. ಪಂಜೆ ಮಂಗೇಶರಾಯರು ಬರೆದ ಈ ಸಾಲುಗಳನ್ನು ಓದುತ್ತಿದ್ದರೆ ಬಾಲ್ಯದಲ್ಲೂ ರೋಮಾಂಚನವಾಗುತ್ತಿತ್ತು. ಕಾರಣ; ಅದು ಅರ್ಥವಾಗುತ್ತಿತ್ತು. ಅರ್ಥವಾಗುವಂತೆ ತಿಳಿಸಿ ಹೇಳುವುದಕ್ಕೆ ಹೆತ್ತವರಿಗೂ ಮೇಷ್ಟರಿಗೂ ಗೊತ್ತಿತ್ತು.
ಆದರೆ ಇವತ್ತು ಈ ಸಾಲುಗಳ ಅರ್ಥ ಹೇಳಬಲ್ಲ ಮೇಷ್ಟರುಗಳು ಎಷ್ಟು ಸಿಗುತ್ತಾರೆ ಹೇಳಿರಣ್ಣ?
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು
ಸವರಿ ಆನೆಯ ಸೊಂಡಿಲಿನ ರಣಕೊಂಬನಾರ್ ಭೋರ್ಗರೆದರೋ
ಸವಿದು ಸವೆಯದ ಸಾಹಸತ್ವದ ಕ್ಪಾತ್ರ ಬೇಟೆಯ ಮೆರೆದರೋ
ಅವರು ಸೋಲ್ ಸಾವರಿಯರು
ಅವರೆ ಕಡುಗಲಿ ಗರಿಯರು
ಅವರು ಕೊಡಗಿನ ಹಿರಿಯರು!
ಇದನ್ನು ಓದಿದ ನಂತರ ಭಾರತೀಸುತ ಬರೆದ ಹುಲಿಯ ಹಾಲಿನ ಮೇವು ಕಾದಂಬರಿ ಓದಿದರೆ ಆಗುವ ರೋಮಾಂಚನದ ಬಗ್ಗೆ ಹೇಳುವುದು ವ್ಯರ್ಥ.
ನಾವು ಮತ್ತೆ ಬೊಮ್ಮನ ಹಳ್ಳಿಯ ಕಿಂದರಿಜೋಗಿಯಿಂದ ಆರಂಭಿಸಬೇಕು ಅನ್ನಿಸುವುದಿಲ್ಲವೇ?
12 comments:
Preetiya Jogi,
On the lighter side...I thoroughly enjoyed singing all the old times poems and remembered all of them and also the ones like 'Panjarada Pakshi' and 'Neerologirdum Bemarthan UragaPathakam' to the dot..thank you.
We were taught to sing all the poems rather than just narrate in my school and so...even if I want to I will never forget the poems. My all time favourites Ancheya Anna, Thirukana Kanasu, mandyada Sakkare Karkane, Haraku Batteya Thitukananthe...I think these poems are relevant to any age and time...
Now the serious part...yes...it is sad that the kannada poems have been forgotten..and seems to have lost their charm in the present way of life...but let us also make a reality check..how many young mothers have heard the songs themselves to be able to pass it on to the next generation? BTW, "hot cross buns" still makes sense in Europe, as it is prepared and sold to this day.
But my POV is ..if we modify our kannada to incorporate the daily used Kanglish, we would be better off speaking English.
ನಿಮ್ಮ ಮಾತು ನಿಜ.
ಆದರೆ ನಿಮ್ಮ ಹೆಸರು ಹೇಳೋದು ಮರೆತಿದ್ದೀರಿ
-ಜೋಗಿ
Jogi,
I enjoyed reading it. It is a good piece. Continue good work. Thank you.
-Parameshwar Gundkal
ಥ್ಯಾಂಕ್ಯೂ ಸರ್,
ಎಲ್ಲಿದ್ದೀರಿ, ಹೇಗಿದ್ದೀರಿ. ಸಿನಿಮಾ ಕೆಲಸ ಎಲ್ಲಿಗೆ ಬಂತು.
ಎಲ್ಲೂ ಕಾಣಿಸ್ಕೋತಿಲ್ಲವಲ್ಲ ಸಾಹೇಬರು.
-ಜೋಗಿ
ಬಳಕೆಯಲ್ಲಿರುವ ಭಾಷೆಯ ಸ್ವರೂಪದ ಕುರಿತಾದ ನಿಮ್ಮದೇ ಚಿಂತನೆಯ ಮತ್ತೊಂದು ಮುಖ, ಮತ್ತೊಂದು ಲೇಖನ.
I enjoyed this :-)
ಭಾಷೆ ಹಾಗೂ ಓದುಗರ ಬಗ್ಗೆ ವಿಶ್ಲೇಷಣೆ ಚೆನ್ನಾಗಿದೆ.
ಕೆಲವು ಪತ್ರಿಕೆಗಳು ಈಗಲೂ ಹಳೇ ಶಬ್ದಗಳಿಗೆ ಅಂಟಿಕೊಂಡಿದ್ದು ಯಾಕೆ? ಅಂತ ಗೊತ್ತಾಗುತ್ತಿಲ್ಲ. ಪ್ರಮುಖ ದಿನಪತ್ರಿಕೆಯೊಂದರಲ್ಲಿ `ಅಸು ನೀಗಿದವರು' ಎಂಬುದನ್ನು ಬಳಸೋದಿಲ್ಲ. ಅದು ಭಾಷೆಯ ದೃಷ್ಟಿಯಿಂದ ಸರಿ ಅಲ್ಲವಂತೆ. ಆದರೆ ಅದೇ ಪತ್ರಿಕೆಯಲ್ಲಿ ಪ್ರಕಟವಾಗುವ `ವೈಫಲ್ಯತೆ' (ಸರಿಯಾದ ಶಬ್ದ- ವೈಫಲ್ಯ ಅಥವಾ ವಿಫಲತೆ), ಕೌಶಲ್ಯತೆ (ಸರಿ ಶಬ್ದ- ಕುಶಲತೆ ಅಥವಾ ಕೌಶಲ) ಎಂಬೆಲ್ಲ ಪದಗಳನ್ನು ಕಂಡಾಗ ಓದುಗರು ಏನು ಮಾಡಬೇಕು? ಇಂಥ (ಉದಾ: ಇಂಥದ್ದೇ...) ಹಾಗೂ ಇಂತ (ಉದಾ: ಅದಕ್ಕಿಂತ...) ಶಬ್ದಗಳ ಮಧ್ಯೆ ವ್ಯತ್ಯಾಸ ಗೊತ್ತಿಲ್ಲದ ಪತ್ರಕರ್ತರು ಸುದ್ದಿ ಬರೆದಾಗ, ಈ ಗೊಂದಲ ಇನ್ನಷ್ಟು ಹೆಚ್ಚಾಗುತ್ತದೆ!
- ಆತೀಪಿ
ಒಂದು ಒಳ್ಳೆಯ ಚಿಂತನೆ ಸರ್..
ನಿಮ್ಮ ಈ ಬರಹ ಓದಿದ ತಕ್ಷಣ ನನಗೆ ನೆನಪಾದದ್ದು, ಕೆಲವು ತಿಂಗಳುಗಳ ಹಿಂದೆ ನಾನು ನೋಡಿದಂತ ಒಂದು ಘಟನೆ. ಜಯನಗರದ ಹೋಟೆಲ್ ಒಂದರಲ್ಲಿ ನನ್ನ ಎದುರುಗಡೆ ಒಂದು ಪುಟ್ಟ ಸಂಸಾರ ಕುತ್ಕೊಂಡಿತ್ತು. ಗಂಡ,ಹೆಂಡತಿ,ಪುಟ್ಟ ಮಗು. ಎನೋ ಕಾರಣಕ್ಕೆ ಆ ಮಗು ಅಳುತಿತ್ತು, "ಅಮ್ಮಾ, ನನಗೆ ಅದು ಬೇಕು...." ಅಂತ.. ಅದಕ್ಕೆ ಅದರ ತಾಯಿ, "what chinnu..? u should not touch those things. we'll take something else outside..!"
ಪಾಪ ಆ ಮಗು ಕನ್ನಡದಲ್ಲಿ ಎನೊ ಕೇಳ್ತ ಇದ್ರೆ, ಕನ್ನಡನೇ ಗೊತ್ತಿಲ್ವೇನೋ ಅನ್ನೋ ಹಾಗೆ ತಾಯಿ ಇಂಗ್ಲಿಷ್ ಅಲ್ಲಿ ಉತ್ತರಿಸುತಿದ್ದಳು. ಇಷ್ಟೊತ್ತಿಗೆ ಆ ಮಗುಗೆ ಬರ್ತಿದ್ದ ಅಲ್ಪ ಸ್ವಲ್ಪ ಕನ್ನಡನೂ ಮರೆತ್ಹೊಗಿರಬಹುದು. ಹೀಗೆ ಕನ್ನಡ ಮಾತಾಡ್ಲಿಕ್ಕೆನೇ ಬಿಡ್ಲಿಲ ಅಂದ ಮೇಲೆ ಇನ್ನು ಆ ಸುಂದರ ಪದ್ಯಗಳೆಲ್ಲಾ ಅವುಗಳ ಕಲ್ಪನೆಗೆ ಸಿಗಲಿಕ್ಕೆ ಹೇಗೆ ಸಾಧ್ಯ??
ಜೋಗಿ, `ಪುಣ್ಯಕೋಟಿ'ಯ ಹಾಡು ಕೂಡ ಎಷ್ಟೊಂದು ಮೌಲ್ಯಗಳನ್ನು ಪ್ರತಿಪಾದಿಸುತ್ತಿತ್ತಲ್ಲವೇ? ನನಗಿನ್ನೂ ನೆನಪಿದೆ, ಪುಣ್ಯಕೋಟಿಯ ಹಾಡಿನ ಅರ್ಥವನ್ನು ತಿಳಿ ತಿಳಿಯಾಗಿ ಬಿಡಿಸಿಟ್ಟ ಮೇಷ್ಟ್ರ ಎದುರು ನಾವೆಲ್ಲ ಗಳಗಳನೆ ಅತ್ತಿದ್ದೆವು. ಒಂದರ್ಥದಲ್ಲಿ, ಆಟಕ್ಕಿಂತ ಪಾಠ, ಪ್ರವಚನಗಳೆಲ್ಲ ಯಾಕೆ ಬೇಕು ಎಂದುಕೊಂಡಿದ್ದ ಆ ಪುಟ್ಟ ವಯಸ್ಸಿನಲ್ಲಿ ಪುಣ್ಯಕೋಟಿಯ ಹಾಡು ಬಿರುಗಾಳಿಯನ್ನೆಬ್ಬಿಸಿತ್ತು; ಪಾಠದ ಕುರಿತು ಮಕ್ಕಳಲ್ಲಿ ಆಸಕ್ತಿಯನ್ನೂ ಬೆಳೆಸುವಂಥ ಶಕ್ತಿ ಅಂಥ ಹಾಡುಗಳಲ್ಲಿತ್ತು. ಆದರೆ ಈಗ ಪುಣ್ಯಕೋಟಿಯ ಹಾಡು ಎಲ್ಲಿದೆ? ಸರ್ಕಾರಿ ಕೃಪಾಪೋಷಿತ ಕನ್ನಡ ಶಾಲೆಗಳಿಂದಲೂ ಪುಣ್ಯಕೋಟಿಯ ಹಾಡು ಮಾಯವಾದಂತಿದೆ.
-suresh K.
ಗ್ರೇಟ್!
ನಿನ್ನ ಬ್ಲಾಗು ನೊಡುತ್ತಾ ನೋಡುತ್ತಾ ನಾನೂ ನಿನ್ನ ಫಾನ್ ಆಗಿಬಿಟ್ಟೆ ಕಣೋ.
ಮಾರಾಯಾ ಆ ದಿನ ನಾವು ಸ್ಕೂಲಿOದ ಬರುತ್ತಾ ಕೂಟೇಲು ಸಂಕದ ಬಳಿ ಕೂತು ಕತೆ, ಕವನ,ವಿಮರ್ಶೆ ಪತ್ರಿಕೆ ಎಂದೆಲ್ಲಾ ಗಂಟೆಗಟ್ಟಲೆ ಮಾತಾಡುತ್ತಿದ್ದುದು,ನಾನೂ ನೀನೂ ಹಠಕ್ಕೆ ಬಿದ್ದಂತೆ ಎಂದು ಕತೆ ಬರೆದು ಒಬ್ಬರಿಗೊಬ್ಬರು ತೋರಿಸಿ ಪರಸ್ಪರ ವಿಮರ್ಶೆ ಬರೆದು ಹೊಗಳಿಸಿಕೊಂಡು ಪರಮಾನಂದಿತರಾಗುತ್ತಿದ್ದುದು.. ಈಗ ಭರ್ಜರಿ ನೆನಪಾಗುತ್ತಾ ಇದೆ. ಆಗಲೇ ನಾನು ಅಂದುಕೊಂಡಿದ್ದೆ, ನೀನು ಗ್ರೇಟ್ ಆಗುತ್ತೀ ಅಂತ..
ನೀನು ಕೊನೆಗೂ ಅದನ್ನು ನಿಜ ಮಾಡಿದೆ.ಬಡ್ಡ !
-ಕುಂಟಿನಿ
Sir,
i remebered an old Kannada rhyme which runs like this:
tiruviri takali
hiriyiri hinji
tiruviri takali
giri giri giri
is the padya correct?? anybody who knows full version?
Ittichege marete hoguttiruva keluvu kannada rhymegalannu nenapisikottiddakke thanx. english balasikollade naavenu madalu sadhyavillave? Aa bagge enadru yochisi sir
If
Hot cross buns
Hot cross buns
One a penny
Two a penny
Hot cross buns
....
could be murmured by our nursery kids what is wrong with
ರೊಟ್ಟಿ ಅಂಗಡಿ ಕಿಟ್ಟಪ್ಪ
ನನಗೊಂದ್ ರೊಟ್ಟಿ ತಟ್ಟಪ್ಪ
ಪುಟಾಣಿ ರೊಟ್ಟಿ
ಕೆಂಪಗೆ ಸುಟ್ಟಿ
etc....
If penny can be understood, why not ಕಾಸು?
Post a Comment